ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು ಕಿರಿಜಾಜಿ ಗ್ರಾಮದಲ್ಲಿ ಭಾನುವಾರ ತಾಲ್ಲೂಕು ರೈತ ಘಟಕ ವತಿಯಿಂದ ಗ್ರಾಮ ಘಟಕ ಸ್ಥಾಪನೆಯಾಗಿ 25ನೇ ವರ್ಷದ ಸಂಭ್ರಮ, ನೂತನ ನಾಮಫಲಕ ಅನಾವರಣ ಹಾಗೂ ಕಾಯಕಯೋಗಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ‘ರೈತ ವಿರೋಧಿ ಕೃಷಿ ಕಾಯ್ದೆ ವಿರುದ್ಧ ಹೋರಾಟಕ್ಕೆ ಸಜ್ಜಾಗಬೇಕಿದೆ’ ಎಂದು ಕರೆ ನೀಡಿದರು.
ರಾಜ್ಯ ಸರ್ಕಾರ ಚುನಾವಣಾ ಪೂರ್ವ ಅಧಿಕಾರಕ್ಕೆ ಬಂದರೆ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಭರವಸೆ ನೀಡಿತ್ತು. ಆದರೇ, ಎಪಿಎಂಸಿ ಕಾಯ್ದೆ ಹೊರತು ಪಡಿಸಿ ಇನ್ನೆರೆಡು ರೈತ ವಿರೋಧಿ ಕಾಯ್ದೆಗಳನ್ನು ಇದುವರೆಗೆ ವಾಪಸ್ ಪಡೆದಿಲ್ಲ. ರೈತರಿಗೆ ನೀಡಿದ ಭರವಸೆ ಹುಸಿಯಾಗಿದ್ದು, ಹೋರಾಟಕ್ಕೆ ಮುಂದಾಗಬೇಕಿದೆ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿದ್ದ ರೈತ ವಿರೋಧಿ ಕಾಯ್ದೆಗಳನ್ನು ರೈತ ಹೋರಾಟದ ಮೂಲಕ ಮಣಿಯುವಂತೆ ಆಯಿತು. ಆದರೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೈಲ್ಯಾಟರಲ್ ಟ್ರೇಡ್ ಅಗ್ರಿಮೆಂಟ್ ಹಾಗೂ ಫ್ರೀಟ್ರೇಡ್ ಅಗ್ರಿಮೆಂಟ್ ಒಪ್ಪಂದಗಳಿಗೆ ಮುಂದಾಗಿ, ರೈತ ವಿರೋಧಿ ನಿಲುವು ಅನುಸರಿಸಿದೆ. ಇದಷ್ಟೇ ಅಲ್ಲದೇ, ಅಪಾಯಕಾರಿಯಾದ ಬೀಜ ಕಾಯ್ದೆ-2025 ಹಾಗೂ ವಿದ್ಯುತ್ ಕಾಯ್ದೆ ಜಾರಿ ಮಾಡಲು ಸಿದ್ಧತೆಯಲ್ಲಿದೆ. ಇದರಿಂದ, ರೈತ ಸಂಕುಲಕ್ಕೆ ಸಂಕಷ್ಟ ಎದುರಾಗಲಿದೆ. ಹಾಗಾಗಿ, ಸರ್ಕಾರಗಳ ನೀತಿ ವಿರುದ್ಧ ರೈತ ಸಮುದಾಯ ಹೋರಾಟಕ್ಕೆ ಅಣಿಯಾಗುವಂತೆ ತಿಳಿಸಿದರು.

ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ರೈತಕಣ್ಮಣಿ ಕೆ.ಎಸ್ ಪುಟ್ಟಣ್ಣಯ್ಯ 25 ವರ್ಷಗಳ ಹಿಂದೆ ಇದೇ ಕಿರಿಜಾಜಿ ಗ್ರಾಮದಲ್ಲಿ ಪಂಪ್ ಸೆಟ್ ವಿದ್ಯುತ್ ಗೆ ಅಳವಡಿಸಿದ್ದ ಮೀಟರ್ ಕಿತ್ತು ಹಾಕಿ ಚಳವಳಿಗೆ ಚಾಲನೆ ನೀಡುವುದರ ಜೊತೆಗೆ ಗ್ರಾಮದಲ್ಲಿ ರೈತ ಸಂಘ ಉದ್ಘಾಟಿಸಿದ್ದರು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಗ್ರಾಮದ ಯಜಮಾನರಾದ ಶಿವಶಂಕರ್, ಮಹೇಶ್, ಡಿ. ಕುಮಾರ್, ಚಂದ್ರಶೇಖರ್, ಪುಟ್ಟವೀರಮ್ಮ, ಕೆ.ಜೆ. ಹರೀಶ್, ಶಿವಕುಮಾರ್ ಅವರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಭ್ರಾತೃತ್ವ ಬಿತ್ತಲು ಕ್ರೀಡೆ ಉತ್ತಮ ಹವ್ಯಾಸ: ಸಚಿವ ಡಾ ಹೆಚ್ ಸಿ ಮಹದೇವಪ್ಪ
ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ವಿಭಾಗೀಯ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ತಾಲ್ಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಂಕಯ್ಯ, ಆನಂದೂರು ಪ್ರಭಾಕರ್, ಅಗ್ರಹಾರ ರಾಮೇಗೌಡ, ನಿಲುವಾಗಿಲು ಪ್ರಭಾಕರ್, ಉಂಡುವಾಡಿ ಸಿ. ಚಂದ್ರೇಗೌಡ, ಮೋದೂರು ಶಿವಣ್ಣ, ಮಂಟಕಳ್ಳಿ ಮಹೇಶ್, ಕಿರಿಜಾಜಿ ಮಹದೇವ್, ನಿಂಗರಾಜ್ ಮಲ್ಲಾಡಿ, ಬಲ್ಲೇನಹಳ್ಳಿ ಕೆಂಪರಾಜು, ಕಿರಿಜಾಜಿ ಗಜೇಂದ್ರ, ಕಲ್ಲಹಳ್ಳಿ ಜಯಣ್ಣ, ರಾಜಣ್ಣ, ವಿಷಕಂಠಪ್ಪ, ಈಶ್ವರ್ ಸೇರಿದಂತೆ ಹಲವರು ಇದ್ದರು.





