ಮಕ್ಕಳಿಂದ ಸಿಗಬೇಕಾದ ಜೀವನಾಂಶದ ಆದೇಶವಿದ್ದರೂ ಸಿಗದೆ ದಿನ ಕಳೆಯಲು ಇನ್ನೊಬ್ಬರ ಕೈಕಾಲು ಹಿಡಿಯಬೇಕಾದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದ ವೃದ್ದ ತಾಯಿ ಮನನೊಂದು ಮನಸ್ಥಿತಿಯನ್ನು ಕಳೆದುಕೊಂಡು ನ್ಯಾಯಾಲಯದ ಮೆಟ್ಟಿಲಲ್ಲಿ ರೋದಿಸುತ್ತಿದ್ದು ಆಕೆಯನ್ನು ಹಾಗೂ ಆಕೆಯ ಅಸಹಾಯಕ ಮಗನನ್ನು ವಿಶುಶೆಟ್ಟಿ ಅಂಬಲಪಾಡಿಯವರು ತುರ್ತು ಚೇತರಿಕೆಗಾಗಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ಶಂಕರಪುರದ ನಿವಾಸಿ ಗ್ರೇಸಿ ಡಿಸಿಲ್ವಾ (80 ವರ್ಷ) ಹಾಗೂ ಮಗ ಅಸಹಾಯಕರಾದವರು. ನಾಲ್ಕು ದಿನಗಳ ಹಿಂದೆ ವೃದ್ದ ಮಹಿಳೆಯನ್ನು ರಕ್ಷಿಸಿ ವಿಶುಶೆಟ್ಟಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಿದ್ದರು. ಇದೀಗ ವೃದ್ದ ಮಹಿಳೆ ಉಟ್ಟ ಉಡುಪಿನಲ್ಲಿ ಪುನಃ ನ್ಯಾಯಾಲಯಕ್ಕೆ ಬಂದಿದ್ದು ವಿಶುಶೆಟ್ಟಿಯವರು ಸಖಿ ಸೆಂಟರಿನ ಕಾನೂನು ಸಲಹೆಗಾರರಾದ ಅಂಜಲಿನ್ ಮೆಂಡೋನ್ಸಾ ಹಾಗೂ ಮಹಿಳಾ ಪೋಲಿಸರ ಸಹಾಯದಿಂದ ರಕ್ಷಿಸಿ ಜೊತೆಗೆ ಶಂಕರಪುರ ಮನೆಯಲ್ಲಿ ಉಪವಾಸವಿದ್ದ ಮಗನನ್ನು ಕರೆತಂದು ದಾಖಲಿಸಿದ್ದಾರೆ.
ವೃದ್ದೆಯ ಬ್ಯಾಂಕಿನಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಮಕ್ಕಳು ಮೋಸ ಮಾಡಿ ತೆಗೆದುಕೊಂಡು ನನ್ನನ್ನು ನಡು ದಾರಿಯಲ್ಲಿ ಬಿಟ್ಟಿದ್ದಾರೆ. ಸ್ಪಂದಿಸುತ್ತಿದ್ದ ಓರ್ವ ಕೂಡ ಈಗ ಸ್ಪಂದಿಸುತ್ತಿಲ್ಲ. ಎಂಟು ಮಕ್ಕಳಿದ್ದರೂ ಅನ್ನ ಆಹಾರವಿಲ್ಲದೆ ಉಪವಾಸದಲ್ಲಿ ಬದುಕುವಂತ ಪರಿಸ್ಥಿತಿ ನನಗೆ ಬಂದಿದೆ. ಆರೋಗ್ಯ ಕೂಡಾ ಹದಗೆಟ್ಟಿದೆ. ಈ ಬಗ್ಗೆ ಮಾನ್ಯ ಕುಂದಾಪುರ ಉಪ ವಿಭಾಗಾಧಿಕಾರಿಯವರ ನ್ಯಾಯಲಯದಿಂದ ನನಗೆ ಮಕ್ಕಳು ನೀಡಬೇಕಾದ ಜೀವನಾಂಶ ಹಣ ಹಾಗೂ ಆಶ್ರಯದ ಬಗ್ಗೆ 5 ವರ್ಷಗಳ ಹಿಂದೆ ಆದೇಶ ಆಗಿದೆ ಎಂದಿದ್ದಾರೆ.
ತೀರಾ ಅಸಹಾಯಕ ಸ್ಥಿತಿಯಲ್ಲಿ ಬದುಕುತ್ತಿದ್ದ ಇವರಿಗೆ ಕೂಡಲೇ ನ್ಯಾಯ ಸಿಗಲಿ ಹಾಗೂ ಇವರು ವಾಸಿಸುತ್ತಿದ್ದ ಮನೆಯ ಸುತ್ತ ಹುಲ್ಲು ದಟ್ಟವಾಗಿ ಬೆಳೆದಿದ್ದು ನೆಮ್ಮದಿಯ ಜೀವನಕ್ಕೆ ಸಂಬಂಧಪಟ್ಟ ಇಲಾಖೆ ಕೂಡಲೇ ಸ್ಪಂದಿಸುವಂತೆ ವಿಶುಶೆಟ್ಟಿಯವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾಹಿತಿ ಹಂಚಿಕೊಂಡ ಸಮಾಜ ಸೇವಕ ವಿಶು ಶೆಟ್ಟಿ, ವೃದ್ದೆಯು ಉತ್ತಮ ಆರೋಗ್ಯವಂತರಾಗಿದ್ದರೂ ಸರಿಯಾದ ಆಹಾರವಿಲ್ಲದೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರ ದೇಹದಲ್ಲಿ ರಕ್ತದ ಅಂಶ ಬಹಳಷ್ಟು ಕುಸಿದು ಅಪಾಯದ ಅಂಚಿನಲ್ಲಿದ್ದಾರೆ ಎಂದು ವೈದ್ಯಕೀಯ ಪರೀಕ್ಷೆಯಿಂದ ತಿಳಿದು ಬಂದಿದೆ. ಇಂತಹ ಅದೆಷ್ಟೋ ಪ್ರಕರಣಗಳಲ್ಲಿ ಹಿರಿಯ ನಾಗರಿಕರಿಗೆ ನ್ಯಾಯಾಲಯದ ಆದೇಶವಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಆದೇಶ ಪಾಲನೆ ಮಾಡದೇ ಕರ್ತವ್ಯ ಲೋಪ ಮಾಡುವುದು ಹಿರಿಯರಿಗೆ ಮಾಡುವ ದ್ರೋಹ. ಇನ್ನಾದರು ಅದೆಷ್ಟೋ ಆದೇಶವಾದ ಹಿರಿಯ ನಾಗರಿಕರ ಪ್ರಕರಣಗಳು ಕಾರ್ಯರೂಪಕ್ಕೆ ಕೂಡಲೇ ಬರುವಂತಾಗಲಿ ಎಂದು ಹೇಳಿದರು.





