- ‘ಮೂವರು ಡಿಸಿಎಂ ಸ್ಥಾನ ಕೇಳುತ್ತಿರುವುದು ಸರ್ಕಾರ ಉಳಿಸಲು’
- ‘ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹೇಳಿದ್ದೇನೆ’
ಮೂರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗಬೇಕು ಎಂಬ ಅಭಿಪ್ರಾಯಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ. ಈ ನಿಟ್ಟಿನಲ್ಲಿ ಯಾವುದೇ ಸವಾಲು ಎದುರಿಸಲು ಸಿದ್ಧ. ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಮುಂದೆ ಪ್ರಸ್ತಾಪ ಮಾಡಿದ್ದೇನೆ. ಅವರಿಗೆ ಸರಿ ಅನ್ನಿಸಿದರೆ ಮಾಡಲಿ, ಇಲ್ಲ ಅಂದರೆ ಬಿಡಲಿ ಎಂದು ಸಚಿವ ಕೆ ಎನ್ ರಾಜಣ್ಣ ಹೇಳಿದರು.
ಬೆಂಗಳೂರಿನ ಕೆಕೆ ಗೆಸ್ಟ್ ಹೌಸ್ ನಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೇರೆ ಬೇರೆ ಸಮುದಾಯದವರು ಡಿಸಿಎಂ ಆದರೆ ತಪ್ಪೇನಿದೆ? ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹೇಳಿದ್ದೇನೆ. ಅದರ ಗೆಲುವಿಗಾಗಿ ಈ ಸೂತ್ರ ನನ್ನ ಪ್ರಕಾರ ಸರಿ ಇದೆ. ನನ್ನ ಹೇಳಿಕೆಯಲ್ಲಿ ಡಿಸಿಎಂ ಸ್ಥಾನದ ಪ್ರಾಮುಖ್ಯತೆ ಕಡೆಗಣಿಸುವ ಮಾತು ಎಲ್ಲಿದೆ? ಎಂದು ಪ್ರಶ್ನಿಸಿದರು.
“ಇವತ್ತಿನ ಚುನಾವಣಾ ವ್ಯವಸ್ಥೆ ನೋಡಿದಾಗ ಜಾತಿ ಬಹಳ ಪ್ರಾಮುಖ್ಯತೆ ವಹಿಸುತ್ತಿದೆ. ಈ ಎಲ್ಲ ಲೆಕ್ಕಾಚಾರದಲ್ಲಿ ಮೂರು ಸಮುದಾಯದ ಮೂವರು ಡಿಸಿಎಂ ಇದ್ದರೆ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ” ಎಂದರು.
ಈ ಸುದ್ದಿ ಓದಿದ್ದೀರಾ? ’ಈ ದಿನ’ ಸಂಪಾದಕೀಯ| 2029ರ ಕನಸಿಗೆ ಈಗಲೇ ‘ಟೋಪಿ’ ಹೊಲಿದ ಮೋದಿ ಮಂತ್ರವಾದಿ
“ಸಿಎಂ ಸಿದ್ದರಾಮಯ್ಯ ಅವರು ಈ ಮಾತನ್ನು ನನ್ನಿಂದ ಹೇಳಿಸುತ್ತಿದ್ದಾರೆ ಅನ್ನೋದು ತಪ್ಪು. ನಾನು ಈ ವಿಚಾರವಾಗಿ ಸಿದ್ದರಾಮಯ್ಯರನ್ನು ಭೇಟಿ ಮಾಡೇ ಇಲ್ಲ. ಈ ರೀತಿಯಲ್ಲಿ ಹೆಚ್ಚು ಡಿಸಿಎಂ ಹುದ್ದೆ ಸೃಷ್ಟಿ ಮಾಡಿದ್ರೆ ಡಿಸಿಎಂ ಡಿಕೆ ಶಿವಕುಮಾರ್ ಪ್ರಾಮುಖ್ಯತೆ ಕಡಿಮೆ ಮಾಡಲಾಗುತ್ತದೆ ಅನ್ನೋದೂ ತಪ್ಪು ಕಲ್ಪನೆ” ಎಂದು ಸ್ಪಷ್ಟಪಡಿಸಿದರು.
“ಲೋಕಸಭೆ ಚುನಾವಣೆ ಬಳಿಕ ಕೆಲವೊಮ್ಮೆ ಸರ್ಕಾರಗಳನ್ನೇ ವಿಸರ್ಜನೆ ಮಾಡಿದ ಉದಾಹರಣೆ ಇದೆ. ಬಿಡಿ ಜತ್ತಿ, ರಾಮಕೃಷ್ಣ ಹೆಗಡೆ ಕಾಲದಲ್ಲೆಲ್ಲ ಇದು ನಡೆದಿದೆ. ಈಗಲೂ ಹಾಗೇ ಆಗೋದಿಲ್ಲ ಎನ್ನುವುದಕ್ಕೆ ಏನಿದೆ ಗ್ಯಾರಂಟಿ? ಹೀಗಾಗಿ ಸಮುದಾಯವಾರು ಡಿಸಿಎಂ ಸ್ಥಾನ ನೀಡಬೇಕು. ಡಿಕೆಶಿ ಹೇಳಿಕೆಗೆ ನಾನು ವಿರೋಧಿಸುವುದೂ ಇಲ್ಲ, ಸಹಮತವೂ ಇಲ್ಲ” ಎಂದು ಹೇಳಿದರು.





