ಸಾಂಸ್ಕೃತಿಕ ನಗರಿ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಎರಡು ದಿನಗಳ ‘ಬೌದ್ಧ ಮಹಾ ಸಮ್ಮೇಳನ‘ ಬುದ್ಧನೆಡೆಗೆ ಸಾರ್ಥಕ ನಡಿಗೆಯಾಗಿ ಲಕ್ಷಾಂತರ ಉಪಾಸಕರು ರಾಜ್ಯಾದ್ಯಂತ ಭಾಗವಹಿಸಿ ಸಾರ್ಥಕ ಕ್ಷಣಗಳನ್ನು ಕಣ್ತುಂಬಿಕೊಂಡರು. ವಿಶ್ವ ಶಾಂತಿ ಸಾರಿದ ಸಮ್ಮೇಳನ, ಪ್ರಬುದ್ಧ ಭಾರತಕ್ಕೆ ಅಂಬೇಡ್ಕರ್, ಬುದ್ಧ ಮಾರ್ಗ ಪಾಲಿಸುವ ಸಂಕಲ್ಪದೊಂದಿಗೆ ಸಮಾರೋಪಗೊಂಡಿತು.
ಬೌದ್ಧ ಮಹಾ ಸಮ್ಮೇಳನದಲ್ಲಿ ಬಿಕ್ಕುಗಳಾದ ಪನಿಂದ ಸಯಡೋ, ಲಾವೋಸ್ ನ ರಾಂಡಿಸೋಟ್, ವಿಯೆಟ್ನಾಮ್ ತಿಚಮಿನ್ ಹಾನ್, ಮನೋರಕ್ಷಿತಾ ಬಂತೇಜಿ, ಕರ್ಮ ರಾನ್ರಿಯನ್ ಪುಂಚೆ, ವಿಸುದ್ದಶೀಲ ಭಂತೇಜಿ, ಭಂತೆ ಭೋದಿರತ್ನ ಹಾಗೂ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ 500 ಕುಟುಂಬಗಳಿಗೆ ಬೌದ್ಧ ಧಮ್ಮ ದೀಕ್ಷೆ ನೀಡಿದರು.

ಮಾಜಿ ಮಹಾಪೌರ ಪುರುಶೋತ್ತಮ್ ಹಾಗೂ ಜ್ಞಾನ ಪ್ರಕಾಶ ಸ್ವಾಮೀಜಿಯವರ ಪರಿಶ್ರಮದಿಂದ ಆಯೋಜನೆಗೊಂಡ ಕಾರ್ಯಕ್ರಮ ಮೈಸೂರು ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ ಸೇರಿದಂತೆ ಹಲವರ ಸಹಕಾರದಿಂದ ವಿಶಾಲವಾದ ಮೈದಾನದಲ್ಲಿ, ಅಚ್ಚುಕಟ್ಟಾದ ವೇದಿಕೆಯಲ್ಲಿ, ಶಿಸ್ತುಬದ್ಧವಾಗಿ ಕಾರ್ಯಕ್ರಮ ನಡೆಯಿತು. ಯಾವುದೇ ಗೊಂದಲಕ್ಕೆ, ಯಾವುದೇ ಅವ್ಯವಸ್ಥೆಗೆ ಕಿಂಚಿತ್ತೂ ಅವಕಾಶ ಕೊಡದಂತೆ ಕಾರ್ಯಕ್ರಮಗಳ ಆಯೋಜನೆ ವಿಶೇಷವಾಗಿತ್ತು.
ಆರಂಭದ ದಿನ ಬುದ್ಧ ರಥಕ್ಕೆ ಬಿಕ್ಕುಗಳು ಚಾಲನೆ ನೀಡಿದರು. ರಸ್ತೆಯುದ್ಧಕ್ಕೂ ಜಾನಪದ ಕಲಾತಂಡಗಳ ಕಲರವ, ಬೌದ್ಧ ಅನುಯಾಯಿಗಳ ಹೆಜ್ಜೆ ಆಕರ್ಷಕವಾಗಿತ್ತು. ಎಲ್ಲಿ ನೋಡಿದರು, ಕೇಳಿದರು ಜೈ ಬೌದ್ಧ, ಜೈ ಬುದ್ಧ, ಜೈ ಅಂಬೇಡ್ಕರ್ ಘೋಷಣೆ ಮೊಳಗಿದವು. ಬೌದ್ಧ ಧಮ್ಮ ಅನುಯಾಯಿಗಳ ಕೈನಲಿ ಹಾರಾಡಿದ ಪಂಚಶೀಲ ಭಾವುಟ ಮೆರುಗನ್ನು ಹೆಚ್ಚಿಸಿತು.

ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕಾರ ಮಾಡಿ 69 ನೇ ವರ್ಷ ಕಳೆದು 70 ನೇ ವರ್ಷಕ್ಕೆ ಕಾಲಿರಿಸಿದ ದಿನ. ರಾಜ್ಯದ ವಿವಿಧ ಜಿಲ್ಲೆಗಳಿಂದ ಜನ ಸಾಗರವಾಗಿ ಹರಿದು ಬಂದ ಅಂಬೇಡ್ಕರ್ ಅನುಯಾಯಿಗಳು ವಾದ್ಯ ಮೇಳಗಳ ಜೊತೆ ಹೆಜ್ಜೆ ಹಾಕಿದರು. ಡೊಳ್ಳು ಕುಣಿತ, ಪೂಜಾ ಕುಣಿತ, ಗೊರವರ ಕುಣಿತ, ಗಾರುಡಿ ಗೊಂಬೆಗಳು, ಬುದ್ಧ ಹಾಗೂ ಅಂಬೇಡ್ಕರ್ ಪ್ರತಿಮೆಯುಳ್ಳ ರಥ ಸಾಗಿತು. ‘ಬುದ್ಧಂ ಶರಣಂ ಗಚ್ಚಾಮಿ’ ಮೊಳಗಿತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿ “ಜಡ್ಡುಗಟ್ಟಿದ ಸಮಾಜದಲ್ಲಿ ಪರಿವರ್ತನೆಯಾಗಬೇಕಾದರೆ ಹೆಚ್ಚು ಜನರಿಗೆ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಆದರ್ಶಗಳು ಪರಿಚಿತವಾಗಬೇಕು. ಎಲ್ಲರಿಗೂ ಸಮಾನ ಅವಕಾಶಗಳು ಇಲ್ಲದ ಕಾರಣ ಅಸಮಾನತೆ ನಿರ್ಮಾಣವಾಗಿದೆ. ಪ್ರತಿಯೊಬ್ಬರೂ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಹೊಂದಿದ್ದರೆ ಮಾತ್ರ ಸಮಾನತೆ ಸಾಧ್ಯವಾಗುತ್ತದೆ ಎಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದರು. ಪರಧರ್ಮ ಸಹಿಷ್ಣುತೆ, ಸಹಬಾಳ್ವೆಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಮಾತ್ರ ದೇಶದಲ್ಲಿ ಶಾಂತಿ, ಅಹಿಂಸೆ, ಸತ್ಯ ನೆಲೆಗೊಳ್ಳಲು ಸಾಧ್ಯ.”
“ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆಗಾಗಿ ₹42 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಸಮಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ಬರಲೇಬೇಕು. ನಮ್ಮ ಸರ್ಕಾರ ಗುತ್ತಿಗೆಗಳಲ್ಲಿ ಮೀಸಲಾತಿಯನ್ನು ತಂದಿದೆ. ಬಡ್ತಿಯಲ್ಲಿ ಮೀಸಲಾತಿಯನ್ನು ಸರ್ವೋಚ್ಚ ನ್ಯಾಯಾಲಯ ಕೊಡದಿದ್ದರೂ ಸಮಿತಿ ರಚಿಸಿ, ಅದರ ವರದಿಯ ಆಧಾರದ ಮೇಲೆ ಬಡ್ತಿಯಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿದೆ.”
ಸಮಾನತೆಯ ಜಾಗೃತಿಯ ಜೊತೆಗೆ ಪೂರಕ ಕಾರ್ಯಕ್ರಮಗಳಿದ್ದರೆ ಆರ್ಥಿಕ, ಸಾಮಾಜಿಕ ಶಕ್ತಿ ಬರುತ್ತದೆ. ಅಸಮಾನತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಭಾಗ್ಯಗಳು ಮತ್ತು ಗ್ಯಾರಂಟಿ ಯೋಜನೆಗಳನ್ನು ನಮ್ಮ ಅಧಿಕಾರದ ಅವಧಿಯಲ್ಲಿ ನೀಡಲಾಗಿದೆ” ಎಂದರು.

ಊರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ” ‘ಯುದ್ಧ ಬೇಡ, ಬುದ್ಧ ಬೇಕು’ ಆಯುಧ ಹಿಡಿದವರಿಂದ ದೇಶದ ಚರಿತ್ರೆ ಬದಲಾಗಲಿಲ್ಲ. ಲೇಖನಿ ಹಿಡಿದವರಿಂದ ಈ ದೇಶ ಬದಲಾಗಿದೆ. ಯುವ ಪೀಳಿಗೆಗೆ ಆಯುಧ ಕೊಡಬಾರದು, ಲೇಖನಿ ಕೊಡಬೇಕು. ದೇಶದಲ್ಲಿ ಇಂದಿಗೂ ಅತ್ಯಾಚಾರ, ಅನಾಚಾರ ನಿಂತಿಲ್ಲ. ಬುದ್ಧನ ನಾಡಿನಿಂದ ಬಂದೆ ಎನ್ನುವ ಮಹಾನ್ ನಾಯಕರಿಗೆ ಇದುವರೆಗೂ ಇದರ ಮಹತ್ವ ಅರಿವೇ ಆಗಿಲ್ಲ”.
“ಬುದ್ಧನ ನಾಡಿನಲ್ಲಿ ರಕ್ತದ ಕಲೆಗಳಿವೆ. ಯಾವ ದೇಶವೂ ಯುದ್ಧವನ್ನು ಬಯಸುವುದಿಲ್ಲ. ಅಂಬೇಡ್ಕರ್ ಒಂದು ತೊಟ್ಟು ರಕ್ತವನ್ನು ಹರಿಸದೆ ಎಲ್ಲರಿಗೂ, ಎಲ್ಲಾ ಹಕ್ಕುಗಳು ಲಭಿಸುವಂತೆ ಮಾಡಿದ್ದಾರೆ. ಅಂಬೇಡ್ಕರ್ ಭವನಗಳು ಜ್ಞಾನ ಕೇಂದ್ರಗಳಾಗಬೇಕು. ‘ದೇಶದ ನೆಲ ಅಗೆದರೆ ಸಿಗುವುದು ಬುದ್ಧ’ ಇದನ್ನ ನಾವುಗಳು ಮರೆಯಬಾರದು ಎಂದರು”.

ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಮಾತನಾಡಿ,”ಶೋಷಿತ ಸಮುದಾಯಗಳಿಗೆ ಅಂಬೇಡ್ಕರ್ ಬೆಳಕಾದರು. 19 ವರ್ಷಗಳ ಬಳಿಕ ಮೈಸೂರಿನ ಮಣ್ಣಿನಲ್ಲಿ ಬುದ್ಧನ ಕೂಗು ಕೇಳುತ್ತಿದೆ. ಶಾಂತಿ ನೆಲಸಬೇಕು ಎನ್ನುವ ಕೂಗು ಹೆಚ್ಚಿದೆ. ಸಂಘರ್ಷದ ನಡುವೆ ಬುದ್ಧ ಮತ್ತೆ ಎದ್ದು ಬಂದಿದ್ದಾನೆ. ಬುದ್ಧನ ಮಾರ್ಗವೊಂದೇ ಶಾಂತಿ ಸ್ಥಾಪನೆಗೆ. ಸಮಾನತೆಗಾಗಿ ಚಿಂತಿಸಿದ, ಹೋರಾಟ ಮಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದಲ್ಲಿ ಹಿಂದೂಗಳು ಒಪ್ಪದೇ ಇದ್ದಾಗ ಬೌದ್ಧ ಧಮ್ಮದ ಕಡೆಗೆ ತೆರಳಿದರು”.
