ಚಿಂತಾಮಣಿ:ಮದುವೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪ್ರಮುಖ ಕ್ಷಣ ಆದರೆ ದಿನಗೂಲಿ ಕಾರ್ಮಿಕರು ಹಾಗೂ ಕಟ್ಟಡ ಕಾಮಗಾರಿ ಮಾಡುವವರಂತಹ ಅಸಂಘಟಿತ ವಲಯದ ಕುಟುಂಬಗಳಿಗೆ ಮದುವೆಯ ಖರ್ಚು ದೊಡ್ಡ ಹೊರೆ ಆಗುತ್ತದೆ ಇದನ್ನು ಮನಗಂಡು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೊಂದಾಯಿತ ಕಾರ್ಮಿಕರಿಗೆ ಮದುವೆಗೆ ಅಥವಾ ಅವರ ಮಕ್ಕಳ ಮದುವೆಗೆ 60,000 ರೂ.ಸಹಾಯಧನ ನೀಡಲು ಸರ್ಕಾರ ಯೋಜನೆ ಜಾರಿ ಮಾಡಿದ್ದು ಅಧಿಕಾರಿಗಳ ನಿರ್ಲಕ್ಷದಿಂದ ನಿಜವಾದ ಕಾರ್ಮಿಕರಿಗೆ ಆ ಯೋಜನೆಯ ಸೌಲಭ್ಯ ದೊರೆಯುತ್ತಿಲ್ಲ ಎಂಬುದು ಇಲ್ಲಿನ ಕಟ್ಟಡ ಕಾರ್ಮಿಕರ ಆರೋಪವಾಗಿದೆ.
ಇಂದು ಕಟ್ಟಡ ಕಾರ್ಮಿಕರು ಚಿಂತಾಮಣಿ ನಗರದ ನಾರಪ್ಪಕುಂಟೆಯ ಬಳಿ ಇರುವ ಕಟ್ಟಡ ಕಾರ್ಮಿಕರ ನಿರೀಕ್ಷಕರ ಕಚೇರಿಗೆ ಫೇರಾವ್ ಹಾಕಿ ಪ್ರತಿಭಟನೆ ನಡೆಸಿದ್ದಲ್ಲದೆ ಕಾರ್ಮಿಕ ನಿರೀಕ್ಷಕರಾದ ಕಲಾವಣಿ ವಿರುದ್ಧ ದಿಕ್ಕಾರಗಳನ್ನು ಕೂಗುತ್ತಾ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಸರಿಯಾದ ರೀತಿಯಲ್ಲಿ ಮಾಹಿತಿ ತಿಳಿಸದೆ ಹಾಗೂ ನೀಡದೆ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕಟ್ಟಡ ಕಾರ್ಮಿಕನಾದ ಗಂಗರಾಜು ಹಾಗೂ ನರಸಿಂಹಪ್ಪ ಏನ್ ಎಂ ರವರು ಮಾತನಾಡಿ 08 ಆಗಸ್ಟ್ 2025 ರಂದು ಶಿಡ್ಲಘಟ್ಟ ತಾಲೂಕಿನ ತಲಕಾಯಲ ಬೆಟ್ಟ ಗ್ರಾಮದ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಅನಿತಾ ಎನ್ ಎನ್ ರವರ ಮದುವೆ ಕಾರ್ಯ ನಡೆದಿದ್ದು,ಮದುವೆ ಸಹಾಯದನ ಪಡೆಯಲು ಕಾರ್ಮಿಕ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲಾಗಿದೆ ಆದರೆ ಕಾರ್ಮಿಕ ಇಲಾಖೆಯ ನಿರೀಕ್ಷಕರು ಉದ್ದೇಶ ಪೂರಕವಾಗಿ ಅರ್ಜಿಯನ್ನು ರದ್ದು ಮಾಡಿದ್ದು ಅಷ್ಟೇ ಅಲ್ಲದೆ ಕಟ್ಟಡ ಕಾರ್ಮಿಕರ ಕಾರ್ಡನ್ನು ರದ್ದುಪಡಿಸಿದ್ದಾರೆ ಎಂದು ಹೇಳಿದ ಅವರು ಇಷ್ಟೆಲ್ಲಾ ಪ್ರಕ್ರಿಯೆಗಳು ಅಧಿಕಾರಿಗೆ ಲಂಚ ಕೊಡದೆ ಇರುವ ಕಾರಣಕ್ಕೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸುಮಾರು ವರ್ಷಗಳಿಂದ ಕಾರ್ಮಿಕ ನಿರೀಕ್ಷಕರು ಸರ್ಕಾರಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದೇ ಇಲ್ಲ ಸಾರ್ವಜನಿಕರು ಇದರ ಬಗ್ಗೆ ಪ್ರಶ್ನೆ ಮಾಡಿದರೆ ಉಡಾಫೆ ಉತ್ತರ ಕೊಡುತ್ತಾರೆ ಕೂಡಲೇ ಇವರನ್ನು ಕೆಲಸದಿಂದ ಅಮಾನತ್ತು ಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಕಟ್ಟಡ ಕಾರ್ಮಿಕರು ಸಚಿವ ಸಂತೋಷ್ ಲಾಡ್ ರವರಿಗೆ ಫೇರಾವ್ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ..? ಒಳಮೀಸಲಾತಿಯಿಂದ ಅನ್ಯಾಯವನ್ನು ಸರಿಪಡಿಸದೇ ಇದ್ದರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ: ಎಂ.ವಿ.ಕೃಷ್ಣಪ್ಪ
ಇನ್ನೂ ಇದನ್ನು ಕುರಿತು ಮಾಧ್ಯಮದವರು ದೂರವಾಣಿ ಮುಖಾಂತರ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ಸಂಪರ್ಕಿಸಿದಾಗ ಅವರು ಇದರ ಬಗ್ಗೆ ಪ್ರತಿಕ್ರಿಯಿಸಿ ಮದುವೆ ಸಹಾಯಧನಕ್ಕಾಗಿ ಚಿಂತಾಮಣಿ ತಾಲ್ಲೂಕಿನ ಯಗವ ಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರಾಮಾಕಲಹಳ್ಳಿ ಗ್ರಾಮದ ನರಸಿಂಹಪ್ಪ ಏನ್ ಎಂ ಎಂಬುವರ ಮಗಳ ಮದುವೆಗೆ ಸಲ್ಲಿಸಿರುವ ಅರ್ಜಿಯನ್ನು ಪರಿಶೀಲನೆ ಮಾಡಲು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸ್ಥಳ ಮಹಾಜರು ಮಾಡಲು ಕಳುಹಿಸಿ ಕೊಟ್ಟು ನಿಜವಾದ ಫಲಾನುಭಾವಿ ಅವರಾಗಿದ್ದರೆ ಸೌಲಭ್ಯ ದೊರಕಿಸಿ ಕೊಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇನ್ನೂ ಪ್ರತಿಭಟನೆ ಮಾಡುತ್ತಿರುವ ವಿಷಯ ತಿಳಿದ ತಕ್ಷಣ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಸಹ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.





