ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ಹತ್ತಿ, ಭತ್ತ, ತೊಗರಿ ಸೇರಿದಂತೆ ಮುಂಗಾರಿನ ಬೆಳೆಗಳು ಹಾನಿಗೊಳಗಾದ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಹಸಿ ಬರ ಪ್ರದೇಶವೆಂದು ಘೋಷಿಸಿ, ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿ, ಯಾದಗಿರಿ ಆಗ್ರಹಿಸಿದೆ.
ಸೋಮವಾರ ಯಾದಗಿರಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ನಂತರ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟ್ ಮಾತನಾಡಿ, ‘ಈ ವರ್ಷ ಮಳೆಗಾಳಿ ಮತ್ತು ಅನಿಯಮಿತ ಹವಾಮಾನದ ಪರಿಣಾಮವಾಗಿ ಮುಂಗಾರಿನ ಬೆಳೆಗಳು ಸಂಪೂರ್ಣ ಹಾಳಾಗಿವೆ. ಹತ್ತಿ, ಭತ್ತ, ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳು ನೆಲಕ್ಕುರುಳಿವೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು ಬೆಳೆ ಮಾರಾಟಕ್ಕೂ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಜಿಲ್ಲೆಯನ್ನು ಹಸಿ ಬರವೆಂದು ಘೋಷಿಸಿ, ಸಾಲ ಮನ್ನಾ ಮಾಡಬೇಕು,” ಎಂದು ಆಗ್ರಹಿಸಿದರು.
ಅವರು ಮುಂದುವರಿಸಿ, ‘ಹಿಂಗಾರಿನ ಬೆಳೆಗೆ ಆಣೆಕಟ್ಟಿನಿಂದ ನೀರು ಒದಗಿಸಲು ನೀರಾವರಿ ಸಲಹಾ ಸಮಿತಿ ತೀರ್ಮಾನವನ್ನು ತಕ್ಷಣ ಪ್ರಕಟಿಸಬೇಕು. ಸರ್ಕಾರ ತಡ ಮಾಡಿದರೆ ರೈತ ಸಂಘವು ರಸ್ತೆಗಿಳಿದು ಹೋರಾಟ ನಡೆಸಲಿದೆ,’ ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ : ಪ್ರಕರಣ ದಾಖಲು
ಜಿಲ್ಲಾಧ್ಯಕ್ಷ ಶರಣು ಮಂದರವಾಡ ಮಾತನಾಡಿ, ‘ಅತಿ ಮಳೆಯ ಪರಿಣಾಮವಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯನ್ನು ಹಸಿ ಬರವೆಂದು ಘೋಷಿಸಿ, ಸಾಲ ಮನ್ನಾ ಮಾಡಬೇಕು. ಅಲ್ಪಸ್ವಲ್ಪ ಬೆಳೆದಿರುವ ಹತ್ತಿ, ಭತ್ತಕ್ಕೆ ಖರೀದಿ ಕೇಂದ್ರ ತೆರೆಯಬೇಕು ಮತ್ತು ಹಾನಿಗೊಳಗಾದ ಹೊಲಗಳಿಗೆ ಸೂಕ್ತ ಪರಿಹಾರ ನೀಡಬೇಕು,’ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಲ್ಕಣ್ಣ ಚಿಂತಿ, ಚಂದ್ರಕಲಾ ಬಾಗೂರು, ಮಲ್ಲಣ್ಣ ನೀಲಹಳ್ಳಿ, ಭೀಮರಾಯ ಎಲೇರಿ, ಪ್ರಭಾಕರರೆಡ್ಡಿ ಕೊಂಗಂಡಿ, ಭೀಮರಾಯ ಹಾಲಗೇರಾ, ಫಕೀರ್ ಅಹ್ಮದ್ ಮರಡಿ ವಡಗೇರಾ, ಶಿವರಾಜ ಕೋನಹಳ್ಳಿ, ದುರ್ಗಪ್ಪ ಕೋನಹಳ್ಳಿ, ಮಂಜುನಾಥ ಕೋನಹಳ್ಳಿ, ದುರ್ಗಪ್ಪ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.