“ಯಾವುದೇ ಕಾರ್ಯಕ್ರಮಗಳಿಂದ ಶೋಷಿತರ ನೋವು ನಿವಾರಿಸಲು ಸಾಧ್ಯವಿಲ್ಲ. ಅದಕ್ಕೆ ಇರುವುದೊಂದೇ ದಾರಿ ಅದುವೇ ಬೌದ್ಧ ಧಮ್ಮ. ದೇಶದಲ್ಲಿ ಈಗಲೂ ಮೇಲುಕೀಳಿನ ನೀಚತನವಿದ್ದು, ಶೋಷಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡಿಲ್ಲ. ಈಗಲೂ ಊರಿಂದ ಹೊರಗೆ ಇಡುವ, ಮನೆಯಿಂದ ಹೊರಗೆ ನಿಲ್ಲಿಸುವ, ಕುಡಿಯಲು ನೀರು ಸಿಗದ ಕೆಟ್ಟ ವ್ಯವಸ್ಥೆಯಲ್ಲಿ ನಾವಿದ್ದೇವೆ. ಬುದ್ಧನ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬದಲಾವಣೆಯ ಹಾದಿ ತುಳಿಯಬೇಕು. ಈ ಸಮಾವೇಶ ದೇಶಕ್ಕೆ ಸಂದೇಶ ನೀಡುವ ಸಮ್ಮೇಳನ” ಎಂದು ಅಭಿಪ್ರಾಯಪಟ್ಟರು.

ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಮಾತನಾಡಿ, “ಬೌದ್ಧ ಧರ್ಮ ಪುರಾತನ ಧರ್ಮ. ಬೌದ್ಧ ಧರ್ಮವನ್ನು ದೇಶದಲ್ಲಿ ಬೆಳೆಯಲು ಮನುವಾದಿಗಳು ಬಿಡಲಿಲ್ಲ. ಮಕ್ಕಳಿಗೆ ಬುದ್ಧ, ಬಸವ, ಅಂಬೇಡ್ಕರ್, ಫುಲೆ ವಿಚಾರಧಾರೆಗಳನ್ನು ಹೇಳಿಕೊಡುವುದು ಅತ್ಯಗತ್ಯ. ಇಂದಿನ ಮಕ್ಕಳಿಗೆ ಬೌದ್ಧ ಧರ್ಮದ ಅರಿವು ಬಹಳ ಮುಖ್ಯವಾಗಿದೆ”.
“ನಳಂದ ವಿಶ್ವವಿದ್ಯಾಲಯ ಯಾಕೆ ಸುಟ್ಟರು?. ಸಂವಿಧಾನ ಬದಲಾಯಿಸಲು ಯಾಕೆ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದನ್ನು ಮಕ್ಕಳಿಗೆ ತಿಳಿಸಬೇಕು. ಈ ಎಲ್ಲಾ ಚಿಂತನೆಗಳು ಭವಿಷ್ಯದ ಮಕ್ಕಳಲ್ಲಿ ಮೂಡಿಸದೆ ಇದ್ದರೆ ಅಧಿಕಾರ ಮನುವಾದಿಗಳ ಕೈ ಸೇರುತ್ತದೆ. ಸಂವಿಧಾನದ ಮೂಲಕ ಅಧಿಕಾರ, ಹುದ್ದೆ ಪಡೆದು ಅಂಬೇಡ್ಕರ್ ಅವರನ್ನು ವಿರೋಧಿಸುವ, ಸಂವಿಧಾನಕ್ಕೆ ಅಗೌರವ ತೋರುವ ಜನರಿದ್ದಾರೆ. ಸಮ್ಮೇಳನದ ಮೂಲಕ ಧಮ್ಮ, ಬುದ್ಧ, ಅಂಬೇಡ್ಕರ್ ವಿಚಾರಧಾರೆ ಎಲ್ಲೆಡೆ ಹಬ್ಬಲಿ” ಎಂದು ಕರೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್. ಸಿ. ಮಹದೇವಪ್ಪ ಮಾತನಾಡಿ, “ದಲಿತರು ಬೌದ್ಧ ಧರ್ಮಕ್ಕೆ ಹೋದರೆ ಮತಾಂತರ ಅಲ್ಲ. ಧರ್ಮದ ಜ್ಞಾನ ಇರದವರು ಮತಾಂತರ ಅನ್ನುತ್ತಾರಷ್ಟೇ. ದಲಿತರು ಪದೇ ಪದೇ ಹೊಲೆಯ, ಮಾದಿಗ ಪದ ಬಳಸಿಕೊಂಡು ಅದನ್ನೇ ದೊಡ್ಡ ವಿಚಾರ ಮಾಡಿಕೊಳ್ಳುತ್ತಾ ಇದ್ದೇವೆ. ಇದು ನಾಚಿಕೇಡಿನ ಸಂಗತಿ. ಇದಕ್ಕೆ ಪರ್ಯಾಯ ಪದಗಳ ಬಳಸಬೇಕು. ನಾನು ಚಿಕ್ಕವನಿದ್ದಾಗ ಓದುವ ಸಂದರ್ಭದಲ್ಲಿ ಯಾರಾದರೂ ಹೊಲೆಯ, ಮಾದಿಗ ಎಂದರೇ ಅವರ ಮೇಲೆ ದೂರು ದಾಖಲಿಸುತಿದ್ದೆ. ಆದರೇ, ಈಗ ಅದನ್ನೇ ಮಾಡುತ್ತಿರುವುದು ನೋವುಂಟು ಮಾಡಿದೆ”.

