ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಹದನೂರು ಗ್ರಾಮದ ದಲಿತ ಕುಟುಂಬಗಳಲ್ಲಿ ಯಾರಾದರೂ ಮೃತಪಟ್ಟಿದ್ದರೆ ಅಂತ್ಯಕ್ರಿಯೆ ನಡೆಸಲು ಸಶ್ಮಾನ ಭೂಮಿ ಇಲ್ಲ ಎಂದು ದಲಿತರು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ʼಈ ಹಿಂದೆ ನಮ್ಮ ಊರಿನ ಗೌಡರಿಗೆ ಸೇರಿದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸುತ್ತಿದ್ದೆವು. ಇದು ನಮಗೆ ಸೇರಿದ ಭೂಮಿ, ನಮ್ಮ ಭೂಮಿಯಲ್ಲಿ ದಲಿತರಿಗೆ ಅಂತ್ಯಕ್ರಿಯೆ ನಡೆಸಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಭೂರಹಿತ ಬಡ ದಲಿತ ಕುಟುಂಬಗಳಲ್ಲಿ ಯಾರಾದರೂ ಸಾವನ್ನಪ್ಪಿದರೆ ಅಂತ್ಯ ಸಂಸ್ಕಾರ ನಡೆಸುವ ಬಗ್ಗೆ ಪರದಾಡಬೇಕಾದ ಪರಿಸ್ಥಿತಿ ಎದುರಾಗುತ್ತಿದೆʼ ಎಂದು ದಲಿತ ಸಮುದಾಯದ ಮುಖಂಡರು ಅಳಲು ತೋಡಿಕೊಂಡರು.
ಮೂರು ಬಾರಿ ಶವವಿಟ್ಟು ಪ್ರತಿಭಟನೆ :
ಪರಿಶಿಷ್ಟ ಜಾತಿಯವರಿಗೆ ಇಲ್ಲಿಯವರೆಗೆ ಸಶ್ಮಾನ ಭೂಮಿ ವ್ಯವಸ್ಥೆ ಇಲ್ಲದಕ್ಕೆ ಕುಟುಂಬದಲ್ಲಿ ಯಾರಾದರೂ ಮೃತರಾದರೆ ಅವರನ್ನು ಅಂತ್ಯಕ್ರಿಯೆ ಮಾಡುವುದು ಎಲ್ಲಿ ಎಂಬ ಪ್ರಶ್ನೆ ಕಾಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಮೂರು ಬಾರಿ ರಸ್ತೆ ಮೇಲೆ ಶವವಿಟ್ಟು ಸಶ್ಮಾನ ಭೂಮಿ ಮಂಜೂರು ಮಾಡುವಂತೆ ಪ್ರತಿಭಟನೆ ನಡೆಸಲಾಗಿತ್ತು. ಸ್ಥಳಕ್ಕೆ ತಹಸೀಲ್ದಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಈ ಹಿಂದೆ ಅಂತ್ಯಕ್ರಿಯೆ ನೆರೆವೇರಿಸುತ್ತಿದ್ದ ಜಾಗದಲ್ಲಿಯೇ ಶವಸಂಸ್ಕಾರ ಮಾಡುವಂತೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಶಾಶ್ವತ ಪರಿಹಾರ ಇಲ್ಲಿವರೆಗೆ ಮಾಡಲಿಲ್ಲʼ ಎಂದು ದೂರಿದರು.
ʼಸಶ್ಮಾನ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ 2024ರ ಜು.24ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಸಲ್ಲಿಸಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಸುರಪುರ ತಾಲೂಕಿನ ಹದನೂರು ಗ್ರಾಮಕ್ಕೆ ಸೀಮಾಂತರದಲ್ಲಿ ಬರುವ ಸರ್ವೆ ನಂಬರ್ 117 ರಲ್ಲಿ ಇರುವ 20 ಗುಂಟೆ ಜಮೀನು ಸಶ್ಮಾನ ಭೂಮಿಗಾಗಿ ಬಳಸಬಹುದು ಎಂದು ಮೇಲಾಧಿಕಾರಿಗಳು ತಿಳಿಸಿದರು. ಆದರೂ, ಆ ಭೂಮಿ ಇಲ್ಲಿಯವರೆಗೆ ಹಸ್ತಾಂತರ ಮಾಡದೇ ಇರುವುದು ಖಂಡನೀಯʼ ಎಂದರು ಕಿಡಿಕಾರಿದರು.
