ರಾಜ್ಯದಲ್ಲಿರುವ ಬೇರೆ ಜಿಲ್ಲೆಯ ಶಾಸಕರಿಗಿಂತ ಯಾದಗಿರಿ ಜಿಲ್ಲೆಯ ಶಾಸಕ, ಸಚಿವರು ಅತಿ ಹೆಚ್ಚು ಭ್ರಷ್ಟರಾಗಿದ್ದಾರೆ. ದಿನನಿತ್ಯ ಸಂಚರಿಸುವ ಮುಖ್ಯ ರಸ್ತೆಗಳು ಗುಂಡಿ ಗುಂಡಿಯಾಗಿ ಹಾಳಾಗಿದ್ದರೂ ಅವರ ಗಮನಕ್ಕೆ ಬರುತ್ತಿಲ್ಲ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ದೋರನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಹಾಪುರದಿಂದ ಯಾದಗಿರಿ ಹಾಗೂ ಕೊಡಗಂಲ್ಯಿಂದ ಸಿಂದಗಿ ಸಂಪರ್ಕಿಸುವ ರಾಜ್ಯ ಹೆದ್ದಾರಿಗಳು ಸೇರಿದಂತೆ ಬಹುತೇಕ ರಸ್ತೆಗಳು ಹಾಳಾಗಿವೆ. ಆದರೆ ಶಾಸಕ, ಸಚಿವರು ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ. ಇದರ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಯುವ ನಾಯಕ ಮಹೇಶರಡ್ಡಿ ಮುತ್ನಾಳ ಮಾತನಾಡಿ, “ಅಧಿಕಾರ ಪಡೆಯುವ ಆಸೆಯಿಂದ ಕಾಂಗ್ರೆಸ್ ಪಂಚ ಗ್ಯಾರಂಟಿ ಘೋಷಿಸಿದರೂ, ಆ ಯೋಜನೆಗಳಿಗೆ ಹಣ ದೊರಕದೆ ಪರದಾಡುತ್ತಿದೆ. ಅವರಿಗೆ ರಾಜ್ಯದ ಅಭಿವೃದ್ದಿ ಬೇಡವಾಗಿದೆ” ಎಂದು ಟೀಕಿಸಿದರು.
ಅವರು ಇನ್ನೂ ಮುಂದುವರಿದು, ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಎಂದು ಘೋಷಿಸಿ, ಎಕರೆಗೆ ರೂ.50 ಸಾವಿರ ಪರಿಹಾರ ನೀಡುವಂತೆ ಆಗ್ರಹಿಸಿದರು. 2023-24ನೇ ಸಾಲಿನ ರೂ.29 ಕೋಟಿ ಹಾಗೂ 2024-25ನೇ ಸಾಲಿನ ರೂ.326 ಕೋಟಿ ಪರಿಹಾರವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು. ವಿಮೆ ಇಲ್ಲದ ರೈತರನ್ನು ವಿಮಾ ವ್ಯಾಪ್ತಿಗೆ ತಂದು, ಸಾಲಮನ್ನಾ ಮಾಡಬೇಕೆಂದು ಡಿಟಿ ಸಂಗಮೇಶ ನಾಯಕರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ಪ್ರಭುರಾಯ ಮಲಗೊಂಡ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಂನೋರ, ಶಿವಕುಮಾರ ಕೊಂಕಲ್, ಶರಣಗೌಡ ಹಬ್ಬಳ್ಳಿ, ಗೋವಿಂದಪ್ಪ ಕೊಂಚೆಟ್ಟಿ, ನಿಂಗಣ್ಣಗೌಡ ಪಾಟೀ, ಕಲ್ಲಪ್ಪ ಖಾನಾಪುರ, ಶಿವಾನಂದ ಗೋಲಗೇರಿ, ಖಾದರ್ ಜಮಾದಾರ, ಬಸವರಾಜ ಅನವಾರ, ಗುರುನಾಥ ಕಶೀಟ್ಟಿ, ಬಸವರಾಜ ಹುಡೇದ್, ಸಾಯಬಣ್ಣ ಹಲಗಿ, ಮಂಜುನಾಥ ಕಂಚಗಾರ, ವೆಂಕಟೇಶ ಕಶೇಟ್ಟಿ, ವಿರೇಶ ಕಂಬಾರ, ರವಿ ಪಾಲ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





