ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ ಮಾಸಿಕ ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ಸೌಲಭ್ಯ ನೀಡುವುದನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್ಗಳ ಸಂಘ ಹೈಕೋರ್ಟ್ ಮೆಟ್ಟಲೇರಿರುವುದನ್ನು ಮಹಿಳಾ ಮುಖಂಡರುಗಳು ಖಂಡಿಸಿದ್ದಾರೆ.
ರಾಜ್ಯದಲ್ಲಿ ಎಲ್ಲಾ ಸಂಸ್ಥೆಗಳು ಮಹಿಳಾ ಸಿಬ್ಬಂದಿಗಳಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆ ನೀಡಬೇಕು ಎಂದು ಸರ್ಕಾರವು 2025ರ ನವೆಂಬರ್ 20ರಂದು ಆದೇಶ ಹೊರಡಿಸಿದ್ದು, ನವೆಂಬರ್ನಿಂದಲೇ ಈ ಆದೇಶ ಜಾರಿಗೆ ಬಂದಿದೆ. ಆದರೆ ಈ ರೀತಿ ರಜೆ ಕೊಡುವುದರಿಂದ ಉದ್ದಿಮೆಗಳ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಆಗಲಿದೆ ಎಂದು ಬೆಂಗಳೂರು ಹೋಟೆಲ್ಗಳ ಸಂಘ ಹೇಳಿಕೊಂಡಿದೆ.
ಇದನ್ನು ಓದಿದ್ದೀರಾ? ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ; ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಬೆಂಗಳೂರು ಹೋಟೆಲ್ಗಳ ಸಂಘ ಅರ್ಜಿ
“ಈಗಾಗಲೇ ಕಾರ್ಮಿಕರು ಅಥವಾ ನೌಕರರ ಆರೋಗ್ಯ, ಯೋಗಕ್ಷೇಮ, ಸುರಕ್ಷತೆ ಕೆಲಸದ ಅವಧಿ, ವಾರದ ರಜೆ, ಒಟ್ಟು ರಜೆ ದಿನಗಳು, ವೇತನ ಸಹಿತ ರಜೆ ಇತ್ಯಾದಿಗಳಿಗೆ ಅನೇಕ ಕಾಯ್ದೆಗಳು, ಕಾನೂನುಗಳಿವೆ. ಈಗ ಮುಟ್ಟಿನ ರಜೆಯೂ ನೀಡುವುದರಿಂದ ಕೆಲಸಕ್ಕೆ ಅಡಚಣೆ ಉಂಟಾಗುತ್ತದೆ. ಆರ್ಥಿಕ ಹೊರೆಯಾಗುತ್ತದೆ. ಕಾಯ್ದೆಗೆ ತಿದ್ದುಪಡಿ ಇಲ್ಲದೆ, ಕಾರ್ಯಕಾರಿ ಆದೇಶದ ಮೂಲಕ ಇಂತಹ ಸೌಲಭ್ಯ ಜಾರಿಗೊಳಿಸಲು ಸಾಧ್ಯವಿಲ್ಲ. ಸರ್ಕಾರದ ಆದೇಶವು ಕಾನೂನುಬಾಹಿರ ಮತ್ತು ಏಕಪಕ್ಷೀಯ. ಈ ಅಧಿಸೂಚನೆ ರದ್ದುಪಡಿಸಬೇಕು” ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.
ಈ ಬಗ್ಗೆ ಈದಿನ ಡಾಟ್ ಕಾಮ್ಗೆ ಪ್ರತಿಕ್ರಿಯಿಸಿದ ಮಹಿಳಾಪರ ಹೋರಾಟಗಾರ್ತಿ ಅಸುಂತಾ ಡಿಸೋಜಾ, “ಮಹಿಳೆಯರಿಗೆ ಮುಟ್ಟಿನ ರಜೆ ನೀಡುವ ಸರ್ಕಾರದ ಆದೇಶ ಪ್ರಶ್ನಿಸಿ ಬೆಂಗಳೂರು ಹೋಟೆಲ್ಗಳ ಸಂಘ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುವುದು ಸರಿಯಲ್ಲ. ಹೊಟೇಲ್ಗಳಲ್ಲಿ ಗಂಡಸರಿಗೆ ಸರಿಸಮಾನವಾಗಿ ಮಹಿಳೆಯರು ಎಲ್ಲ ಕೆಲಸವನ್ನು ಮಾಡುವಾಗ ಒಂದು ದಿನದ ಮುಟ್ಟಿನ ರಜೆ ತೊಂದರೆಯಾಗುವುದು ಹೇಗೆ? ಮುಟ್ಟಿನ ಸಮಯದಲ್ಲಿ ಆಗುವ ನೋವು, ಕಿರಿಕಿರಿಯ ನಡುವೆ ಒಂದು ದಿನ ರಜೆ ಪಡೆಯಲು ಹೋಟೆಲ್ನಲ್ಲಿ ಕೆಲಸ ಮಾಡುವ ಮಹಿಳೆಯರೂ ಅರ್ಹರು” ಎಂದು ಹೇಳಿದ್ದಾರೆ.
