ಕಬ್ಬು ಬೆಳೆಗಾರರ ಹೋರಾಟವನ್ನು ದುರ್ಬಲಗೊಳಿಸಿ, ಸಾರ್ವಜನಿಕ ಆಕ್ರೋಶವನ್ನು ಉಂಟುಮಾಡುವ ಉದ್ದೇಶವನ್ನೂ ಹೊಂದಿರಬಹುದು. ಸರ್ಕಾರದ ತನಿಖೆಯ ಮೂಲಕ ಸತ್ಯ ಬೆಳಕಿಗೆ ಬರಲಿ; ಬೆಳೆಗಾರರಿಗೆ ನ್ಯಾಯ ಮತ್ತು ಪರಿಹಾರ ದೊರೆಯಲಿ. ಹೋರಾಟವು ಶಾಂತಿಯುತವಾಗಿ ಮುಂದುವರೆಯಲು ಎಲ್ಲರೂ ಸಹಕರಿಸಲಿ.
ಮುಧೋಳ ತಾಲೂಕಿನ ಸಮೀರವಾಡಿಯ ಗೋದಾವರಿ ಶುಗರ್ಸ್ ಕಾರ್ಖಾನೆಯಲ್ಲಿ 140ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಿದ ಘಟನೆ ಕಬ್ಬು ದರ ಸಂಘರ್ಷಕ್ಕೆ ಹೊಸ ತಿರುವು ನೀಡಿದೆ. ಬೆಳಗಾವಿ ಜಿಲ್ಲೆಯ ಗುರ್ಲಾಪೂರ ಕ್ರಾಸ್ನಲ್ಲಿ ಶಾಂತಿಯುತವಾಗಿ ಹೋರಾಟ ನಡೆಸಿದ ರೈತರು ಸರ್ಕಾರದ ₹3300 ದರ ಘೋಷಣೆಗೆ ತಾತ್ಕಾಲಿಕವಾಗಿ ಒಪ್ಪಿಕೊಂಡಾಗ, ಬಾಗಲಕೋಟೆ ಜಿಲ್ಲೆಯ ರೈತರು ₹3500 ಆಗ್ರಹದೊಂದಿಗೆ ಹೋರಾಟ ಮುಂದುವಸಿದರು. ಹೋರಾಟದ ನಡುವೆ ಸಂಭವಿಸಿದ ಈ ಬೆಂಕಿಗಾಹುತಿಯ ಹಿಂದೆ ಯಾರ ಕೈವಾಡ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಲಭ್ಯವಾಗಿಲ್ಲ.
ಕಬ್ಬು ಬೆಳೆಗಾರರ ನ್ಯಾಯಯುತ ಹೋರಾಟದ ಮಧ್ಯೆ ಸಂಭವಿಸಿದ ಘಟನೆಯಲ್ಲಿ ನೂರಾರು ಟ್ರ್ಯಾಕ್ಟರ್ಗಳು, ಟ್ರ್ಯಾಲಿಗಳಲ್ಲಿ ತುಂಬಿದ್ದ ಕಬ್ಬು ಹಾಗೂ ಎಂಟಕ್ಕೂ ಹೆಚ್ಚು ಬೈಕ್ಗಳಿಗೆ ಬೆಂಕಿ ಹಚ್ಚಲ್ಪಟ್ಟಿದ್ದು, ಕ್ಷಣಾರ್ಧದಲ್ಲಿ ಅಗ್ನಿಜ್ವಾಲೆಗಳು ಅವುಗಳನ್ನು ಭಸ್ಮಗೊಳಿಸಿವೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.
