ಯಾದಗಿರಿ ಜಿಲ್ಲೆ ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದು ಸಾಬೀತಾಗಿ ಐವರ ಮೇಲೆ ದೂರು ದಾಖಲಾಗಿದ್ದು, ಕೂಡಲೇ ತಪ್ಪಿಸ್ಥರನ್ನು ಬಂಧಿಸಿ, ಸೇವೆಯಿಂದ ವಜಾಗೊಳಿಸಿ ದುರ್ಬಳಕೆಯಾದ ಹಣ ವಸೂಲಿ ಮಾಡಬೇಕೆಂದು ಭೀಮ್ ಆರ್ಮಿ ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.
ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಕಣಜಿಕರ್, ಮೌನೇಶ್ ಚಟ್ನಳ್ಳಿ. ಮರಿಲಿಂಗ ಹಳ್ಳಿ, ತಾಯಣ್ಣ ಚಟ್ನಳ್ಳಿ ಅವರು ಮಂಗಳವಾರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಸೈದಪ್ಪ ಎಂ.ಕಣಜಿಕರ್ ಮಾತನಾಡಿ, ‘ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ 1,500 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕನೀಡುವ ಕಾಮಗಾರಿಗೆ 41 ಲಕ್ಷ ಅನುದಾನ ಮಂಜೂರಾಗಿತ್ತು, ಆದರೆ ವಾಸ್ತವಿಕವಾಗಿ 529 ಮನೆಗಳ ಕಾಮಗಾರಿ ಪೂರ್ಣಗೊಂಡು, 1,257 ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ ಎಂದು ಸಂಬಂಧಪಟ್ಟ ಇಲಾಖೆಯು 330.39 ಲಕ್ಷ ಬಿಲ್ ಪಾವತಿ ಮಾಡಲಾಗಿದ್ದು, ಆದರೆ ಗ್ರಾ.ಪಂ. ಪಿಡಿಓರವರು 109 ಮನೆಗಳಿಗೆ ಮಾತ್ರ ಅಳವಡಿಸಿದ್ದೇವೆಂದು ಹೇಳಿದರು. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು 529 ಮನೆಗಳಿಗೆ ನಳ ಅಳವಡಿಸಲಾಗಿದೆ ಎಂದು ಅಧಿಕಾರಿಗಳಿಗೆ ವರದಿ ನೀಡಿ, ಈಗಾಗಲೇ 330.39 ಲಕ್ಷ ರೂಪಾಯಿ ಬಿಲ್ ಪಾವತಿ ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕುʼ ಎಂದು ಒತ್ತಾಯಿಸಿದರು.
‘ಈ ಅವ್ಯವಹಾರದಲ್ಲಿ ಭಾಗಿಯಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸಹಾಯಕ ಇಂಜಿನಿಯರ್, ಶ್ರೀನಿವಾಸ , ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಶಹಾಪೂರ ಪ್ರಸ್ತುತ ದೇವದುರ್ಗ ಲೋಕೋಪಯೋಗಿ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬನ್ನಪ್ಪ, ಗ್ರಾಮೀಣ ಕುಡಿಯುವ ನೀರಿನ ಕಾರ್ಯಪಾಲಕ ಅಭಿಯಂತರ ಆನಂದ, ಗುತ್ತಿಗೆದಾರ ವೆಂಕಟೇಶ ಗುರುಸುಣಗಿ, 3ನೇ ತನಿಖಾ ತಂಡದವರಾದ ಬೆಂಗಳೂರಿನ ಟ್ರಾನ್ಸಪೋರ್ಟೆಕ್ ಕನ್ಸಲೆನ್ಸ್ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾದರೂ, ಇಲ್ಲಿಯವರೆಗೆ ಯಾವುದೇ ಕ್ರಮ ಜರುಗಿಸಿಲ್ಲʼ ಎಂದು ಆರೋಪಿಸಿದರು.
‘ಒಂದು ವಾರದಲ್ಲಿ ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯ ತೋರಿದರೆ ಜಿಲ್ಲಾಡಳಿತ ಕಚೇರಿ ಮುಂದೆ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.