“2006 ರಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನವನ್ನು ಹಾಳು ಮಾಡಲು ಷಡ್ಯಂತ್ರ ನಡೆದಿತ್ತು. ಆಗಿದ್ದ ಪಕ್ಷವೊಂದು ಹೊರ ಹಾಕಿದಾಗ ಇಡೀ ದಲಿತ ಸಮುದಾಯ ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದೆ. ಆರ್ ಎಸ್ ಎಸ್ ಶ್ರೇಣಿಕೃತ ಸಮಾಜವನ್ನು ಜೀವಂತವಾಗಿಡಲು ಹವಣಿಸುತ್ತದೆ. ಆದರೇ, ಇದೇ ಆರ್ ಎಸ್ ಎಸ್ ದಲಿತರಿಗೆ ಇದೇ ಶ್ರೇಣಿಕೃತ ವ್ಯವಸ್ಥೆಯೊಳಕ್ಕೆ ಬಿಟ್ಟಿಲ್ಲ. ಬೌದ್ಧ ಧರ್ಮ ಕಾಲ್ಪನಿಕ ಕಥೆಗಳಲ್ಲಿ ಇಲ್ಲ. ಬುದ್ಧನ ನೈಜ ಮಾರ್ಗ. ಮೂಢನಂಬಿಕೆ ಪಾಲಿಸುತ್ತ ಬುದ್ಧ ಮಾರ್ಗ ಮರೆತಿದ್ದೇವೆ. ಇದಕ್ಕೆಲ್ಲ ಬ್ರಾಹ್ಮಣ್ಯವೇ ಕಾರಣ”.
“ಮೂಲ ನಿವಾಸಿಗಳು ಮರಳಿ ಧಮ್ಮದ ಕಡೆಗೆ ಮುಖ ಮಾಡಬೇಕು. ಸಂಘಟನೆ, ವೈಚಾರಿಕತೆಯನ್ನು ಯಾವುದೇ ಕಾರಣಕ್ಕೂ ಬಿಡಕೂಡದು. ‘ಪ್ರತಿಮೆಯಲ್ಲಿ ನನ್ನನ್ನು ಕಾಣಲು ಸಾಧ್ಯವಿಲ್ಲ, ಸಂವಿಧಾನದಲ್ಲಿ ಮಾತ್ರ ನನ್ನನ್ನು ನೋಡಲು ಸಾಧ್ಯ’ ಎಂದಿದ್ದಾರೆ ಅಂಬೇಡ್ಕರ್. ನಾವೆಲ್ಲರೂ ಉತ್ತಮ ಬದುಕಿನತ್ತ ಸಾಗಬೇಕು” ಎಂದು ಹೇಳಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಬಹುಭಾಷ ನಟ ಪ್ರಕಾಶ್ ರಾಜ್,” ‘ಒಂದು ಸಂಘಟನೆಗೆ ನೂರು ವರ್ಷ ಸಂದಿದೆ. ಆದರೇ, ಇದುವರೆಗೂ ಬುದ್ದಿ ಬಂದಿಲ್ಲ’. ಕತ್ತೆಗೆ ವಯಸ್ಸಾದರೂ ಬುದ್ದಿ ಬಂದಿಲ್ಲ ಎನ್ನೋದು ಹಳ್ಳಿಗಾದೆ. ನೂರು ವರುಷ ತುಂಬಿದೆ ಅಂತ ಊರೆಲ್ಲಾ ದೊಣ್ಣೆ ಹಿಡಿದುಕೊಂಡು ಓಡಾಡುತ್ತಿರುವವರಿಗೆ ಇನ್ನು ಬುದ್ದಿ ಬಂದಿಲ್ಲ. ಇವರ್ಯಾರು ಯಾವುದೇ ಧರ್ಮಕ್ಕೆ ಸೇರಿದವರು ಅಲ್ಲ” ಎಂದು ಲೇವಡಿ ಮಾಡಿದರು.

