ಯಾದಗಿರಿಯ ಶಹಾಪುರ ತಾಲೂಕಿನ ಗುಂಡಳ್ಳಿ ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ, ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಶಹಪೂರ ಸಮಿತಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಗುಂಡಳ್ಳಿ ಗ್ರಾಮದ ನೂರಾರು ವಿದ್ಯಾರ್ಥಿಗಳು ಶಹಾಪುರ ಹಾಗೂ ಯಾದಗಿರಿಗೆ ದಿನನಿತ್ಯ ಶಾಲೆ-ಕಾಲೇಜಿಗೆ ತೆರಳುತ್ತಾರೆ. ಆದರೆ, ಬಸ್ ಸೌಕರ್ಯವಿಲ್ಲದೆ ನಿತ್ಯ ಅವರೆಲ್ಲ ಪರದಾಡುವಂತಾಗಿದೆ. ಸಮಯಕ್ಕೆ ಸರಿಯಾಗಿ ಬಸ್ ಸಿಗದ ಪರಿಣಾಮ ಹಾಜರಾತಿ ಕೊರತೆ, ತಡವಾಗಿ ಹಾಜರು, ಇವೆಲ್ಲವೂ ವಿದ್ಯಾಭ್ಯಾಸದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಇದರಿಂದ ಅನೇಕರು ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸಿಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ ಎಂದು ಎಸ್ಎಫ್ಐ ಕಾರ್ಯಕರ್ತರು ಆರೋಪಿಸಿದರು.
ಈ ಕುರಿತು ಹಿಂದೆಯೂ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದನೆ ಸಿಗದ ಕಾರಣ, ವಿದ್ಯಾರ್ಥಿಗಳು ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮಾಹಿತಿ ತಿಳಿದ ಸಾರಿಗೆ ಇಲಾಖೆ ಡಿಟಿಒ ಬಿ ಆರ್ ರೆಡ್ಡಿಯವರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ಎರಡು ದಿನಗಳೊಳಗಾಗಿ ಗುಂಡಳ್ಳಿ ಗ್ರಾಮದಲ್ಲಿ ಬಸ್ ನಿಲುಗಡೆ ವ್ಯವಸ್ಥೆ ಮಾಡಿಸುವುದಾಗಿ, ಅಗತ್ಯವಿದ್ದರೆ ಹೊಸ ಬಸ್ಸುಗಳನ್ನೂ ಓಡಿಸುವುದಾಗಿ ಭರವಸೆ ನೀಡಿದರು. ʼನಾನು ನೀಡಿದ ಮಾತು ತಪ್ಪಿದರೆ ಕೆಲಸಕ್ಕೆ ರಾಜೀನಾಮೆ ನೀಡುತ್ತೇನೆʼ ಎಂದು ಅವರು ವಿದ್ಯಾರ್ಥಿಗಳನ್ನು ಮನವೊಲಿಸಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಇದನ್ನೂ ಓದಿ: ಯಾದಗಿರಿ | ಹಳೆಯ ವೈಷಮ್ಯ ಹಿನ್ನೆಲೆ : ನಗರಸಭೆ ಮಾಜಿ ಅಧ್ಯಕ್ಷೆ ಅಂಜಲಿ ಕಾಂಬಾನೂರರ ಹತ್ಯೆಗೆ ಯತ್ನ
ಇದೇ ವೇಳೆ ರಾಷ್ಟ್ರೀಯ ಹೆದ್ದಾರಿಯಿಂದ ತೆರಳುತ್ತಿದ್ದ ಯಾದಗಿರಿ ಶಾಸಕ ಚೆನ್ನಾರೆಡ್ಡಿ ತುನ್ನೂರ್ ಅವರ ಕಾರನ್ನು ವಿದ್ಯಾರ್ಥಿಗಳು ತಡೆದು ಸಮಸ್ಯೆಯನ್ನು ವಿವರಿಸಿದರು. ವಿದ್ಯಾರ್ಥಿಗಳ ಮನವಿಯನ್ನು ಆಲಿಸಿದ ಶಾಸಕ, “ನನ್ನ ಗಮನಕ್ಕೆ ಈ ವಿಷಯ ತರುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ” ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ನಂತರ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಎಸ್ಎಫ್ಐ ಜಿಲ್ಲಾ ಸಂಚಾಲಕ ಇಮಾಮ್ ಸಾಬ್ ನದಾಫ್, ಗ್ರಾಮ ಘಟಕದ ಮುಖಂಡ ಮಲ್ಕಣ್ಣ, ಮಹೇಶ್, ಮಾಳಿಂಗರಾಯ, ಮಾಳಪ್ಪ, ಮಲ್ಲಿಕಾರ್ಜುನ, ರಾಜಶೇಖರ್, ಸುರೇಶ, ಸಾಯಬಣ್ಣ, ರವಿ, ರೆಡ್ಡಿ ಶರಮುದ್ದಿನ್, ಶಿಲ್ಪಾ, ರೇಖಾ, ಸುನಂದಾ, ಶ್ರೀದೇವಿ ಸೇರಿದಂತೆ ಗ್ರಾಮಸ್ಥರು ಹಾಗೂ ಪ್ರಗತಿಪರ ಸಂಘಟನೆಯ ಅನೇಕರು ಭಾಗವಹಿಸಿದ್ದರು.





