ದೇಶದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಚುನಾವಣಾಧಿಕಾರಿಗಳು ಲೋಕಸಭೆ ಚುನಾವಣಾ ಫಲಿತಾಂಶ ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆಸಬೇಕೆಂದು ಕಲಬುರಗಿಯ ಎದ್ದೇಳು ಕರ್ನಾಟಕ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಎದ್ದೇಳು ಕರ್ನಾಟಕ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿ ಮಾತನಾಡಿ, “ದೇಶದ ರಾಜಕಾರಣ ಬಹಳ ಸೂಕ್ಷ್ಮ ಮತ್ತು ಆತಂಕಕಾರಿ ಹಂತಕ್ಕೆ ತಲುಪಿದೆ. ಚುನಾವಣಾ ಆಯೋಗ ಜನರ ವಿಶ್ವಾಸ ಕಳೆದುಕೊಂಡಿದೆ. ಬಿಜೆಪಿ ನೈತಿಕವಾಗಿ ಅಧಃಪತನಗೊಂಡ ಪ್ರಜಾತಂತ್ರ ವಿರೋಧಿಯಾಗಿದೆ” ಎಂದು ಅಸಮಧಾನ ವ್ಯಕ್ತಪಡಿಸಿದರು.
“ಚುನಾವಣಾ ಆಯೋಗದ ನಿರ್ಲಜ್ಜ ಪಕ್ಷಪಾತ ಹಾಗೂ ಬಿಜೆಪಿ ಪಕ್ಷದ ಸರ್ವಾಧಿಕಾರಿ ನಡತೆಯ ಹಿನ್ನೆಲೆ ಚುನಾವಣೆ ಮತ ಎಣಿಕೆ ಬಗ್ಗೆ ತೀವ್ರವಾದ ಆತಂಕವಿದೆ. ಬಿಜೆಪಿ ಸೋಲಬಹುದು, ಆದರೆ ಸುಲಭವಾಗಿ ಅಧಿಕಾರ ಹಸ್ತಾಂತರಿಸುವುದಿಲ್ಲ. ಮತ ಎಣಿಕೆಯಲ್ಲಿ ಮೋಸ, ಜನಾದೇಶದ ಉಲ್ಲಂಘನೆ ಹಾಗೂ ಕುದುರೆ ವ್ಯಾಪಾರದ ಸಾಧ್ಯತೆವಿದೆ. ಹಾಗಾಗಿ ನಿಷ್ಪಕ್ಷಪಾತ ಮತ ಎಣಿಕೆ ನಡೆಸಲು ಜಿಲ್ಲಾಧಿಕಾರಿಗಳು ಎಚ್ಚರವಹಿಸಬೇಕು” ಎಂದರು.
“ಬಿಜೆಪಿಯ ದುಷ್ಟ ಸಂಚುಗಳನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರಗೈದು ಬಯಲುಗೊಳಿಸಬೇಕು. ಮತ ಎಣಿಕೆಯಲ್ಲಿ ನಡೆಯಬಹುದಾದ ವಂಚನೆಯ ಬಗ್ಗೆ ನಿಗರಾಣಿ ವಹಿಸಲು ಹಾಗೂ ಲೋಪವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ರಾಷ್ಟ್ರಮಟ್ಟದಲ್ಲಿ “ನಾಗರಿಕ ನಿಗರಾಣಿ ಆಯೋಗʼ ರಚಿಸುವುದು. ಇಡೀ ಮತ ಎಣಿಕೆಯ ಪ್ರಕ್ರಿಯೆ ಮೇಲೆ ಮೇಲ್ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟಿಗೆ ಅಪೀಲ್ ಮಾಡುವುದು. ರಾಜಕೀಯ ಪಕ್ಷಗಳಿಗೆ ಅವರ ಕರ್ತವ್ಯಗಳ ಮನವರಿಕೆ ಮಾಡಿಸಬೇಕು” ಎಂದು ಒತ್ತಾಯಿಸಿದರು.
ನಮ್ಮ ಬೇಡಿಕೆಗಳಿಗೆ ಹೊರತಾಗಿಯೂ ಫಲಿತಾಂಶದ ವೇಳೆ ದೊಡ್ಡ ಮಟ್ಟದ ಅವ್ಯವಹಾರಗಳಿಗೆ ಹಾಗೂ ಜನಾದೇಶ ಉಲ್ಲಂಘಿಸಲು ಸರ್ಕಾರ ರಚಿಸುವ ಪ್ರಯತ್ನಗಳು ನಡೆದರೆ ದೇಶವ್ಯಾಪಿ ದೊಡ್ಡ ಮಟ್ಟದಲ್ಲಿ ಸತ್ಯಾಗ್ರಹ ಹೂಡಲಾಗುವುದು ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ ಚಲೋ | ಮನವಿ ಸ್ವೀಕರಿಸದ ಜಿಲ್ಲಾಧಿಕಾರಿ; ನೂರಾರು ಹೋರಾಟಗಾರರು ಡಿಸಿ ಕಚೇರಿಗೆ ಮುತ್ತಿಗೆ
ಈ ಸಂದರ್ಭದಲ್ಲಿನಾಗರಿಕ ಸಮಾಜದ ಪ್ರಮುಖರಾದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ ಥಂಬೆ, ಎದ್ದೇಳು ಕರ್ನಾಟಕ ಜಿಲ್ಲಾ ಸಂಯೋಜಕ ಅಬ್ದುಲ್ ಖಾದರ್ ಸೇರಿದಂತೆ ಸಂಧ್ಯಾರಾಜ ಸ್ಯಾಮೂವೆಲ್, ಸಂತೋಷ ತೆಗನ್ನೂರ್, ರಾಜೇಂದ್ರ ರಾಜವಾಳ, ವಿಕ್ರಮ್ ತೇಜಸ್, ನಾಗೇಶ್ ಹರಳಯ್ಯ, ಭವಾನಿ ಪ್ರಸಾದ್, ಅಲ್ಲಾವುದ್ದಿನ್ ಮೊಹ್ಮದ್, ಗೀತಾ ಹೊಸಮನಿ ಇದ್ದರು.