“ಸಗಣಿ ಒಣಗಿದರೆ ಬೆರಣಿ, ಒಲೆಗೆ ಉರುವಲು. ಹೊಲಕ್ಕೆ ಹಾಕಿದರೆ ಗೊಬ್ಬರ. ಅದೇ ತಲೆಯಲ್ಲಿ ತುಂಬಿದರೆ ಅಂಧ ಭಕ್ತರು. ಶೋಷಿತರನ್ನು ಅಸಮಾನತೆಯಿಂದ ದೂರವಿಟ್ಟು ಅಧಿಕಾರ ಹಿಡಿದವರ ಇತಿಹಾಸ ಕೇವಲ ನೂರು ವರ್ಷ.ಅದೇ ಶತಶತಮಾನಗಳಿಂದ ನೋವುಂಡವರ ಶಕ್ತಿಯೆಂದರೆ ಬುದ್ಧ, ಬಸವ, ಅಂಬೇಡ್ಕರ್. ಇವರ ಮುಂದೆ ನೂರು ವರ್ಷದ ಇತಿಹಾಸಕಾರರು ಯಾವ ಲೆಕ್ಕಕ್ಕೂ ಇಲ್ಲ. ಅಸಮಾನತೆಯೇ ಜೀವಳ ಎಂದುಕೊಂಡವರಿಗೆ ಧಮ್ಮ ಧರ್ಮದ ಮೂಲಕ ಧರ್ಮದ ಪೆಟ್ಟು ಕೊಡಬೇಕು” ಎಂದು ಪ್ರತಿಪಾಧಿಸಿದರು”.
“ರಾಜಕಾರಣಿಗಳು ಮೊದಲು ಬುದ್ಧ, ಬಸವ, ಅಂಬೇಡ್ಕರ್ ಅವರ ಭಾಷಣ ಮಾಡುವುದನ್ನು ನಿಲ್ಲಿಸಿ, ಬದುಕಲ್ಲಿ ಅಳವಡಿಸಿಕೊಂಡು ಬೇರೆಯವರಿಗೂ ಮಾದರಿಯಾಗಬೇಕು. ಹೇಳುವುದಕ್ಕಿಂತ, ತಾವೇ ಮಾಡಿ ತೋರುವುದು ಉತ್ತಮ. ಈ ಸಂಘ ಪರಿವಾರದವರ ಕಾರ್ಯಕ್ರಮಗಳಿಗೆ ಹೋಗುವುದು, ಸದನದಲ್ಲಿ ಉಲ್ಲೆಖಿಸುತ್ತಾ, ಸ್ಮರಿಸುತ್ತ ಮಂತ್ರ ಉಚ್ಚಾರಣೆ ಮಾಡೋದನ್ನು ಬಿಡಬೇಕು”. ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ‘ಇಂದಿರಾ ಆಹಾರ ಕಿಟ್’ ವಿತರಣೆಗೆ ರೈತ ಸಂಘದ ಸ್ವಾಗತ

ಸಮ್ಮೇಳನದ ಆಯೋಜಕರಲ್ಲಿ ಪ್ರಮುಖರಾದ ಮಾಜಿ ಮಹಾಪೌರ ಪುರುಶೋತ್ತಮ್, ಮಾತನಾಡಿ,”ಬುದ್ಧರ ಮಾರ್ಗದಲ್ಲಿ ನಡೆಯಬೇಕು, ಅಂಬೇಡ್ಕರ್ ಚಿಂತನೆ ಎಲ್ಲೆಡೆ ಪಸರಿಸಬೇಕು. ಬೌದ್ಧ ಧಮ್ಮ ಮತ್ತೆ ನೆಲೆಗೊಳ್ಳುವ ವಿಶ್ವಾಸವಿದೆ. ಬುದ್ಧನ ಚಿಂತನೆ ಈ ದೇಶಕ್ಕೆ ಪ್ರಸ್ತುತ ಅಗತ್ಯವಿದೆ. ಬುದ್ಧನ ಚಿಂತನೆ, ಪ್ರಜ್ಞೆ ಈ ದೇಶಕ್ಕೆ ನೀಡಬೇಕಿದೆ. ಆದರೇ, ಈ ದೇಶ ಬೌದ್ಧ ಧರ್ಮ ಮರೆತಿದೆ, ಇದು ಶೋಚನಿಯ ಸಂಗತಿ. ಯಾವುದೇ ಆತಂಕವಿಲ್ಲದೆ ಬೌದ್ಧ ಎಂದು ಸಮೀಕ್ಷೆಯಲ್ಲಿ ಬರೆಯಿಸಿ. ರಾಜ್ಯ ಸರ್ಕಾರ ಬೌದ್ಧ ಧರ್ಮ ಬರೆಸಿದವರಿಗೆ ಎಸ್ಸಿ ಜಾತಿ ಪ್ರಮಾಣ ಪತ್ರ ನೀಡುವ ಆದೇಶ ನೀಡಿರುವುದು ಸ್ವಾಗತಾರ್ಹ” ಎಂದರು.