ಘಟನೆಯ ವೇಳೆ ಗಲಭೆ ನಿಯಂತ್ರಿಸಲು ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ಧಿ ಅವರಿಗೆ ಪ್ರತಿಭಟನಾಕಾರರು ಎಸೆದ ಕಲ್ಲು ಬಿದ್ದು ಕಾಲಿನ ಮೂಳೆ ಮುರಿತ ಉಂಟಾಗಿದೆ ಎನ್ನಲಾಗಿದೆ. ಗಾಯಗೊಂಡ ಅಧಿಕಾರಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಂತಿಯುತವಾಗಿ ಮುಂದುವರಿಯುತ್ತಿದ್ದ ಕಬ್ಬು ಬೆಳೆಗಾರರ ಹೋರಾಟದಲ್ಲಿ ಸಂಭವಿಸಿದ ಈ ಘಟನೆ ಟ್ರ್ಯಾಕ್ಟರ್ ಮಾಲೀಕರಿಗೂ, ಬೆಂಕಿಗಾಹುತಿಯಾದ ಕಬ್ಬು ಬೆಳೆಗಾರರಿಗೂ ಆರ್ಥಿಕ ನಷ್ಟವನ್ನುಂಟುಮಾಡಿದೆ. ಬೆಂಕಿಗಾಹುತಿಯಾದ ಕಬ್ಬಿನ ಪ್ರಮಾಣವೂ ದೊಡ್ಡದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಸಾಮಾನ್ಯ ರೈತರ ಜೀವನೋಪಾಯವನ್ನು ಹಾಳುಮಾಡಿದ ದಾಳಿ. ಟ್ರ್ಯಾಕ್ಟರ್ ಎಂದರೆ ರೈತನಿಗೆ ಕೇವಲ ವಾಹನವಲ್ಲ. ಅದು ಅವರ ಜೀವನೊಪಾಯದ ಆಯುಧವಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಆಸ್ತಿಗೆ ಬೆಂಕಿ ಹಚ್ಚಲಾಗಿದೆ ಎಂದರೆ ಅದು ಪೂರ್ವಯೋಜಿತ ಸಂಚು ಆಗಿರಬಹುದೇ ಎನ್ನುವ ಅನುಮಾನಗಳು ಮೂಡಿವೆ.
ರೈತ ಹೋರಾಟಗಾರರು ಈ ಘಟನೆಯಲ್ಲಿ ನಮ್ಮದು ಯಾವುದೇ ಪಾತ್ರವಿಲ್ಲವೆಂದು ಹೇಳಿದ್ದಾರೆ. ಅವರ ಮಾತುಗಳನ್ನು ತಳ್ಳಿಹಾಕುವಂತಿಲ್ಲ. ಏಕೆಂದರೆ ಹಲವು ಹೋರಾಟಗಳು ಶಾಂತಿಯುತವಾಗಿದ್ದಾಗಲೇ ಕೆಲವು ಗುಂಪುಗಳು ಗೊಂದಲ ಸೃಷ್ಟಿಸಿ ಹೋರಾಟದ ನೈತಿಕ ಬಲವನ್ನು ಕುಗ್ಗಿಸಲು ಪ್ರಯತ್ನಿಸಿದ್ದ ಅನೇಕ ಉದಾಹರಣೆಗಳು ಇವೆ. ಆದರೆ ಎಲ್ಲವೂ ತನಿಖೆಯ ನಂತರವೇ ಹೊರಬರಬೇಕಿದೆ.

ಈ ಕುರಿತು ಈ ದಿನ.ಕಾಮ್ ಜತೆ ಮಾತನಾಡಿದ ಬಾಗಲಕೋಟೆ ಜಿಲ್ಲೆಯ ರೈತ ಹೋರಾಟಗಾರ ಯಲ್ಲಪ್ಪ ಹೆಗಡೆ, “ಗಲಭೆಯ ಹಿಂದೆ ರಾಜಕೀಯ ಆಶ್ರಯ ಪಡೆದ ಬೇರೆ ಕಾರ್ಖಾನೆಗಳ ಸಂಚು ಇದೆ” ಎಂದು ಆರೋಪಿಸಿದ್ದಾರೆ.
ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯವರು ರೈತರ ಪರವಾಗಿದ್ದಾರೆ. ನಮ್ಮ ಬೇಡಿಕೆಗಳಿಗೆ ಸದಾ ಸ್ಪಂದಿಸಿದ್ದಾರೆ. ಈ ವರ್ಷದ ಕಬ್ಬಿನ ದರ ಕುರಿತು ಚರ್ಚಿಸಲು ರೈತರು ಕಾರ್ಖಾನೆಗೆ ಬಂದಿದ್ದೇವೆ ಎನ್ನುವುದು ಸತ್ಯ. ಆದರೆ ರೈತ ಹೋರಾಟಗಾರರಾಗಲಿ ಅಥವಾ ಗೋದಾವರಿ ಕಾರ್ಖಾನೆಯವರಿಂದ ಗಲಬೆ ಮಾಡಲಾಗಿದೆ ಎಂಬ ಆರೋಪ ಸಂಪೂರ್ಣ ಸುಳ್ಳು. ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಕೆಲವು ರಾಜಕೀಯ ನಾಯಕರ ಪ್ರಭಾವದಲ್ಲಿರುವ ಬೇರೆ ಸಕ್ಕರೆ ಕಾರ್ಖಾನೆಗಳೇ ಈ ಗಲಬೆಯನ್ನು ಪೂರ್ವನಿಯೋಜಿತವಾಗಿ ಸೃಷ್ಟಿಸಿವೆ. ರೈತರ ನಡುವೆ ಜಗಳ ಹಚ್ಚಿ ಹೋರಾಟವನ್ನು ದುರ್ಬಲಗೊಳಿಸುವ ಉದ್ದೇಶವೇ ಇದರ ಹಿಂದಿದೆ. ಗೋದಾವರಿ ಕಾರ್ಖಾನೆಯವರು ರೈತರ ಪರವಾಗಿ ಇರುವುದು ಹಲವರಿಗೆ ಅಸಹನೀಯವಾಗಿದೆ.
