ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಎಲ್ಲ ಅಂಗಡಿ ಮುಗ್ಗಟ್ಟು ನಾಮಫಲಕಗಳ ಮೇಲೆ ಸೆಪ್ಟೆಂಬರ್ ಅಂತ್ಯದೊಳಗೆ ಶೇ.60ರಷ್ಟು ದಪ್ಪ ಅಕ್ಷರದಲ್ಲಿ ಕನ್ನಡ ಭಾಷೆಯಲ್ಲಿ ಬರೆಸಬೇಕು ಇಲ್ಲದಿದ್ದರೆ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಜಿಲ್ಲಾ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಭಾಲ್ಕಿ ಪುರಸಭೆ ಕಚೇರಿಯಲ್ಲಿ ಜಿಲ್ಲಾ ನಮ್ಮ ಕರ್ನಾಟಕ ಸೇನೆಯ ಅಧ್ಯಕ್ಷ ಗಣೇಶ ಪಾಟೀಲ್ ನೇತೃತ್ವದಲ್ಲಿ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ʼಎಲ್ಲ ನಾಮಫಲಕಗಳ ಮೇಲೆ ಶೇ.60ರಷ್ಟು ಕನ್ನಡ ಭಾಷೆ ಬರೆಸುವ ಸಂಬಂಧ ಕಳೆದ ಫೆಬ್ರವರಿ ತಿಂಗಳಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಪುರಸಭೆ ಕಚೇರಿಯಲ್ಲಿ ಸಭೆ ನಡೆದಿತ್ತು. ಆ ಸಭೆಯಲ್ಲಿ ಕೆಲ ವ್ಯಾಪಾರಸ್ಥರು ನಾಮಫಲಕ ಬದಲಾವಣೆಗೆ ಕೆಲ ದಿನಗಳ ಸಮಯವಕಾಶ ಕೋರಿದ್ದರು. ಆದರೆ ಸಭೆ ನಡೆದು ಸುಮಾರು ಏಳು ತಿಂಗಳು ಕಳೆದರೂ ಕೂಡ ನಿರೀಕ್ಷಿತ ಮಟ್ಟದಲ್ಲಿ ನಾಮಫಲಕಗಳ ಮೇಲೆ ಕನ್ನಡ ಭಾಷೆ ಬಳಕೆ ಆಗಿಲ್ಲʼ ಎಂದು ಅಸಮಧಾನ ವ್ಯಕ್ತಪಡಿಸಿದರು.
ʼಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಮುಂದಿನ 15 ದಿನದೊಳಗೆಕನ್ನಡಯೇತರ ನಾಮಫಲಕ ಬದಲಾವಣೆಗೆ ಸೂಚಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆʼ ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಿಂದೂ ರಾಷ್ಟ್ರದ ಉದ್ದೇಶ ಸಾಕಾರಗೊಳಿಸಲು ಸ್ಥಳೀಯ ಸಂಸ್ಕೃತಿ ನಾಶ ಮಾಡಲು ಹೊರಟಿದ್ದಾರೆ: ಎ ನಾರಾಯಣ
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ಪ್ರಮುಖರಾದ ಬಸವರಾಜ ಕಾರಬಾರಿ, ಸುದೀಪ ತೂಗಾವೆ, ಜಗದೀಶ ಪಾಟೀಲ್, ರಾಜರತನ ಗಡಿಪಾಟೀಲ್, ನಿಸಾರ ಪಾಶಾ ಸೇರಿದಂತೆ ಹಲವರು ಇದ್ದರು.