ಇದೇ ಸಂದರ್ಭದಲ್ಲಿ ಬೌದ್ಧ ಮಹಾ ಸಮ್ಮೇಳನದಲ್ಲಿ ನಿರ್ಣಯಗೊಂಡ 7 ಅಂಶಗಳ ಹಕ್ಕೊತ್ತಾಯ ಮಂಡಿಸಿ, ಸಿಎಂ ಸಿದ್ದರಾಮಯ್ಯನವರಿಗೆ ಈಡೇರಿಸುವಂತೆ ಮನವಿ ಮಾಡಿದರು.
- ಬೌದ್ಧರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು.
- ಕುವೆಂಪು ರಚಿತ ರಾಷ್ಟ್ರಗೀತೆಯಲ್ಲಿ ಮೂಲ ಗೀತೆಯಂತೆ, ಕೈಬಿಟ್ಟಿರುವ ಬೌದ್ಧರುದ್ಯಾನ ಎಂಬ ಪದವನ್ನ ಸೇರಿಸಬೇಕು.
- ಅಂಬೇಡ್ಕರ್ ಭವನಗಳು ಕೌಶಲ್ಯ ಆಧಾರಿತ ಶಿಕ್ಷಣವನ್ನ ನೀಡುವಂತೆ ಉತ್ತೇಜಿಸಬೇಕು.
- ಜಾತಿ ಪ್ರಮಾಣ ಪತ್ರದಲ್ಲಿ ಬೌದ್ಧ ಎಂದು ಸೇರಿಸಿದವರಿಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿ ಗೆಜೆಟೆಡ್ ಆದೇಶವನ್ನ ಮಾಡಬೇಕು.
- ಕರ್ನಾಟಕ ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಬೌದ್ಧ ವಿಹಾರಗಳು ನಿರ್ಮಾಣವಾಗಬೇಕು.
- ಅಕ್ಟೋಬರ್ 14 ರಂದು ಪ್ರತಿ ವರ್ಷ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ವಿಶ್ವ ಬೌದ್ಧ ಸಮ್ಮೇಳನ ನಡೆಸಲು ₹5 ಕೋಟಿ ರೂಪಾಯಿ ಅನುದಾನ ನೀಡಬೇಕು.
- ದಿನಾಂಕ-14-10-2026 ರಂದು ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುವ ಬೌದ್ಧ ಸಮ್ಮೇಳನಕ್ಕೆ ₹5 ಕೋಟಿ ರೂಪಾಯಿ ಅನುದಾನ ನೀಡಬೇಕು.

ಮುಂದಿನ ಬೌದ್ಧ ಮಹಾ ಸಮ್ಮೇಳನ ಚಾಮರಾಜನಗರದಲ್ಲಿ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಧಮ್ಮ ಜ್ಯೋತಿಯನ್ನು ಸಿಎಂ ಸಿದ್ದರಾಮಯ್ಯನವರು ಹಸ್ತಾಂತರ ಮಾಡಿದರು.





