ಶಹಾಪೂರ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ (ಗ್ರಾ.ಕು.ನೀ.ನೈ.) ಉಪವಿಭಾಗದಲ್ಲಿ ನೀರಿನ ಮಾದರಿ ಸಂಗ್ರಾಹಕ ಹುದ್ದೆಗೆ ಕಾನೂನು ಬಾಹಿರವಾಗಿ ನೇಮಕಾತಿ ನಡೆದಿರುವುದನ್ನು ಖಂಡಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ನೀಲಿ ಸೇನೆಯ ರಾಜ್ಯ ಉಪಾಧ್ಯಕ್ಷ ಜಾಪರ ಹುಸೇನಿ ಅವರು ಉಸ್ತುವಾರಿ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಆಯರೆಡ್ಡಿ ಅವರನ್ನು ತಕ್ಷಣ ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ‘ಶಹಾಪೂರ ಉಪವಿಭಾಗದ ಗ್ರಾ.ಕು.ನೀ.ನೈ. ಕಚೇರಿಯಲ್ಲಿ ಖಾಲಿ ಇರುವ ನೀರಿನ ಮಾದರಿ ಸಂಗ್ರಾಹಕ ಹುದ್ದೆಗೆ ಯಾವುದೇ ಸಾರ್ವಜನಿಕ ಪ್ರಕಟಣೆ, ಮೆರಿಟ್ ಆಧಾರಿತ ಆಯ್ಕೆ, ಮೀಸಲಾತಿ ನಿಯಮ ಅಥವಾ ಪಾರದರ್ಶಕ ಪ್ರಕ್ರಿಯೆ ಅನುಸರಿಸದೆ ಕಾನೂನುಬಾಹಿರವಾಗಿ ಆಯ್ಕೆ ಮಾಡಲಾಗಿದೆ. ಇದು ಸರ್ಕಾರದ ನೇಮಕಾತಿ ನಿಯಮಾವಳಿಗಳಿಗೆ ವಿರುದ್ಧವಾಗಿದೆ’ ಎಂದು ಆರೋಪಿಸಿದರು.
ಮುಂದುವರಿದು ಅವರು, ‘ಹುದ್ದೆ ಭರ್ತಿಯಲ್ಲಿ ಪಾರದರ್ಶಕತೆ ಹಾಗೂ ಅರ್ಹತಾ ಮಾನದಂಡಗಳನ್ನು ಪಾಲಿಸಬೇಕು. ಅನರ್ಹ ವ್ಯಕ್ತಿಯನ್ನು ನೇಮಕ ಮಾಡುವುದು ಸರಕಾರದ ನೀತಿಗೆ ಧಕ್ಕೆ ತರುತ್ತದೆ. ಆದ್ದರಿಂದ ಈ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ರದ್ದುಪಡಿಸಿ, ನಿಯಮಾನುಸಾರವಾಗಿ ಹೊಸ ಆಯ್ಕೆ ಪ್ರಕ್ರಿಯೆ ಕೈಗೊಳ್ಳಬೇಕು,’ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಚಿತ್ತಾಪುರ ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ವಿಚಾರಣೆ ನ.13ಕ್ಕೆ ಮುಂದೂಡಿಕೆ
‘ಒಂದು ವೇಳೆ ನೇಮಕಾತಿಯನ್ನು ತಡೆಯದಿದ್ದರೆ ಶಹಾಪೂರ ಉಪವಿಭಾಗದ ಕಚೇರಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದೆಂದು’ ಎಚ್ಚರಿಕೆ ನೀಡುವುದರ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಅಧ್ಯಕ್ಷ ವಾಲ್ಮೀಕಿ ನಾಯಕರ, ವಿಶ್ವರಾಧ್ಯ ದಳವಾಯಿ, ಕಾಸಿಮಸಾಬ ನಡಿಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