ಘಟನೆಯ ವೇಳೆ ರೈತರು ಶಾಂತಿಯುತವಾಗಿ ಸಭೆ ನಡೆಸುತ್ತಿದ್ದರೆಂದು ಹೆಗಡೆ ಸ್ಪಷ್ಟಪಡಿಸಿದ್ದು, “ಈ ಗಲಬೆಗೂ ರೈತರ ಹೋರಾಟಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ಸಂಪೂರ್ಣ ಹೊರಗಿನವರಿಂದ ಮಾಡಲಾದ ಷಡ್ಯಂತ್ರವಾಗಿದ್ದು, ಈ ಕುರಿತು ಸಿಐಡಿ ಇಲ್ಲವೇ ಸಿಬಿಐ ತನಿಖೆಯಾಗಬೇಕು ” ಎಂದು ಹೇಳಿದರು.
“ಗಲಬೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರೈತ ಹೋರಾಟಗಾರ ಮುತ್ತಪ್ಪ ಅವರು ಈ ದಿನ.ಕಾಮ್ ಜತೆಗೆ ಮಾತನಾಡಿ, “ಈ ಘಟನೆಗೂ, ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದರು.
“ನಾವು ಪೊಲೀಸ್ ಅಧಿಕಾರಿಗಳ ಜತೆ ನಿಂತಿದ್ದಾಗಲೇ ಕಾರ್ಖಾನೆಯ ದಿಕ್ಕಿನಿಂದ ಕಲ್ಲುಗಳನ್ನು ತೂರಲಾಯಿತು. ನಮ್ಮ ಹೋರಾಟಕ್ಕೆ ಕೆಟ್ಟ ಹೆಸರು ತರಲು ನಮ್ಮ ನಡುವೆ ಸೇರಿಕೊಂಡಿದ್ದ ಕೆಲ ಹೊರಗಿನವರೇ ಗಲಬೆ ಸೃಷ್ಟಿಸಿದ್ದಾರೆ. ಬೇರೆ ಕಾರ್ಖಾನೆಯ ಗೂಂಡಾಗಳು ಹೆಲ್ಮೆಟ್ ಹಾಕಿಕೊಂಡು, ಕೈಯಲ್ಲಿ ಬಡಗಿ ಹಿಡಿದುಕೊಂಡೇ ಸ್ಥಳಕ್ಕೆ ಬಂದು ಪ್ರಚೋದನೆ ನಡೆಸಿದ್ದಾರೆ. ರೈತರ ಮಧ್ಯ ಜಗಳ ಹಚ್ಚಲು ಪೂರ್ವಯೋಜಿತ ಷಡ್ಯಂತ್ರ ಮಾಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.
“ನಿಜವಾದ ರೈತರು ಕಬ್ಬಿಗೂ, ಟ್ರ್ಯಾಕ್ಟರ್ಗೂ ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ. ಆಃಉತಿಯಾಗಿರುವುದರಲ್ಲಿ ನಮ್ಮ ಹೋರಾಟಗಾರರ ಟ್ರ್ಯಾಕ್ಟರ್ಗಳೂ ಇವೆ. ನಾವು ರೈತರ ಆಸ್ತಿಯನ್ನು ಸುಡುವವರಲ್ಲ, ಕಿಡಿಗೇಡಿಗಳು ರೈತರ ಹೋರಾಟ ಹತ್ತಿಕ್ಕಲು ಈ ಷಡ್ಯಂತರ ಮಾಡಿದ್ದಾರೆ. ತನಿಖೆಯನ್ನು ಮಾಡಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲಿ. ” ಎಂದು ತಿಳಿಸಿದ್ದಾರೆ.
