ಭಾರತದ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿರುವ ರಾಜ್ಯವ್ಯಾಪಿ ಶೈಕ್ಷಣಿಕ ಜಾಥಾ ಗುರುವಾರ ಯಾದಗಿರಿ ಜಿಲ್ಲೆಯ ಶಹಾಪುರ ನಗರಕ್ಕೆ ತಲುಪಿತು. ಪ್ರಗತಿಪರ ಸಂಘಟನೆಗಳ ನಾಯಕರು ಜಾಥಾವನ್ನು ಸ್ವಾಗತಿಸಿ ಶಹಾಪುರದ ಆದಿತ್ಯ ಶಾಲೆಯಲ್ಲಿ ಸಮಾವೇಶ ಹಮ್ಮಿಕೊಂಡರು.
ಸಮಾವೇಶವನ್ನು ಉದ್ಘಾಟಿಸಿ ನ್ಯಾಯವಾದಿ ಆರ್.ಚನ್ನಬಸವ ಮಾತನಾಡಿ, “ದೇಶದಲ್ಲಿ ಒಂದೇ ತರದ ಶಿಕ್ಷಣ ವ್ಯವಸ್ಥೆ ಇಲ್ಲ. ಬಡ ಮತ್ತು ಶ್ರೀಮಂತರ ಮಕ್ಕಳಿಗೆ ವಿಭಿನ್ನ ರೀತಿಯ ಶಿಕ್ಷಣ ದೊರೆಯುತ್ತಿದೆ. ಸರ್ಕಾರಗಳು ಬಡ ಮಕ್ಕಳಿಗೆ ಸಮಾನ ಶಿಕ್ಷಣ ಸಿಗುವಂತೆ ನೀತಿಗಳನ್ನು ರೂಪಿಸಬೇಕು. ಇಲ್ಲದಿದ್ದರೆ ಸಾರ್ವಜನಿಕ ಶಿಕ್ಷಣ ಉಳಿಯುವುದು ಕಷ್ಟ” ಎಂದು ಅವರು ಎಚ್ಚರಿಸಿದರು.
“ಸಮಾನ ಶಿಕ್ಷಣ ಜಾರಿಯಾಗಬೇಕಾದರೆ ಜನರು ಜಾಗೃತರಾಗಬೇಕು ಮತ್ತು ಹೋರಾಟಗಳಲ್ಲಿ ಪಾಲ್ಗೊಳ್ಳಬೇಕು. ಎಸ್ಎಫ್ಐ ಈ ನಿಟ್ಟಿನಲ್ಲಿ ಹೋರಾಟ ರೂಪಿಸುತ್ತಿದೆ” ಎಂದು ಹೇಳಿದರು.
ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಗಣೇಶ್ ರಾಥೋಡ್ ಮಾತನಾಡಿ, “ರಾಜ್ಯಮಟ್ಟದ ಶೈಕ್ಷಣಿಕ ಜಾಥಾ ಅಕ್ಟೋಬರ್ 28ರಂದು ದಾವಣಗೆರೆಯಿಂದ ಪ್ರಾರಂಭವಾಗಿ ಇಂದು ಶಹಾಪುರ ತಲುಪಿದೆ. ಸಾರ್ವಜನಿಕ ಶಿಕ್ಷಣ ಉಳಿವಿಗೂ ಹಾಗೂ ವಿದ್ಯಾರ್ಥಿ ಹಾಸ್ಟೆಲ್ಗಳ ಬಲವರ್ಧನೆಗೂ ಈ ಜಾಥಾವನ್ನು ಆಯೋಜಿಸಲಾಗಿದೆ” ಎಂದು ಹೇಳಿದರು.
ಎಸ್ಎಫ್ಐ ರಾಜ್ಯ ನಾಯಕ ಗಣೇಶ್ ಕಡಗದ ಅವರು ಮಾತನಾಡಿ, “ರಾಜ್ಯದಲ್ಲಿ ಕಾರ್ಪೋರೇಟ್ ಶಿಕ್ಷಣದ ವ್ಯಾಪ್ತಿಯು ಹೆಚ್ಚಾಗಿದ್ದ ಹಿನ್ನೆಲೆ ಶಿಕ್ಷಣ ದುಬಾರಿ ಆಗಿದೆ. ಇದರ ವಿರುದ್ಧ ಎಸ್ಎಫ್ಐ ಈ ಶೈಕ್ಷಣಿಕ ಜಾಥಾವನ್ನು ಕೈಗೊಂಡಿದೆ. ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಲಾಗುತ್ತಿದೆ” ಎಂದರು.
ಎಸ್ಎಫ್ಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ಡಾ.ದೊಡ್ಡಬಸರಾಜ ಮಾತನಾಡಿ, “ಇಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣದಲ್ಲಿ ಕೇಸರಿಕರಣ, ಕೋಮುವಾದಿಕರಣ ಹಾಗೂ ಜಾತಿವಾದವನ್ನು ಉತ್ತೇಜಿಸುತ್ತಿವೆ. ರಾಜ್ಯ ಸರ್ಕಾರ ಶಿಕ್ಷಣಕ್ಕೆ ಅನುದಾನ ನೀಡದೆ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ರಾಜ್ಯದ 11 ಸಾವಿರ ಶಾಲೆಗಳು ಮುಚ್ಚುವ ಪಟ್ಟಿಯಲ್ಲಿದ್ದು, 60 ಸಾವಿರ ಶಿಕ್ಷಕರ ಕೊರತೆಯಿದೆ. 36,000 ಶಾಲೆಗಳಲ್ಲಿ ಶೌಚಾಲಯಗಳು ಬಳಕೆಯಲ್ಲಿಲ್ಲ. ಇದರಿಂದ ಬಡ ವಿದ್ಯಾರ್ಥಿಗಳು ಖಾಸಗಿ ಶಾಲೆಗಳತ್ತ ವಾಲುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬೀದರ್| ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ : ಕಠಿಣ ಕಾನೂನು ಕ್ರಮಕ್ಕೆ ಆಗ್ರಹ
ಸಮಾವೇಶದಲ್ಲಿ ಜೈಲಾಲ್ ತೋಟದಮನೆ, ನಿಂಗಣ್ಣ ಹೈಯಾಳಕೆ, ದೌಲ್ಸಾಬ್ ನದಾಫ್, ದೇವೇಂದ್ರ ಕುಮಾರ್, ಭೀಮರಾಯ ಪೂಜಾರಿ, ಸಿ.ಡಬ್ಲ್ಯು.ಎಫ್.ಐ ಸಂಘಟನೆಯ ಪ್ರತಿನಿಧಿಗಳು ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಸ್ಎಫ್ಐ ರಾಜ್ಯ ಸಮಿತಿ ಸದಸ್ಯ ಇಮಾಮ್ ಸಾಬ್ ನಿರ್ವಹಿಸಿದರು. ರೇಣುಕಾ ವಂದಿಸಿದರು.





