ಯಾದಗಿರಿ ಜಿಲ್ಲೆಯ ಸುರಪುರನಲ್ಲಿ ಡಾ.ಅಂಬೇಡ್ಕರ್ ಹೆಸರಲ್ಲಿ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಸಚಿವರಾದ ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ, ಎಚ್.ಸಿ ಮಹದೇವಪ್ಪ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು.
ಸುಮಾರು 40ಕ್ಕೂ ಅಧಿಕ ವರ್ಷಗಳಿಂದ ಕಬ್ಜದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಸುತ್ತ ಅಭಿವೃದ್ಧಿ ಪಡಿಸಲು ಮತ್ತು ದಲಿತ ಸಮಾಜದ ಉದ್ದಾರಕ್ಕಾಗಿ ಡಾ.ಅಂಬೇಡ್ಕರ್ ಅವರ ಹೆಸರಲ್ಲಿ ಗ್ರಂಥಾಲಯ ಉದ್ಯಾನವನ, ಮತ್ತು ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ಅವಶ್ಯಕತೆಯಿರುವ ಜಾಗ ಒತ್ತುವರಿಯಾದ 2 ಎಕರೆ 26 ಗುಂಟೆ ಭೂಮಿಯನ್ನು ಮಂಜೂರು ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಆಗ್ರಹಿಸಿದರು.
ಈ ಜಾಗಕ್ಕೆ ಯಾವುದೇ ಸಂಬಂಧವಿಲ್ಲದ ಮಹರ್ಷಿ ವಾಲ್ಮೀಕಿ ಧ್ವಜಗಳನ್ನು ಸಾಮ್ರಾಟ್ ಅಶೋಕ ಚಕ್ರದ ನೀಲಿ ಧ್ವಜಗಳ ಪಕ್ಕದಲ್ಲಿಯೇ ಹಾಕಿ ಕೆಲವರು ಉದ್ದೇಶ ಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕೂಡಲೇ ಕ್ರಮ ವಹಿಸಬೇಕೆಂದು ಗೃಹ ಮಂತ್ರಿ ಡಾ.ಜಿ ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು.

ಕಳೆದ ಜುಲೈ 25ರಂದು ಈ ಸದರಿ ವಿಚಾರವಾಗಿ ಹೋರಾಟ ಮಾಡುವುದರ ಮುಖಾಂತರ ಸುರಪುರದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಆಗಸ್ಟ್ 11ರವರೆಗೂ ಗಡುವು ಕೊಟ್ಟಿದ್ದೇವೆ. ಒಂದು ವೇಳೆ ನಮ್ಮ ಬೇಡಿಕೆ ಈಡೇರಿಸದೆ ಇದ್ದಲ್ಲಿ ಆಗಸ್ಟ್ 11ರ ನಂತರ ನಮ್ಮ ಮುಂದಿನ ಹೋರಾಟದ ರೂಪರೇಷಗಳ ಬಗ್ಗೆ ದಲಿತ ಸಂಘಟನೆಗಳ ಒಕ್ಕೂಟ ನಿರ್ಧರಿಸಲಿದೆʼ ಎಂದು ತಿಳಿಸಿದ್ದಾರೆ.
ʼಯಾವುದೇ ಕಾರಣಕ್ಕೂ ಅನ್ಯಾಯ, ದೌರ್ಜನ್ಯ ನಾವು ಸಹಿಸುವುದಿಲ್ಲ. ಸ್ಪಷ್ಟವಾದಂತಹ ಸಂದೇಶವನ್ನು ದಲಿತ ಸಮಾಜದ ವತಿಯಿಂದ ನೀಡಲಾಗಿದ್ದು, ನಮ್ಮ ಹೋರಾಟ ಅಕ್ರಮ ಭೂಮಿ ಕಬಳಿಸಿದ ಸೊಸೈಟಿಯ ವಿರುದ್ಧವೇ ಹೊರತು ಯಾವುದೇ ಸಮುದಾಯದ ವಿರುದ್ಧವಲ್ಲ ಮತ್ತು ವ್ಯಕ್ತಿಗಳ ವಿರುದ್ಧವಲ್ಲ. ಕಾನೂನನ್ನು ಗೌರವಿಸಿ ಸಂವಿಧಾನದಡಿಯಲ್ಲಿ ನಮ್ಮ ಹಕ್ಕುಗಳನ್ನು ಪಡೆಯುತ್ತೇವೆʼ ಎಂದು ಹೇಳಿದರು.

ʼಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡಲು ಅವಕಾಶ ನೀಡಿ ಅಶಾಂತಿಗೆ ಕಾರಣವಾದ ಸುರಪುರ ಪೊಲೀಸ್ ಇನ್ಸ್ಪೆಕ್ಟರ್ ಅವರನ್ನು ವಜಾ ಮಾಡಬೇಕೆಂದು ಒತ್ತಾಯಿಸಿದರು. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಲ್ಲಿ ಭೂಮಿ ಮಂಜೂರು ಮಾಡಲು ಹೋರಾಟವನ್ನು ತೀವ್ರಗೊಳಿಸಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಕೋಮುವಾದಿ ವ್ಯಕ್ತಿಗಳನ್ನು ಜಿಲ್ಲೆಯಿಂದ ಹೊರಹಾಕಿ: ಜಿಲ್ಲಾಡಳಿತಕ್ಕೆ ಡಾ. ನಂದಕುಮಾರ್ ಆಗ್ರಹ
ನಿಯೋಗದಲ್ಲಿ ದಸಂಸ ಮುಖಂಡರಾದ ಮಾವಳ್ಳಿ ಶಂಕರ್, ಅರ್ಜುನ್ ಭದ್ರೆ, ಮಲ್ಲಿಕಾರ್ಜುನ್ ಕ್ರಾಂತಿ, ಮಾನಪ್ಪ ಕಟ್ಟಿಮನಿ, ವೆಂಕಟೇಶ್ ಹೊಸಮನಿ, ರಾಹುಲ್ ಹುಲಿಮನಿ, ಹಣಮಂತ ಹೊಸಮನಿ, ಮಾಳಪ್ಪ ಕಿರದಳ್ಳಿ. ಶಿವಲಿಂಗ ಹಸನಾಪೂರ, ಶಿವಶಂಕರ ಹೊಸಮನಿ, ಹಣಮಂತ ಭದ್ರಾವತಿ, ವಿರಭದ್ರ ತಳವಾರಗೇರಾ, ತಿಪ್ಪಣ್ಣ ಶೆಳ್ಳಗಿ, ಶೆಖರ್ ಮಂಗಳೂರು, ಶರಣು ಹಸನಾಪುರ, ಮಲ್ಲಿಕಾರ್ಜುನ್ ತಳವಾರಗೇರಾ, ಸಂತೋಷ ಸಗರ, ಮಲ್ಲಿಕಾರ್ಜುನ್ ಜಾಲಬೆಂಚಿ, ಸಂಗಣ್ಣ ಎಮ್ಮಡಗಿ, ಸೋಮು ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.





