ಮಡಿಕೇರಿ ತಾಲ್ಲೂಕು ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯಲ್ಲಿ ಕೊಡಗು ಜಿಲ್ಲಾ ಕಸಾಪ, ಮಡಿಕೇರಿ ತಾಲೂಕು ಕಸಾಪ ಹಾಗೂ ನಾಪೋಕ್ಲು ಹೋಬಳಿ ಕಸಾಪ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ 2025 -26ರ ಸಾಲಿನ ದಿ. ಕೆ.ಟಿ. ಸುಬ್ಬರಾವ್ ದತ್ತಿ ಹಾಗೂ ದಿ. ದಂಬೆಕೋಡಿ ಚಿಣ್ಣಪ್ಪ ದತ್ತಿ ಉಪನ್ಯಾಸ ಹಾಗೂ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ‘ಕೊಡಗಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ’ ವಿಷಯವಾಗಿ ಮಾತನಾಡಿದ ಸಾಹಿತಿ ಸಿ.ಕೆ. ಕಾವೇರಿ, ‘ಸಾಹಿತಿಗಳು ಮನರಂಜನೆಗಾಗಿ ಬರಹ ಸೀಮಿತಗೊಳಿಸದೆ ಸಮಾಜದ ಮಾರ್ಗದರ್ಶಕರಾಗಬೇಕು’ ಎಂದು ಅಭಿಪ್ರಾಯಪಟ್ಟರು.
“ಕೊಡಗಿನಲ್ಲಿ ಸಾಹಿತ್ಯಕ್ಕೆ ನೆಲೆ ಇಲ್ಲ, ಬೆಲೆ ಇಲ್ಲ ಎಂದು ಹೇಳುತ್ತಿದ್ದ ಕಾಲ ಒಂದಿತ್ತು. ಈಗ ಕನ್ನಡದ ಜೊತೆ ಜೊತೆಗೆ ಕೊಡವ ಸಾಹಿತ್ಯ ಕೂಡ ಬೆಳೆಯುತ್ತಿದೆ. ಮನೆ ಮನೆಗಳಲ್ಲಿ ಓದುಗರಿದ್ದಾರೆ. ಪುಸ್ತಕ ಭಂಡಾರಗಳಿವೆ. ಬರಹಗಳು ಜನರಲ್ಲಿ ನೈತಿಕತೆ, ಜ್ಞಾನ ಮತ್ತು ಸಾಮಾಜಿಕ ಜಾಗೃತಿಯನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯವು ರಾಷ್ಟ್ರಭಕ್ತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿ ಆಗಬೇಕು ಕೊಡಗಿನ ವಿಶಿಷ್ಟ ಸಂಸ್ಕೃತಿ, ಪರಂಪರೆ ಮತ್ತು ಪ್ರಕೃತಿ ಸೌಂದರ್ಯಕ್ಕೆ ಎಂಥವರನ್ನೂ ಕವಿಯಾಗಿ ಮಾಡುವ ಶಕ್ತಿ ಇದೆ, ಇಂತಹ ನೆಲದಲ್ಲಿ ಕಾವೇರಿ ನದಿಗೆ ಸಿಕ್ಕಿರುವ ಪೂಜನೀಯ ಸ್ಥಾನ ಕನ್ನಡ ಭಾಷೆಗೂ ದೊರಕುವಂತಾಗಬೇಕು” ಎಂದರು.