ಸಮೀರವಾಡಿ ಗೋದಾವರಿ ಶುಗರ್ಸ್ ಕಾರ್ಖಾನೆಯಲ್ಲಿ ಸಂಭವಿಸಿದ ಘಟನೆ ಕೇವಲ ಆಸ್ತಿ ನಷ್ಟವಷ್ಟೇ ಅಲ್ಲ. ಇದು ಕಬ್ಬು ಬೆಳೆಗಾರರ ಹೋರಾಟದ ದಿಕ್ಕು, ವೇಗ ಮತ್ತು ನೈತಿಕ ಬಲದ ಮೇಲೆ ದೊಡ್ಡ ಪರಿಣಾಮ ಬೀರಿದ ಘಟನೆ. ಶಾಂತಿಯುತವಾಗಿ ಸಾಗುತ್ತಿದ್ದ ಹೋರಾಟಕ್ಕೆ ಮಧ್ಯಪ್ರವೇಶಿಸಿ ಗಲಬೆ ಉಂಟುಮಾಡಿದ ಶಕ್ತಿಗಳು ಯಾರು? ಎಂಬುದು ಇನ್ನೂ ಸ್ಪಷ್ಟವಾಗದಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ನಿಷೇಧವಿದ್ದರೂ ನಿಲ್ಲದ ಮರಳು ದಂಧೆ; ಎನ್ಜಿಟಿ ಆದೇಶಕ್ಕೂ ಕಿಮ್ಮತ್ತಿಲ್ಲ
ನಿಜವಾದ ರೈತರ ಮಾತು ಮತ್ತು ಸ್ಥಳೀಯ ಪರಿಸ್ಥಿತಿ ಎರಡನ್ನೂ ನೋಡಿದಾಗ, ಈ ಗಲಬೆ ರೈತರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಿ ಹೋರಾಟವನ್ನು ದುರ್ಬಲಗೊಳಿಸಲು ಮಾಡಿದ ಹೊರಗಿನ ಶಕ್ತಿಗಳ ಪೂರ್ವಯೋಜಿತ ಸಂಚು ನಡೆದಿರುವ ಸಾಧ್ಯತೆ ಹೆಚ್ಚು ಸ್ಪಷ್ಟವಾಗುತ್ತದೆ. ಆದರೆ ಇದು ಕೇವಲ ಊಹೆಯ ಮಟ್ಟದಲ್ಲಿ ನಿಲ್ಲದೇ, ಸ್ವತಂತ್ರ ತನಿಖೆ ಮೂಲಕ ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.
ಬೆಂಕಿಗಾಹತಿಯಾದ ಕಬ್ಬು ಮತ್ತು ಟ್ರ್ಯಾಕ್ಟರ್ ಮಾಲೀಕರಿಗೆ ಸರ್ಕಾರ ನ್ಯಾಯವನ್ನು ಒದಗಿಸಬೇಕು ಎನ್ನುವುದು ರೈತರ ಮನವಿಯಾಗಿದೆ.
ಕಬ್ಬು ಬೆಳೆಗಾರರ ನ್ಯಾಯವಾದ ಹೋರಾಟವನ್ನು ಹತ್ತಿಕ್ಕಲು ಕಿಡಿಗೇಡಿಗಳು ಅಥವಾ ಅಪರಿಚಿತ ಗುಂಪುಗಳು ಪೂರ್ವಯೋಜಿತವಾಗಿ ಮಾಡಿದ ಕೃತ್ಯವೆಂದು ಕಾಣುತ್ತದೆ. ಈ ಘಟನೆ ಹೋರಾಟವನ್ನು ಹತ್ತಿಕ್ಕುವ ಹುನ್ನಾರವಾಗಿರಬಹುದು ಎಂಬ ಅನುಮಾನವಿದ್ದರೂ, ಇದಕ್ಕೆ ದೃಢ ಸಾಕ್ಷ್ಯಗಳು ಇಲ್ಲ. ಬದಲಿಗೆ, ಇದು ಕಬ್ಬು ಬೆಳೆಗಾರರ ಹೋರಾಟವನ್ನು ದುರ್ಬಲಗೊಳಿಸಿ, ಸಾರ್ವಜನಿಕ ಆಕ್ರೋಶವನ್ನು ಉಂಟುಮಾಡುವ ಉದ್ದೇಶವನ್ನೂ ಹೊಂದಿರಬಹುದು. ಸರ್ಕಾರದ ತನಿಖೆಯ ಮೂಲಕ ಸತ್ಯ ಬೆಳಕಿಗೆ ಬರಲಿ; ಬೆಳೆಗಾರರಿಗೆ ನ್ಯಾಯ ಮತ್ತು ಪರಿಹಾರ ದೊರೆಯಲಿ. ಹೋರಾಟವು ಶಾಂತಿಯುತವಾಗಿ ಮುಂದುವರೆಯಲು ಎಲ್ಲರೂ ಸಹಕರಿಸಲಿ.





