ಗುರುಮಠಕಲ್ ತಾಲೂಕಿನ ಕಾಳೆಬೆಳಗುಂದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಕುಸಿಯುವ ಹಂತದಲ್ಲಿರುವುದರಿಂದ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಮಂಜೂರಾದ ಜಾಗವನ್ನು ತಕ್ಷಣ ಗುರುತಿಸಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಸೋಮವಾರ ತಹಶಿಲ್ದಾರ್ ಶಾಂತಗೌಡ ಬಿರಾದರ್ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿ, ‘ಕಾಳೆಬೆಳಗುಂದಿ ಗ್ರಾಮದ ಪರಂಪೋಕ ಭೂಮಿ ಸ.ನಂ. 488 ರಲ್ಲಿ 33 ಎಕರೆ 15 ಗುಂಟೆ ಜಮೀನಿದ್ದು, ಅದರಲ್ಲಿ 1 ಎಕರೆ ಜಮೀನು 2011 ರಲ್ಲಿಯೇ ಜಿಲ್ಲಾಧಿಕಾರಿಗಳ ಆದೇಶದಂತೆ ಶಾಲೆಗೆ ಮಂಜೂರಾಗಿದೆ. ನಕ್ಷೆ ಸಿದ್ಧಪಡಿಸಿದ್ದರೂ ಇಂದಿನವರೆಗೂ ಜಾಗ ಗುರುತಿಸಿ ಹದ್ದುಬಸ್ತು ಮಾಡಿಲ್ಲ,’ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಬ್ರಾಹ್ಮಣ್ಯವಾದಿ ಶಕ್ತಿಗಳು ಸಂವಿಧಾನ ವಿರೋಧಿ ಚಟುವಟಿಕೆ ನಡೆಸುತ್ತಿವೆ ; ಚಂದ್ರಕಾಂತ ಬಜೇರಿ
ಅವರು ಮುಂದುವರೆದು, ‘ಹಳೆಯ ಶಾಲಾ ಕಟ್ಟಡದ ಮೇಲ್ಚಾವಣಿ ಕುಸಿಯುವ ಭೀತಿ ಉಂಟಾಗಿದೆ. ಮಕ್ಕಳು ಜೀವಭಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ. ತಕ್ಷಣ ಜಾಗ ಗುರುತಿಸದಿದ್ದರೆ ತಹಶಿಲ್ದಾರ್ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು,’ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮೇಧಾ, ಕಾರ್ಯಾಧ್ಯಕ್ಷ ನರಸಿಂಹಲು ಗಂಗನೋಳ, ಉಪಾಧ್ಯಕ್ಷ ಕಾಶಪ್ಪ ದೊರೆ, ಭೀಮಶಪ್ಪ ತಲಾರಿ, ರಾಮುಲು ಕೊಡಿಗಂಟಿ, ತಿಮ್ಮಯ್ಯ ನಾಯಕ, ಎಸ್ಡಿಎಂಸಿ ಅಧ್ಯಕ್ಷ ಈರದಿಮ್ಮ, ಮರೆಪ್ಪ ನಾಯಕ, ಮಹಾಂತಯ್ಯ ಸ್ವಾಮಿ, ಲಕ್ಷ್ಮಣ ನಾಯಕ, ಮೋಹನರಾಜ, ಸಾಬರೆಡ್ಡಿ ಉಪ್ಪಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