“9ನೇ ಶತಮಾನದಲ್ಲಿ ರಾಜ್ಯಭಾರ ಮಾಡಿದ ಗಂಗರು, ಕೊಂಗಾಳ್ವರು, ಹೊಯ್ಸಳರು ಹಾಗೂ ಹಾಲೇರಿ ಅರಸರು ಹಳಗನ್ನಡದಲ್ಲಿ ರಚಿಸಿದ ಶಾಸನಗಳು ಕೊಡಗಿನಲ್ಲಿ ಕನ್ನಡದ ಬೆಳವಣಿಗೆಗೆ ನಾಂದಿ ಹಾಡಿತು, ಆನಂತರದ ದಿನಗಳಲ್ಲಿ ಹಲವು ಬರಹಗಾರರು ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಜಿಲ್ಲೆಯಲ್ಲಿ ಅಪ್ಪನೆರವಂಡ ಅಪ್ಪಚ್ಚಕವಿ, ಪಂಜೆ ಮಂಗೇಶರಾಯರು ನಡಿಕೇರಿಯಂಡ ಚಿಣ್ಣಪ್ಪ, ಡಾ. ಐ.ಮಾ. ಮುತ್ತಣ್ಣ, ಬಿ.ಡಿ. ಗಣಪತಿ, ಬಿ.ಡಿ. ಸುಬ್ಬಯ್ಯ ಎಸ್.ಆರ್. ನಾರಾಯಣರಾವ್ ಸೇರಿದಂತೆ ಹಲವರು ಕೊಡಗಿನ ಸಾಹಿತ್ಯದ ಬೆಳವಣಿಗೆ ಕಾರಣಕರ್ತರಾಗಿದ್ದಾರೆ. ಕೊಡಗಿನಲ್ಲಿ ಪತ್ರಿಕೆಗಳು ಕೂಡ ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು, ಸಾಹಿತ್ಯ ಪರಿಷತ್ತಿನ ಹಲವು ಸಮ್ಮೇಳನಗಳು ಕೊಡಗಿನಲ್ಲಿ ಆಯೋಜಿಸಲ್ಪಟ್ಟಿದೆ. ಕೊಡಗಿನಲ್ಲಿ ಸಾಹಿತ್ಯಕ್ಕೆ ಸಾಕಷ್ಟು ಉತ್ತೇಜನ ಇದೆ” ಎಂದರು.
ನೇತಾಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಮಾತನಾಡಿ, “ಕನ್ನಡ ಸ್ನೇಹಜೀವಿ ಭಾಷೆ. ಇದಕ್ಕೆ 2500 ವರ್ಷಗಳ ಇತಿಹಾಸವಿದೆ. ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಯನ್ನು ಅಭಿಮಾನದಿಂದ ಬಳಸಬೇಕಾಗಿದೆ” ಎಂದರು.
ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, “ಕನ್ನಡ ನಾಡು-ನುಡಿಯ ಪರಂಪರೆಯ ರಕ್ಷಣೆ ಆಗಬೇಕಿದೆ. ಇದಕ್ಕಾಗಿ ಸಾಹಿತ್ಯ ಪರಿಷತ್ತು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಶಾಲೆಗಳಲ್ಲಿ ದತ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಬಗ್ಗೆ ಅಭಿಮಾನ ಮೂಡಿಸುತ್ತಿದೆ. ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆಗೆ ದಿನಪತ್ರಿಕೆಗಳನ್ನು ಓದಬೇಕು. ಹೆಚ್ಚು ಕಲಿತಷ್ಟು ಜ್ಞಾನ ವೃದ್ಧಿಯಾಗುತ್ತದೆ. ಪಠ್ಯಪುಸ್ತಕದ ಹೊರತಾಗಿ ಕಲಿಯುವುದು ಬೇಕಾದಷ್ಟಿದೆ. ವಿದ್ಯಾರ್ಥಿಗಳು ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆನೀಡಿದರು.
ಈ ಸುದ್ದಿ ಓದಿದ್ದೀರಾ?ಮೈಸೂರು, ಕೊಡಗು ಸೇರಿದಂತೆ ವಿವಿಧೆಡೆ ಗುಡುಗು ಸಹಿತ ಮಳೆ
ಮಡಿಕೇರಿತಾಲೂಕು ಕಸಾಪ ಅಧ್ಯಕ್ಷೆ ತುಳಸಿ ಮೋಹನ್, ಕೊಡಗು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ, ಪುದಿಯನೆರವನ ರೇವತಿ ರಮೇಶ್, ನೇತಾಜಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಸಿ.ಎಸ್. ಸುರೇಶ್, ಸಂಘಟನಾ ಕಾರ್ಯದರ್ಶಿ ಬಿ.ಎನ್. ವಾಸುರೈ ಕಾರ್ಯಕ್ರಮದಲ್ಲಿ ಇದ್ದರು.





