ಕೇರಳದ ವಯನಾಡಿನ ಭೂಕುಸಿತದಲ್ಲಿ ಮಂಡ್ಯ ಜಿಲ್ಲೆ, ಕೆಆರ್ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಕುಟುಂಬ ಸಿಲುಕಿಕೊಂಡಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದು, ಮೂವರು ಅಪಾಯಕ್ಕೆ ಸಿಲುಕಿದ್ದಾರೆ.
ಜಗದೀಶ್ ಮತ್ತು ಕುಳ್ಳಮ್ಮ ದಂಪತಿ ಪುತ್ರಿ ಝಾನ್ಸಿರಾಣಿ, ಅಳಿಯ ಅನಿಲ್ಕುಮಾರ್, ಈತನ ತಂದೆ ದೇವರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ದುರಾದೃಷ್ಟವಶಾತ್ ದುರಂತದಲ್ಲಿ ಮೊಮ್ಮಗ ನಿಹಾಲ್ (3), ಅನಿಲ್ಕುಮಾರ್ ತಾಯಿ ಲೀಲಾವತಿ (55) ಸಾವಿಗೀಡಾಗಿದ್ದಾರೆ.
ನಂಜನಗೂಡು ತಾಲೂಕಿನ ಸರಗೂರು ಗ್ರಾಮದ ಅನಿಲ್ಕುಮಾರ್ ಎಂಬುವರಿಗೆ 2020ರಲ್ಲಿ ಮಗಳು ಝಾನ್ಸಿರಾಣಿಯನ್ನು ವಿವಾಹ ಮಾಡಿಕೊಡಲಾಗಿತ್ತು. ಅವರ ಕುಟುಂಬ ಹಲವು ವರ್ಷಗಳಿಂದ ಕೇರಳದ ಮುಂಡಕಾಯಿ ಗ್ರಾಮದಲ್ಲಿ ಬದುಕು ಕಟ್ಟಿಕೊಂಡಿದ್ದರು. ಅನಿಲ್ಕುಮಾರ್ ಜೀಪ್ ಚಾಲಕ ವೃತ್ತಿ ಮಾಡುತ್ತಿದ್ದರು. ಮುಂಡಕಾಯಿ ಗ್ರಾಮದಲ್ಲಿ ಸೋಮವಾರ ರಾತ್ರಿ ಭೂಕುಸಿತದಲ್ಲಿ ಕುಟುಂಬ ಸದಸ್ಯರು ಸಿಲುಕಿಕೊಂಡಿದ್ದರು.
ಇದನ್ನು ಓದಿದ್ದೀರಾ? ವಯನಾಡ್ ಭೂಕುಸಿತ | ಮೃತರ ಸಂಖ್ಯೆ 143ಕ್ಕೆ ಏರಿಕೆ; ಕರ್ನಾಟಕದ ಆರು ಮಂದಿ ಸಾವು
ಮಗಳು, ಅಳಿಯ, ಅಳಿಯನ ತಂದೆಯನ್ನು ಕಾರ್ಯಾಚರಣೆ ಮಾಡಿ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇತ್ತ ಮೊಮ್ಮಗ, ಅಳಿಯನ ತಾಯಿ ಭೂಕುಸಿತದಿಂದ ಸಾವನ್ನಪ್ಪಿದ್ದಾರೆ.
ಇತ್ತ ಮಗಳ ಕುಟುಂಬದಲ್ಲಿ ಎದುರಾಗಿರುವ ಅವಘಡಕ್ಕೆ ತಂದೆ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಕತ್ತರಘಟ್ಟ ಗ್ರಾಮದಲ್ಲಿ ಮೌನ ಆವರಿಸಿದೆ. ಇನ್ನು ಮಗಳು ಮತ್ತವರ ಕುಟುಂಬದ ರಕ್ಷಣೆಗೆಂದು ಕೇರಳಕ್ಕೆ ತೆರಳಿದ್ದಾರೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.
ಕೇರಳದ ವಯನಾಡ್ ಭೂಕುಸಿತದಲ್ಲಿ ಮೃತರ ಸಂಖ್ಯೆಯು ಏರಿಕೆಯಾಗುತ್ತಲೇ ಇದ್ದು ಕರ್ನಾಟಕದ ಆರು ಮಂದಿ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಯನಾಡ್ ಭೂಕುಸಿತದಿಂದಾಗಿ ಈವರೆಗೆ 143 ಮಂದಿ ಸಾವನ್ನಪ್ಪಿದ್ದಾರೆ.




