ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಿ ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸಿ ಬ್ರಾಹ್ಮಣ್ಯವಾದಿ ಆಡಳಿತವನ್ನು ಮುಂದುವರಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕುತಂತ್ರ ನಡೆಸುತ್ತಿದೆ ಎಂದು ಆರೋಪಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ತಾಲೂಕು ಸಮಿತಿ ಶಹಾಪುರ ಘಟಕದ ವತಿಯಿಂದ ತಹಶಿಲ್ದಾರರ ಕಚೇರಿ ಎದುರುಗಡೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಧ್ವಜ, ಫಲಕಗಳನ್ನು ಹಿಡಿದು “ಸಂವಿಧಾನ ಉಳಿಸೋಣ”, “ಮನುವಾದಕ್ಕೆ ಮುಕ್ತಿ ಕೊಡೋಣ”, “ಅಂಬೇಡ್ಕರ್ ಚಿಂತನೆ ನಮ್ಮ ಹಾದಿ” ಎಂದು ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಂತರ ಶಹಾಪುರ್ ತಾಲೂಕು ದಂಡಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ದಸಂಸ ಅಂಬೇಡ್ಕರ್ವಾದ ತಾಲೂಕು ಸಂಚಾಲಕ ಚಂದ್ರಕಾಂತ ಬಜೇರಿ ಮಾತನಾಡಿ, ‘1950ರ ದಶಕದಲ್ಲಿಯೇ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಆರ್ಎಸ್ಎಸ್ ಹಾಗೂ ವಿಶ್ವ ಹಿಂದೂ ಮಹಾಸಭೆಯಂತಹ ಸಂಘಟನೆಗಳ ಅಪಾಯಕಾರಿ ಮನೋಭಾವದ ಬಗ್ಗೆ ಎಚ್ಚರಿಕೆ ನೀಡಿದ್ದರು. ಅವರು ಸಂವಿಧಾನ ರಚಿಸಿದ ನಂತರ ಆರ್ಎಸ್ಎಸ್ ತನ್ನ ಪತ್ರಿಕೆಯಲ್ಲಿ ಸಂವಿಧಾನ ವಿರೋಧಿ ಲೇಖನಗಳನ್ನು ಪ್ರಕಟಿಸಿತ್ತು. ಇದು ಅವರ ಮನುವಾದಿ ಮನೋಭಾವವನ್ನು ಬಯಲಿಗೆಳೆಯುತ್ತದೆ,” ಎಂದು ಹೇಳಿದರು.

ಅವರು ಮುಂದುವರಿಸಿ, “ಹಿಂದೂ ಮಹಿಳೆಯರಿಗೆ ಸಮಾನ ಹಕ್ಕು ನೀಡಲು ಬಾಬಾ ಸಾಹೇಬ ಹೋರಾಡುತ್ತಿದ್ದಾಗ, ಆರ್ಎಸ್ಎಸ್ ಹಿಂದೂ ಕೋಡ್ ಬಿಲ್ ಪ್ರತಿಯನ್ನು ಸುಟ್ಟು ವಿರೋಧಿಸಿತ್ತು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಗವಾಯಿಯವರ ಮೇಲೆ ಶೂ ಎಸೆದ ಘಟನೆ ಕೂಡಾ ಅದೇ ಮನೋಭಾವದ ಪ್ರತಿಫಲವಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ ಘಟನೆಯನ್ನು ಖಂಡಿಸಿದ ಅವರು, ‘ಮನುವಾದಿ ಶಕ್ತಿಗಳು ಪ್ರಜಾಸತ್ತಾತ್ಮಕ ಧ್ವನಿಗಳನ್ನು ಕುಗ್ಗಿಸಲು ಯತ್ನಿಸುತ್ತಿವೆ. ಸಂವಿಧಾನದ ಮೌಲ್ಯಗಳ ವಿರುದ್ಧ ನಡೆಯುತ್ತಿರುವ ಇಂತಹ ಅಂಶಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು,’ ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಗುಲ್ಬರ್ಗಾ ವಿವಿಗೆ ಅಂಬೇಡ್ಕರ್ ಹೆಸರಿಡುವಂತೆ ದಸಂಸ ಆಗ್ರಹ
‘ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರು ಇಡುವುದು, ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಪ್ರಕಾರ ಜೀವಾವಧಿ ಶಿಕ್ಷೆ ವಿಧಿಸುವುದು, ಚಿತ್ತಾಪುರದಲ್ಲಿ ಅನುಮತಿ ಇಲ್ಲದೆ ಪಥಸಂಚಲನ ನಡೆಸಿದರೆ ಆರ್ಎಸ್ಎಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ’ ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಾಗಣ್ಣ ಬಡಿಗೇರ, ಬಸವರಾಜ ಅಣಬಿ, ಪರಶುರಾಮ ಮಹಲ್ರೋಜಾ, ಶ್ರೀಶೈಲ್ ರಾಜಾಪೂರ, ನಾಗರಾಜ ಬೊಮ್ಮನಹಳ್ಳಿ, ಹಯ್ಯಾಳಪ್ಪ ದೇವಕರ್, ಅನೀಲ್ ಸಾಕ್ರೆ, ಮಾನಪ್ಪ ಮುದಕನವರ, ಮಹಾಂತೇಶ ಪೂಜಾರಿ, ಮರೆಪ್ಪ ಮಹಲ್ರೋಜಾ, ಶರಣು ಸಾಧು ಸಗರ, ಗದ್ದಿಗೆಪ್ಪ ಇಬ್ರಾಹಿಂಪೂರ, ಬಸವರಾಜ ಮುದ್ದನರ್, ಸುರೇಶ ಸಗರ ಸೇರಿದಂತೆ ಅನೇಕರಿದ್ದರು.