ದಲಿತರಿಗೆ ನ್ಯಾಯ ಎಲ್ಲಿದೆ?
ಮುಖಂಡ ಮಾನಪ್ಪ ಬಡಿಗೇರ ʼಈದಿನʼ ಜೊತೆಗೆ ಮಾತನಾಡಿ, ʼತಲೆತಲಾಂತರಗಳಿಂದ ಊರಿನ ಗೌಡರ ಭೂಮಿಯಲ್ಲಿ ಶವಸಂಸ್ಕಾರ ಮಾಡಿಕೊಂಡು ಬಂದಿದ್ದೇವು. ಈಗ ಅವರು ಶವಸಂಸ್ಕಾರಕ್ಕೆ ಅಡಿಪಡಿಸುತ್ತಿದ್ದಾರೆ. ಸಶ್ಮಾನ ಭೂಮಿಗಾಗಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಆಡಳಿತ ವರ್ಗ ನಮ್ಮ ಬೇಡಿಕೆಗೆ ಕಿಡಿಗೊಡುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಲಿತರು ಸಶ್ಮಾನ ಭೂಮಿ ಜಾಗಕ್ಕಾಗಿ ಇನ್ನೂ ಅಲೆದಾಟ ನಡೆಸಬೇಕಾದ ದುಸ್ಥಿತಿ ಇರುವುದು ದುರಂತವಾಗಿದೆʼ ಎಂದು ಬೇಸರ ವ್ಯಕ್ತಪಡಿಸಿದರು.
ದಸಂಸ ಮುಖಂಡ ಮಂಜುನಾಥ್ ಎನ್. ಕೊಂಬಿನ್ ಮಾತನಾಡಿ, ʼಸಶ್ಮಾನ ಜಾಗಕ್ಕಾಗಿ ಅನೇಕ ಬಾರಿ ಮನವಿ ಸಲ್ಲಿಸಿದರೂ ಜಿಲ್ಲಾಡಳಿತ ನಮಗೆ ಸ್ಪಂದಿಸುತ್ತಿಲ್ಲ. ಈಗಲಾದರೂ ದಲಿತ ಸಮುದಾಯದ ಸಮಸ್ಯೆ ಅರಿತು ಶೀಘ್ರದಲ್ಲಿ ಸಶ್ಮಾನ ಭೂಮಿ ಮಂಜೂರು ಮಾಡಿಕೊಂಡಬೇಕುʼ ಎಂದು ಆಗ್ರಹಿಸಿದರು.
ಇದನ್ನೂ ಓದಿ : ಯಾದಗಿರಿ | ಹಳೆ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮ
ʼಸುರಪುರ ತಾಲ್ಲೂಕಿನ ಹದನೂರ, ಮಳೇಳ್ಳಿ ಗ್ರಾಮಗಳು ಸೇರಿದಂತೆ ಇನ್ನು ಅನೇಕ ಗ್ರಾಮಗಳಲ್ಲಿ ದಲಿತ ಸಮುದಾಯಗಳಿಗೆ ಸಶ್ಮಾನ ಭೂಮಿ ಇಲ್ಲ. ಕುಟುಂಬದ ಸದಸ್ಯರನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ ಶವಸಂಸ್ಕಾರ ಮಾಡಲು ಭೂಮಿ ಇಲ್ಲವೆಂಬ ನೋವು ಕಾಡುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ದಲಿತ ಸಮುದಾಯಕ್ಕೆ ಸಶ್ಮಾನ ಭೂಮಿ ಮಂಜೂರು ಮಾಡಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಉಗ್ರ ಹೋರಾಟ ಮಾಡಬೇಕಾಗುತ್ತದೆʼ ಎಂದು ದಲಿತ ಸೇನೆ ಮುಖಂಡ ಬಸವಣ್ಣಪ್ಪ ಮಾಳವಿಕರ್ ಎಚ್ಚರಿಸಿದರು.





