ಭಾರತೀಯ ಬೌದ್ಧ ಮಹಾಸಭಾ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಅವರ ನೇತೃತ್ವದಲ್ಲಿ 69ನೇ ಧಮ್ಮಚಕ್ರ ಪ್ರವರ್ತನಾ ದಿನ ಹಾಗೂ ತಥಾಗತ ಭಗವಾನ್ ಗೌತಮ ಬುದ್ಧರ ಭಾವಚಿತ್ರ ಉದ್ಘಾಟನಾ ಸಮಾರಂಭವನ್ನು ಅಶೋಕನಗರದಲ್ಲಿ ಮಂಗಳವಾರ ಬೌದ್ಧ ವಿಹಾರಕ್ಕಾಗಿ ಮಂಜೂರಾದ ಜಮೀನಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಉದ್ಘಾಟನಾ ಭಾಷಣ ಮಾಡಿದ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರು ಅವರು, “ಬೌದ್ಧ ಧರ್ಮ ಜಗತ್ತಿನ ಮೊಟ್ಟಮೊದಲ ಬೆಳಕು. ಬುದ್ಧ 45 ವರ್ಷಗಳ ಕಾಲ ಸತ್ಯ ಬೋಧನೆ ಮಾಡಿ ಮಾನವೀಯತೆ ಸಾರಿದರು. ಬುದ್ಧ ಸಿದ್ಧಾಂತಗಳಲ್ಲಿ ನಡೆಯುವುದು ಸಮಾಜದ ಪ್ರಗತಿಗೆ ದಾರಿ ಎಂದು ಹೇಳಿದರು. ಅಶೋಕನಗರದ ಬೌದ್ಧ ವಿಹಾರಕ್ಕಾಗಿ ಎರಡು ಎಕರೆ ಜಮೀನು, ಕುಡಿಯುವ ನೀರು ಮತ್ತು ಕಲ್ಯಾಣ ಮಂಟಪ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಇದನ್ನೂ ಓದಿ: ಯಾದಗಿರಿ | ಸಿಜೆಐ ಮೇಲೆ ಶೂ ಎಸೆದ ಘಟನೆ ಖಂಡಿಸಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ
ಬಿ. ದರ್ಶನ ಮಾತನಾಡಿ, “ಜಾತಿ ವಿಮೋಚನೆಗೆ ಬೌದ್ಧ ಧರ್ಮವೇ ಮಾರ್ಗ. ಜಾತಿರಹಿತ ಸಮಾಜ ಕಟ್ಟುವುದು ಧಮ್ಮದ ಮೂಲಕವೇ ಸಾಧ್ಯ. ಸಿಜೆಐ ಬಿ.ಆರ್. ಗವಾಯಿ ಅವರ ಕುಟುಂಬ ಮೊಟ್ಟಮೊದಲು ಬೌದ್ಧ ಧರ್ಮ ಸ್ವೀಕರಿಸಿದ್ದು, ಧರ್ಮದ ಅಂತರರಾಷ್ಟ್ರೀಯ ಏಕತೆಗಾಗಿ ಮಾದರಿಯಾಗಿದೆ” ಎಂದರು.
ಬಿ.ಆರ್. ಕೃಷ್ಣಯ್ಯ ಮಾತನಾಡಿ, “ರಾಜಕೀಯವನ್ನು ಧರ್ಮದ ಆಧಾರದ ಮೇಲೆ ಸಂಘಟಿಸಬೇಕು. ಬುದ್ಧನು ನೀರು, ಗಾಳಿ, ಬೆಳಕು ಎಲ್ಲರಿಗೂ ಸಮಾನವಾಗಿ ಸಿಗಬೇಕು ಎಂದು ಹೇಳಿದರು. ವರ್ಣಭೇದ, ಜಾತಿಭೇದಗಳ ವಿರುದ್ಧ ಬುದ್ಧನ ಧರ್ಮ ಸತ್ಯವಾದ ಹೋರಾಟ” ಎಂದು ಹೇಳಿದರು.
ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಮಾತನಾಡಿ, ʼಬುದ್ಧ, ಬಸವ, ಅಂಬೇಡ್ಕರ್ ತತ್ವಗಳಿಗೆ ವಿರುದ್ಧವಾಗಿ ಮನುಸ್ಮೃತಿಯ ನಿಲುವುಗಳು ದೇಶಕ್ಕೆ ಅಪಾಯ. ಬುದ್ಧ ವಿಚಾರಗಳು ಮನೆಮನೆಗೆ ತಲುಪಿಸಬೇಕುʼ ಎಂದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಹೇಳಿದರು, ʼಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ವೈಜ್ಞಾನಿಕ ಆಧಾರದ ಮೇಲೆ ಸ್ವೀಕರಿಸಿದರು. ಧರ್ಮದಲ್ಲಿ ಮೂಢನಂಬಿಕೆ ಇಲ್ಲ, ಪುನರ್ಜನ್ಮವಿಲ್ಲ. 25ಲಕ್ಷ ಜನ ಸಮೀಕ್ಷೆಯಲ್ಲಿ ಬೌದ್ಧ ಧರ್ಮ ಎಂದು ಬರೆಸುತ್ತಾರೆಂಬ ನಂಬಿಕೆ ಇದೆ ಎಂದುʼ ಹೇಳಿದರು.
ಶ್ರೀನಿವಾಸ ನಾಯಕ್ ಮಾತನಾಡಿ, ʼಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಜಾತಿಗೆ ಸೀಮಿತಗೊಳಿಸದೆ, ಅವರ ವಿಚಾರಗಳನ್ನು ಜೀವನದ ಭಾಗವನ್ನಾಗಿ ಮಾಡಬೇಕುʼ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಸಂಸ ಕ್ರಾಂತಿಕಾರಿ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಅವರು ಬೌದ್ಧ ಧರ್ಮದ ತತ್ವ ಮತ್ತು ಅಂಬೇಡ್ಕರ್ ಅವರ ಕನಸುಗಳ ಸಾಧನೆಯ ಅಗತ್ಯತೆ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ದರ್ಶನ ಬಿ. ಸೊಮಶೇಖರ್ ಧಮ್ಮಚಕ್ರ ಪೂಜೆಯನ್ನು ನೆರವೇರಿಸಿದರು. ಮಹಾಸಭಾದ ಅಧ್ಯಕ್ಷ ಮನೋಹರ್ ಮೋರೆ ಪಂಚಶೀಲ ಧ್ವಜಾರೋಹಣ ಮಾಡಿದರು. ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರು ಅವರು ತಥಾಗತ ಗೌತಮ ಬುದ್ಧರ ಭಾವಚಿತ್ರವನ್ನು ಉದ್ಘಾಟಿಸಿ ಸಸಿಗೆ ನೀರುಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಬೌದ್ಧ ತ್ರಿಪಿಟಕ ಪಠಣ ನಡೆಯಿತು.
ಕಾರ್ಯಕ್ರಮದಲ್ಲಿ ದಸಂಸ ಕ್ರಾಂತಿಕಾರಿ ನಾಯಕರು ಅರ್ಜುನ್ ಭದ್ರೆ, ಮರೆಪ್ಪ ಹಳ್ಳಿ, ಕಾಶೀನಾಥ್ ನಾಟೀಕರ್, ಮಲ್ಲಿಕಾರ್ಜುನ ಕುರಕುಂದಿ, ಅಜೀಜ್ ಸಾಬ್ ಐಕೂರ್, ಡಾ. ಮಲ್ಲಿಕಾರ್ಜುನ ಆಶಿನಾಳ, ಮಲ್ಲಿಕಾರ್ಜುನ ತಳ್ಳಳ್ಳಿ, ಸೂರ್ಯಕಾಂತ ಅಜಾತಪುರ್, ಚಂದಪ್ಪ ಕಟ್ಟಿಮನಿ, ರೇವಣಸಿದಪ್ಪ ಮಾಲಗತ್ತಿ, ರಾಹುಲ್ ಕೋಳ್ಳುಕರ್, ನಿಂಗಪ್ಪ ಕೊಲೂರ್, ಚಂದಪ್ಪ ಮುನಿಯಪ್ಪನೋರ್, ಮಲ್ಲಿಕಾರ್ಜುನ ಖನ್ನಾ, ಮಹೇಶ್ ಕೋಕಿಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





