ಮಕ್ಕಳನ್ನು ಶಿಕ್ಷಣದಿಂದ ದೂರ ಮಾಡುತ್ತಿರುವ ಬಾಲಕಾರ್ಮಿಕತೆ ಬಗ್ಗೆ ಸಮುದಾಯದಲ್ಲಿ ಸ್ಪಷ್ಟ ಅರಿವು ಮೂಡಿಸುವ ಉದ್ದೇಶದಿಂದ
ಶಹಾಪೂರ ತಾಲ್ಲೂಕಿನ ಬೆನಕನಹಳ್ಳಿ (ಜಾಗೀರ್) ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸರ್ವೋದಯ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್ ಕನ್ನೆಕೋಳೂರ ವತಿಯಿಂದ ಸೋಮವಾರ ಬಾಲಕಾರ್ಮಿಕತೆ ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ಶ್ರೀಕೃಷ್ಣ ಚಕ್ರವರ್ತಿಯವರು ಮಾತನಾಡಿ, ‘ಬಾಲಕಾರ್ಮಿಕತೆ ವಿರುದ್ಧವಾಗಿ ಸಮಾಜ ಒಗ್ಗಟ್ಟಾಗಿ ನಿಂತಾಗ ಮಾತ್ರ ಶಾಶ್ವತ ಬದಲಾವಣೆ ಸಾಧ್ಯ. ವ್ಯಕ್ತಿಯೊಬ್ಬನು ತೆಗೆದುಕೊಳ್ಳುವ ಒಂದು ಸಣ್ಣ ಜಾಗೃತಿಪೂರ್ಣ ಹೆಜ್ಜೆಯೂ ದೊಡ್ಡ ಪರಿವರ್ತನೆಯ ಬೀಜವಾಗಬಹುದು. ಶಾಲೆ ಬಿಟ್ಟುವುದು ಬಾಲಕಾರ್ಮಿಕತೆಯ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ಮಕ್ಕಳು ಶಿಕ್ಷಣದಿಂದ ದೂರವಾಗಲು ಯಾವ ಕಾರಣವಿದ್ದರೂ ಅದರ ಪರಿಹಾರ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಲ್ಲಿ ಲಭ್ಯವಿದೆ’ ಎಂದು ಅವರು ವಿವರಿಸಿದರು.
‘ಶಿಕ್ಷಣಕ್ಕೆ ಅಡ್ಡಿಯಾಗುವ ಸಮಸ್ಯೆಗಳು ಎದುರಾದಾಗ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಯಾವುದೇ ಕಾರಣಕ್ಕೂ ಶಾಲೆ ಬಿಡಬಾರದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು, ವಿದ್ಯಾರ್ಥಿಗಳು ಅಥವಾ ಅವರ ಪರಿಚಿತರಾದ ಇನ್ನಾವ್ಯಕ್ತಿಯು ಬಾಲಕಾರ್ಮಿಕತೆಗೆ ಒಳಪಟ್ಟಿರುವುದು ಕಂಡುಬಂದರೆ ತಕ್ಷಣವೇ ಚೈಲ್ಡ್ಲೈನ್ 1098 ಅಥವಾ ಪೋಲೀಸ್ ಸಹಾಯವಾಣಿ 112ಗೆ ಮಾಹಿತಿ ನೀಡಬೇಕು. ಶಾಲೆ ಬಿಟ್ಟು ಬಾಲಕಾರ್ಮಿಕತೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಉಂಟಾಗುವ ದೈಹಿಕ, ಮಾನಸಿಕ ಹಾನಿ, ಶಿಕ್ಷಣದ ವ್ಯತ್ಯಯ ಮತ್ತು ಭವಿಷ್ಯದ ಉದ್ಯೋಗಾವಕಾಶಗಳ ನಷ್ಟದ ಕುರಿತು ಅಂಕಿ, ಅಂಶಗಳ ಸಹಿತ ಪ್ರಾಯೋಗಿಕ ಉದಾಹರಣೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಜಾಗೃತಿ’ ಮೂಡಿಸಲಾಯಿತು.
ಇದೆ ವೇಳೆ ಶಾಲೆಯ ಸಹ ಶಿಕ್ಷಕರಾದ ದುರುಗೇಶ್ ಅವರು ಮಾತನಾಡಿ, ‘ಮಕ್ಕಳಿಗೆ ಶಿಕ್ಷಣವೇ ಭವಿಷ್ಯದ ಭದ್ರತೆ ಎಂದು ತಿಳಿಸಿದರು. ಪಾಠಗಳನ್ನು ತಪ್ಪಿಸಿಕೊಳ್ಳದೆ ದಿನನಿತ್ಯವಾಗಿ ಶಾಲೆಗೆ ಹಾಜರಾಗುವುದು ಉತ್ತಮ ಭವಿಷ್ಯ ನಿರ್ಮಾಣದ ಮೊದಲ ಹಂತವಾಗಿದೆ. ಪೋಷಕರು ಮಕ್ಕಳು ಶಿಕ್ಷಣದಲ್ಲಿ ಜಾಗರೂಕತೆಯಿಂದ ಪಾಲ್ಗೊಳ್ಳುವ ಅಗತ್ಯವಿದೆ’ ಎಂದು ಒತ್ತಿ ಹೇಳಿದರು.
ಸಹ ಶಿಕ್ಷಕಿಯರಾದ ಚಂದ್ರಕಲಾ ಅವರು ‘ಬಾಲ್ಯವಿವಾಹವನ್ನೂ ಬಾಲಪೀಡೆಗೆ ಕಾರಣವಾಗುವ ಮತ್ತೊಂದು ಗಂಭೀರ ಸಾಮಾಜಿಕ ಸಮಸ್ಯೆ ಎಂದು ವಿವರಿಸಿ, ಅದನ್ನು ನಿರ್ಮೂಲಗೊಳಿಸಲು ಕುಟುಂಬ ಹಾಗೂ ಸಮಾಜದ ಜಾಗೃತಿ ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ಯಾವುದೇ ರೀತಿಯ ಅನುಮಾನಾಸ್ಪದ ಘಟನೆ ಕಂಡಾಗ ಅದನ್ನು ಶಿಕ್ಷಕರಿಗೆ ತಿಳಿಸಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಗಂಗಾಬಾಯಿ ಮತ್ತು ಪ್ರತಿಭಾ ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಕಲಬುರಗಿ | ಸರಕಾರ ಶಾಲೆ ಉಳಿಸಲು ಎಐಡಿಎಸ್ಒ ಬೃಹತ್ ಪ್ರತಿಭಟನೆ
ಕಾರ್ಯಕ್ರಮವನ್ನು ಮೋಹನಕುಮಾರ ಹೊಸ್ಮನಿ ಅವರು ಸಂಪೂರ್ಣ ಕಾರ್ಯಕ್ರಮವನ್ನು ನಿರೂಪಿಸಿ, ಟ್ರಸ್ಟ್ನ ಅಧ್ಯಕ್ಷ ಪ್ರಭಾಕರ ಹೊಸ್ಮನಿ ವಂದಿಸಿದರು.
ಬಾಲಕಾರ್ಮಿಕತೆ ನಿರ್ಮೂಲನೆಗಾಗಿ ಸರ್ಕಾರ, ಶಾಲೆ, ಪೋಷಕರು ಮತ್ತು ಸಮಾಜ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಶಕ್ತಿಶಾಲಿ ಬದಲಾವಣೆ ಸಾಧ್ಯವೆಂಬ ಸಂದೇಶದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.





