ಸುರಪುರ ನಗರದ ಸರ್ಕಾರಿ ಖಾರೀಜ್ ಭೂಮಿಯನ್ನು ಮತ್ತೊಮ್ಮೆ ಸರ್ವೆ ಮಾಡಿಸಿ ಒತ್ತುವರಿಯಾಗಿರುವ 2 ಎಕರೆ, 26 ಗುಂಟೆ ಜಾಗವನ್ನು ಪರಿಶಿಷ್ಟ ಜಾತಿಗೆ ಮಂಜೂರು ಮಾಡಿ ಕೊಡಬೇಕು ಎಂದು ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಮುಖಂಡರು ಕೋರಿದರು
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ʼಸುರಪುರ ನಗರದ ಸರ್ವೆ ನಂ 7/1ರಲ್ಲಿ ಸರ್ಕಾರಿ ಖಾರೀಜ್ ಖಾತಾ ಭೂಮಿಗೆ ಹೊಂದಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಸುತ್ತ ಅಭಿವೃದ್ಧಿಪಡಿಸಲು ಒತ್ತುವರಿಯಾದ ಭೂಮಿಯನ್ನು ಜಿಲ್ಲಾಡಳಿತ ಮಂಜೂರು ಮಾಡಿಕೊಡಬೇಕು. ಇದಕ್ಕಾಗಿ ಹಲವರು ವರ್ಷಗಳಿಂದ ಮನವಿ ಪತ್ರಗಳನ್ನು ಸಲ್ಲಿಸಿ, ಹೋರಾಟವೂ ಮಾಡುತ್ತಿದ್ದೇವೆʼ ಎಂದರು.
ʼಈ ಜಾಗ ನೀಡುವಂತೆ ಸಮುದಾಯದ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಸಚಿವರಾದ ಡಾ.ಎಚ್.ಸಿ. ಮಹಾದೇವಪ್ಪ, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವರನ್ನು ಭೇಟಿ ಮಾಡಲಿದೆ. ಜತೆಗೆ ಮನವಿ ಪತ್ರವನ್ನೂ ಸಲ್ಲಿಕೆ ಮಾಡಲಾಗುವುದು. ಜಾಗ ಮಂಜೂರು ಮಾಡಲು ವಿಳಂಬ ಮಾಡಿದರೆ ಪ್ರತಿಭಟನೆಯ ಮೂಲಕ ಹೋರಾಟ ನಡೆಸಲಾಗುವುದುʼ ಎಂದು ಎಚ್ಚರಿಸಿದರು.
ಮುಖಂಡ ರಾಹುಲ್ ಹುಲಿಮನಿ ಮಾತನಾಡಿ, ʼದಶಕಗಳ ಹಿಂದೆಯೇ ಸರ್ಕಾರದ ನಿಯಮದಂತೆ ಈ ಜಾಗದಲ್ಲಿ ಅಂಬೇಡ್ಕರ್ ಅವರ ಹೆಸರಿನ ನಾಮಫಲಕ, ವೃತ್ತವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಅಂಬೇಡ್ಕರ್ ಜಯಂತಿ, ಮಹಾ ಪರಿನಿರ್ವಾಣ ದಿನವನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದೇವೆʼ ಎಂದು ಹೇಳಿದರು.
ಈ ಜಾಗವನ್ನು ನಮ್ಮ ಸಮುದಾಯಕ್ಕೆ ಮಂಜೂರು ಮಾಡಿ ಉದ್ಯಾನ, ಸಾಂಸ್ಕೃತಿಕ ಭವನ ಮತ್ತು ಗ್ರಂಥಾಲಯವನ್ನು ನಿರ್ಮಾಣ ಮಾಡಬೇಕು. ದಲಿತರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದನ್ನು ರದ್ದುಗೊಳಿಸಬೇಕು. ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕುʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಕಾರು ಡಿಕ್ಕಿ : ಬೈಕ್ ಸವಾರ ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ!
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮರೆಪ್ಪ ಚಟ್ಟೇರಕರ್, ನಾಗಣ್ಣ ಕಲ್ಲದೇವನಹಳ್ಳಿ, ಭೀಮರಾಯ ಸಿಂದಗೇರಿ, ಮಾನಪ್ಪ ಕಟ್ಟಿಮನಿ, ಮಾಳಪ್ಪ ಕಿರದಳ್ಳಿ, ಶರಣು ಎನ್. ನಾಟೇಕರ್, ಮಾನಪ್ಪ ಬಳಬಟ್ಟಿ, ಶಿವಲಿಂಗ ಎಂ.ಫಲವಾರಿ, ನಾಗಣ್ಣ ಬಡಿಗೇರ, ಭೀಮರಾಯ ಹೊಸಮನಿ ಸೇರಿ ಹಲವರು ಉಪಸ್ಥಿತರಿದ್ದರು.





