ಕೇಂದ್ರ ಸರ್ಕಾರದ ವಿರುದ್ದ ಸಮರಶೀಲ ಹೋರಾಟಕ್ಕೆ ಕಾರ್ಮಿಕ ವರ್ಗ ಸಜ್ಜಾಗಬೇಕು. ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸಿ ಜಾರಿ ಮಾಡಲು ಹೊರಟ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಹಲವು ರೀತಿಯ ಬೇಡಿಕೆ ಈಡೇರಿಸುವಂತೆ ದೇಶಾದ್ಯಂತ ಕಾರ್ಮಿಕ ವರ್ಗದ ನೇತ್ರತ್ವದಲ್ಲಿ ಬೇಡಿಕೆ ದಿನಾಚರಣೆ ನಡೆಸಬೇಕು ಎಂದು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜೆ ಬಾಲಕೃಷ್ಣ ಶೆಟ್ಟಿ ಕರೆ ನೀಡಿದರು.
ಜಿಲ್ಲೆಯ ಮಂಗಳೂರು ನಗರದಲ್ಲಿ ಸಿಐಟಿಯು ಅಖಿಲ ಭಾರತ ಕರೆಯ ಮೇರೆಗೆ ಮಂಗಳೂರಿನ ಮಿನಿ ವಿಧಾನಸೌಧದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಹಲವು ವಿಭಾಗದ ಕಾರ್ಮಿಕರು ದೇಶವನ್ನು ಲೂಟಿಗೈದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು.
ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹೋರಾಟದ ಬಳಿಕ ಸಿಐಟಿಯು ನಿಯೋಗ ತಹಶೀಲ್ದಾರ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿತು.
“ಕಾರ್ಪೊರೇಟ್ ಕೋಮುವಾದಿಗಳ ಅಕ್ರಮ ಕೂಟವು ದೇಶವನ್ನು ತೀರಾ ಅಧೋಗತಿಗೆ ತಳ್ಳಿದ್ದು, ದೇಶದ ಅರ್ಥ ವ್ಯವಸ್ಥೆಯೇ ತೀರಾ ಸಂಕಷ್ಟದಲ್ಲಿದೆ. ಇವುಗಳ ವಿರುದ್ಧ ಬೆಳೆದುಬಂದ ರೈತ ಕಾರ್ಮಿಕರ ಹೋರಾಟಗಳಿಂದಾಗಿ ನಿರುದ್ಯೋಗ, ಬೆಲೆಯೇರಿಕೆ ರೈತ ಕಾರ್ಮಿಕರ ಸಂಕಷ್ಟಗಳು, ಸರ್ಕಾರದ ಮಾರಕ ದಾಳಿಗಳ ಬಗ್ಗೆ ಜನತೆಯ ಹಾಗೂ ಜಗತ್ತಿನ ಗಮನ ಸೆಳೆಯಲು ಸಾಧ್ಯವಾಯಿತು. ಮಾತ್ರವಲ್ಲದೆ ಈ ಬಾರಿಯ ಚುನಾವಣೆಯಲ್ಲಿಯೂ ದೇಶದ ಜನತೆ ತಕ್ಕಪಾಠವನ್ನು ಕಲಿಸಿದ್ದಾರೆ” ಎಂದು ಬಾಲಕೃಷ್ಣ ಶೆಟ್ಟಿ ತಿಳಿಸಿದರು.
“ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸಿ ನಾಲ್ಕೈದು ವರ್ಷ ಕಳೆದರೂ ಜಾರಿಗೆ ತರಲು ಅಡ್ಡಿಯಾಗಿರುವುದು ಕಾರ್ಮಿಕ ವರ್ಗದ ಸಮರಧೀರ ಹೋರಾಟವೇ ಅಗಿದೆ. ನೂತನ ಕೇಂದ್ರ ಸರ್ಕಾರದ ಮೊದಲ 100 ದಿನಗಳಲ್ಲಿ ಕಾರ್ಮಿಕ ಕಾನೂನುಗಳ ವಿರುದ್ಧ ತೀವ್ರ ದಾಳಿ ನಡೆಸಲು ಸಜ್ಜಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಸಮರಶೀಲ ಹೋರಾಟವನ್ನು ನಡೆಸಲು ಕಾರ್ಮಿಕ ವರ್ಗ ಸಜ್ಜಾಗಬೇಕು”
ಸಿಐಟಿಯು ದ ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, “ನವ ಉದಾರೀಕರಣ ನೀತಿಗಳ ಫಲವಾಗಿ ಕಾರ್ಮಿಕ ವರ್ಗ ವಿಪರೀತ ಸಂಕಷ್ಟಗಳಿಗೆ ಒಳಗಾಗಿದ್ದು, ಕಳೆದ ಕೆಲವು ದಶಕಗಳಿಂದ ಪರಿಣಾಮಕಾರಿ ಹೋರಾಟಗಳ ಮೂಲಕ ಆಳುವ ವರ್ಗದ ನಿದ್ದೆಗೆಡಿಸಿದೆ. ಕೇಂದ್ರದಲ್ಲಿ ಅಧಿಕಾರಕ್ಕೇರಿದ ನೂತನ ಸರ್ಕಾರ ಮತ್ತೆ ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ಜಾರಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಕಾರ್ಪೊರೇಟ್ ಕಂಪೆನಿಗಳನ್ನು ಮೆಚ್ಚಿಸಲು ಹೊರಟಿದೆ” ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ, ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷರೂ ಆಗಿರುವ ಬಿ ಕೆ ಇಮ್ತಿಯಾಜ್ ಮಾತನಾಡಿ, “ಕೇಂದ್ರದ ನರೇಂದ್ರ ಮೋದಿ ಸರ್ಕಾರ 3 ಕರಾಳ ಕಾನೂನುಗಳನ್ನು ಜಾರಿಗೊಳಿಸಿ ದುಡಿಯುವ ವರ್ಗದ ಮೇಲೆ ವ್ಯಾಪಕ ದಾಳಿ ನಡೆಸಲು ತಯಾರಾಗಿದೆ. ನೂತನ ಕ್ರಿಮಿನಲ್ ಸೆಕ್ಷನ್ 285 ಜಾರಿ ಮಾಡಿ ಬಡಪಾಯಿ ಬೀದಿಬದಿ ವ್ಯಾಪಾರಸ್ಥರ ಬದುಕಿಗೆ ಕೊಳ್ಳಿ ಇಡುತ್ತಿದೆ” ಎಂದು ತೀವ್ರವಾಗಿ ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಬದಲಾದ ಸಂಗ್ರಹಿಸಿಟ್ಟ ಕೆಂಪು ಮೆಣಸಿನಕಾಯಿ ಬಣ್ಣ: ಬೆಲೆ ಕುಸಿತದ ಆತಂಕದಲ್ಲಿ ರೈತರು
ಸಿಐಟಿಯು ಜಿಲ್ಲಾ ನಾಯಕ ಯೋಗೀಶ್ ಜಪ್ಪಿನಮೊಗರು, ರೈತ ಸಂಘದ ನಾಯಕ ಸದಾಶಿವದಾಸ್, ದಲಿತ ಹಕ್ಕುಗಳ ಸಮಿತಿ ಮುಖಂಡ ತಿಮ್ಮಯ್ಯ ಕೊಂಚಾಡಿ, ರಾದಾಕ್ರಷ್ಣ ಬೊಂಡಂತಿಲ, ಡಿವೈಎಫ್ಐ ನಾಯಕ ಸಂತೋಷ್ ಬಜಾಲ್, ಮಹಿಳಾ ಮುಖಂಡೆ ಯೋಗಿತಾ ಉಳ್ಳಾಲ, ಜಿಲ್ಲಾ ನಾಯಕರಾದ ಜಯಂತಿ ಶೆಟ್ಟಿ, ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ಅಶೋಕ್ ಶ್ರೀಯಾನ್, ನಾಗೇಶ್ ಕೋಟ್ಯಾನ್, ಭವಾನಿ ವಾಮಂಜೂರು, ಲೋಲಾಕ್ಷಿ ಬಂಟ್ವಾಳ, ಮಹಮ್ಮದ್ ಮುಸ್ತಾಫ, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಅಬ್ದುಲ್ ರೆಹಮಾನ್, ಮುಝಾಫರ್, ಆದಂ ಬಜಾಲ್, ಗಜಾನನ ಸೇರಿದಂತೆ ಇತರರು ಇದ್ದರು.





