ಸವರ್ಣೀಯ ಮಹಿಳೆಯರು ಜಾತಿ ನಿಂದನೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಟದ ಆರೋಪದ ಮೇಲೆ ಬುಧವಾರ ಶಹಾಪುರ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯದ ಅಡಿಯಲ್ಲಿ ಆರು ಜನ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ.
ಶಹಾಪುರ ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ತಿಂಗಳ ಹಿಂದೆ ಗ್ರಾಮದ ದಲಿತರ ಬಡಾವಣೆಗೆ ತೆರಳಲು ಹೊಸ ರಸ್ತೆ ನಿರ್ಮಿಸುವುದನ್ನು ಅದೇ ಗ್ರಾಮದ ಮಹಿಳೆಯರು ಹಾಗೂ ಅಲ್ಲಿನ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ರಸ್ತೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.
ಕಳೆದ ಜೂ.21ರಂದು ರಸ್ತೆ ವಿಷಯವಾಗಿ ಮತ್ತೆ ಜಗಳ ನಡೆದಾಗ ಗ್ರಾಮದ ಕುರುಬ ಸಮುದಾಯ ಹಾಗೂ ಇನ್ನಿತರರು ಜಾತಿ ನಿಂದನೆ ಮಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಅದನ್ನು ನೋಡಿ ಗೊತ್ತಾಗಿರುವುದರಿಂದ ತಡವಾಗಿ ಬಂದು ದೂರು ಸಲ್ಲಿಸುತ್ತಿರುವುದಾಗಿ ಗ್ರಾಮದ ದಲಿತ ಮುಖಂಡ ಬಸವರಾಜ ಮರೆಪ್ಪ ನಾಟೇಕಾರ ಅವರು ದೂರಿನಲ್ಲಿ ತಿಳಿಸಿದ್ದಾರೆ.
ವಿಭೂತಿಹಳ್ಳಿ ಗ್ರಾಮದಲ್ಲಿ ಸವರ್ಣೀಯ ಕುರುಬ ಸಮುದಾಯದವರು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಜೀವ ಬೆದರಿಕೆ ಇದೆ. ತಕ್ಷಣ ಅವರ ವಿರುದ್ಧ ದೂರು ದಾಖಲಿಸಬೇಕು ಹಾಗೂ ಗ್ರಾಮದಲ್ಲಿ ವಾಸಿಸುವ ದಲಿತ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಬುಧವಾರ ಶಹಾಪುರ ಠಾಣೆ ಎದುರು ದಲಿತ ಮುಖಂಡರು ಕೆಲಹೊತ್ತು ಧರಣಿ ನಡೆಸಿದರು.
ಇದನ್ನೂ ಓದಿ : ಬೀದರ್ | ʼಈದಿನʼ ಫಲಶೃತಿ : ಹಾಲಹಳ್ಳಿ(ಕೆ) ಪ್ರೌಢ ಶಾಲೆಗೆ ಬಿಇಒ ಭೇಟಿ; ಶಾಲೆ ಸ್ಥಳಾಂತರ
ಈ ವೇಳೆ ದಲಿತ ಹಿರಿಯ ಹೋರಾಟಗಾರರಾದ ಮಲ್ಲಿಕಾರ್ಜುನ ಪೂಜಾರಿ ನಾಗಣ್ಣ ಬಡಿಗೇರ್, ಶಿವಪುತ್ರ ಜವಳಿ, ಶ್ರೀಶೈಲ ಹೊಸಮನಿ, ಶಿವಕುಮಾರ್ ತಳವಾರ್, ಭೀಮರಾಯ ತಳವಾರ್, ಶರಣು ದೋರನಹಳ್ಳಿ, ಅಶೋಕ ಹೊಸಮನಿ, ಹೊನ್ನಪ್ಪ ಗಂಗನಾಳ, ಮರೇಪ್ಪ ಜಾಲಿಬೆಂಚಿ, ಸುಭಾಷ್ ತಳವಾರ್, ಬಸವರಾಜ್ ತಳವಾರ್, ಮಾಳಪ್ಪ ಸಲಾದಪೂರ, ಚಂದ್ರಕಾಂತ ರಸ್ತಾಪೂರ, ನಾಗರಾಜ್ ಬೊಮ್ಮನಹಳ್ಳಿ, ಶಿವು ಪೋತೆ, ಮೌನೇಶ ಜಾರಕಿಹೊಳಿ, ಶರಣು ಬೇವಿನಹಳ್ಳಿ ಹಾಜರಿದ್ದರು