“ಮುಟ್ಟಿನ ರಜೆ ನೀಡುವುದನ್ನು ಹೋಟೆಲ್ ಮಾಲೀಕರು ಹೈಕೋರ್ಟ್ಗೆ ಹೋಗಿದ್ದಾರೆ. ಹೋಟೆಲ್ ಮಾಲೀಕರು ಆರ್ಥಿಕವಾಗಿ ಹೊರೆಯಾಗುತ್ತದೆ ಎಂದು ಹೇಳುವುದು ಸರಿಯಲ್ಲ. ಒಂದು ದಿನ ಬದಲಿ ವ್ಯವಸ್ಥೆಯನ್ನು ಹೋಟೆಲ್ ಮಾಲೀಕರು ಮಾಡಿಕೊಳ್ಳಬೇಕು. ಮುಟ್ಟಿನ ಸಂದರ್ಭದಲ್ಲಿ ಹೆಣ್ಣುಮಕ್ಕಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಹೋಟೆಲ್ ಮಾಲೀಕರುಗಳು ಹೆಣ್ಣುಮಕ್ಕಳ ನೋವನ್ನು ಅರ್ಥಮಾಡಿಕೊಳ್ಳಬೇಕು” ಎಂದು ಈದಿನ ಡಾಟ್ ಕಾಮ್ಗೆ ಪ್ರತಿಕ್ರಿಯಿಸುತ್ತಾ ಜನವಾದಿ ಮಹಿಳಾ ಸಂಘಟನೆ(ಜೆಎಂಎಸ್) ಪ್ರಧಾನ ಕಾರ್ಯದರ್ಶಿ ದೇವಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮುಟ್ಟು ಅಂಗವೈಕಲ್ಯವಲ್ಲ; ಸ್ಮೃತಿ ಇರಾನಿ ಹೇಳಿಕೆ ಯಾರನ್ನು ಮೆಚ್ಚಿಸಲು?
“ನವೆಂಬರ್ನಿಂದ ಮುಟ್ಟಿನ ರಜೆಯನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಸರ್ಕಾರದ ಈ ನಿರ್ಧಾರವನ್ನು ಈಗಾಗಲೇ ಜನವಾದಿ ಮಹಿಳಾ ಸಂಘಟನೆ ಸ್ವಾಗತಿಸಿದೆ. ಆದರೆ ಎರಡು ದಿನ ಮುಟ್ಟಿನ ರಜೆ ನೀಡಬೇಕು ಎಂದು ಜೆಎಂಎಸ್ ಈಗಾಗಲೇ ಸರ್ಕಾರವನ್ನು ಒತ್ತಾಯಿಸುತ್ತಿದೆ” ಎಂದಿದ್ದಾರೆ.
ಇನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ರಾಜ್ಯ ಸಮಿತಿ ಸದಸ್ಯೆ ಮಾಧುರಿ ಬೋಳಾರ್ ಈದಿನ ಡಾಟ್ ಕಾಮ್ಗೆ ಪ್ರತಿಕ್ರಿಯಿಸಿದ್ದು, “ಹಲವಾರು ಶತಮಾನಗಳಿಂದ ಮಹಿಳೆಯರು ದಮನಕ್ಕೆ ಒಳಗಾಗುತ್ತಿದ್ದಾರೆ. ಮುಟ್ಟಿನ ಸಂದರ್ಭದಲ್ಲಿ ಅನಿವಾರ್ಯವಾಗಿ ನೋವಿನ ನಡುವೆಯೂ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅದೆಷ್ಟೋ ಸಂಸ್ಥೆಗಳು ಮುಟ್ಟಾದಾಗ ರಜೆ ಪಡೆದರೆ ವೇತನವನ್ನೂ ಕಡಿತಗೊಳಿಸಿರುವುದಿದೆ. ಅಂತಹ ಸಂದರ್ಭದಲ್ಲಿ ಮುಟ್ಟಿನ ರಜೆ ನೀಡಿರುವುದು ಸ್ವಾಗತಾರ್ಹ. ಆದರೆ ಈ ನಿರ್ಧಾರವನ್ನು ಹೋಟೆಲ್ಗಳ ಸಂಘಟನೆ ಪ್ರಶ್ನಿಸುವುದು ಖಂಡನಾರ್ಹ” ಎಂದು ಹೇಳಿದ್ದಾರೆ.





