ಯಾದಗಿರಿ ತಾಲೂಕಿನ ವೆಂಕಟೇಶ ನಗರದ (ಅಲಿಪುರ ತಾಂಡಾ) ನಿವಾಸಿ ಕುಮಾರ ರಾಠೋಡ್ ಅವರಿಗೆ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಜಿಪಂ ಸಿಇಒ ಲವೀಶ ಒರಡಿಯಾ ಒಂದೇ ದಿನದಲ್ಲಿ 1.78 ಲಕ್ಷ ಸಹಾಯಧನ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಎಪಿಡಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಚಿಕ್ಕವನಿದ್ದಾಗಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದು ಅಜ್ಜಿಯ ಆಸರೆಯಲ್ಲಿ ಬೆಳೆದಿದ್ದ ರಾಠೋಡ್ ಕ್ರೀಡೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ನವೆಂಬರ್ 17ರಿಂದ 24ರವರೆಗೆ ಥೈಲ್ಯಾಂಡ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಪ್ಯಾರಾ ಸ್ಪೋರ್ಟ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಪ್ಯಾರಾ ಒಲಿಂಪಿಕ್ ಸಮಿತಿಯನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಅವರು ಜ್ಯಾವೆಲಿನ್ ಥ್ರೋ ಮತ್ತು ಥ್ರೋ ಬಾಲ್ ಸ್ಪರ್ಧೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲಿದ್ದಾರೆ.
ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಪ್ರತಿಭೆಯನ್ನು ಮೆಚ್ಚಿ, ಕೇವಲ ಒಂದು ದಿನದಲ್ಲೇ ₹1,78,500/-ರ ಆರ್ಥಿಕ ಸಹಾಯ ಮಂಜೂರು ಮಾಡಿದರು. ಅವರ ಕಾಳಜಿ ಹಾಗೂ ಕರ್ತವ್ಯ ಪ್ರಜ್ಞೆಗೆ ಎಪಿಡಿ ಸಂಸ್ಥೆಯು ಶ್ಲಾಘಿಸಿದೆ.
ಇದನ್ನೂ ಓದಿ: ಯಾದಗಿರಿ | ಗುಂಡಳ್ಳಿ ಗ್ರಾಮಕ್ಕೆ ಬಸ್ ಕಲ್ಪಿಸಲು ಒತ್ತಾಯ; ರಾಹೆ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ
ಈ ಸಂದರ್ಭದಲ್ಲಿ ಎಪಿಡಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಕುಮಾರಿ ಸಂಪ್ರೀತಾ ದೇವಪುತ್ರ, ತಾಲ್ಲೂಕು ಸಂಯೋಜಕ ರಮೇಶ್ ಕಟ್ಟಿಮನಿ, ಟಿಡಿಡಬ್ಲ್ಯು ಪ್ರಿಯದರ್ಶನ, ಸಿಬಿಆರ್ ಮೋಹನ್ ಕಾಂಬಳೆ, ಫೆಲೋ ಮನ್ನು ಚವಾಣ್ ಹಾಗೂ ಮನೋಹರ್ ಚವಾಣ್ ಗ್ರಾಮದ ಜನರು ಹಾಜರಿದ್ದರು.





