ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ವ್ಯಾಪ್ತಿಗೆ ಬರುವ ವೆಂಕಟಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ದಿನೇದಿನೇ ಹದಗೆಡುತ್ತಿದೆ. ಒಂದರಿಂದ ಐದನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ 80ಕ್ಕೂ ಹೆಚ್ಚು ಮಕ್ಕಳು ಕೇವಲ ಎರಡು ತರಗತಿ ಕೊಠಡಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಆ ಎರಡು ಕೊಠಡಿಗಳೂ ಶಿಥಿಲಾವಸ್ಥೆಯಿಂದ ಬೀಳುವ ಹಂತಕ್ಕೆ ತಲುಪಿವೆ.
1956ರಲ್ಲಿ ಪ್ರಾರಂಭವಾದ ಈ ಶಾಲೆಗೀಗ ಭರ್ತಿ 69 ವರ್ಷ. ಇಷ್ಟು ಹಳೆಯ ಕಟ್ಟಡವಾದರೂ ಒಮ್ಮೆಯೂ ದುರಸ್ತಿ ಕಾಣದೆ ನಿಂತಿದೆ. ಶಾಲಾ ಕಟ್ಟಡ ಬೀಳುವ ಹಂತದಲ್ಲಿದ್ದು, ಮಕ್ಕಳ ಪ್ರಾಣಕ್ಕೆ ಸಂಚಕಾರ ತಂದೊಡ್ಡುವ ಸ್ಥಿತಿಯಲ್ಲಿದ್ದರೂ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಶಾಲೆ ದುರಸ್ತಿ ಮಾಡುವ ಸಣ್ಣ ಪ್ರಯತ್ನ ಕೂಡಾ ಮಾಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಯಲ್ಲಿ ಇಬ್ಬರು ಖಾಯಂ ಶಿಕ್ಷಕರು ಮತ್ತು ಒಬ್ಬ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ತರಗತಿಗಳಿಗೆ ತಕ್ಕಷ್ಟು ಕೊಠಡಿಗಳಿಲ್ಲದೇ ಮಕ್ಕಳು ಒಟ್ಟುಗೂಡಿ ಓದಬೇಕಾದ ಪರಿಸ್ಥಿತಿ ಎದುರಾಗಿದೆ. ಅಲ್ಲದೇ, ಶಾಲೆಯಲ್ಲಿ ಅಡುಗೆಮನೆ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳಿಲ್ಲದೆ ಅನೇಕ ವರ್ಷಗಳೇ ಕಳೆದಿವೆ. ಈ ವಿಷಯವನ್ನು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಇಂದಿಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಮಕ್ಕಳ ಭವಿಷ್ಯವನ್ನು ಕಟ್ಟಿಕೊಡಬೇಕಾದ ಶಿಕ್ಷಣ ಮಂದಿರವೇ ಶಿಥಿಲಾವಸ್ಥೆಯಲ್ಲಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. “ನಮ್ಮ ಮಕ್ಕಳ ಜೀವದ ಹಂಗನ್ನು ಇಟ್ಟುಕೊಂಡೇ ನಾವು ಅವರನ್ನು ಶಾಲೆಗೆ ಕಳುಹಿಸಬೇಕಾದ ಪರಿಸ್ಥಿತಿ ಬಂದಿದೆ. ಸರ್ಕಾರ ತಕ್ಷಣವೇ ಕ್ರಮ ಕೈಗೊಂಡು ಕಟ್ಟಡವನ್ನು ಪುನರ್ನಿರ್ಮಿಸಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈದಿನ.ಕಾಮ್ ನೊಂದಿಗೆ ಶಾಲೆಯ ಮುಖ್ಯಗುರು ಶಿವರಾಜ ಮಾತನಾಡಿ, “ನಾನು ಈ ಶಾಲೆಗೆ ಬಂದು ಮೂರು- ನಾಲ್ಕು ವರ್ಷಗಳಾಗಿವೆ. ನಾನು ಬಂದಾಗಿನಿಂದ ನೋಡುತ್ತಿರುವೆ; ಮಳೆ ಬಂದರೆ ಶಾಲೆ ಸೋರುತ್ತದೆ. ಆಗ ಊರಿನ ದೇವಸ್ಥಾನದಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡುವ ಅನಿವಾರ್ಯತೆ ಇದೆ. ಅನೇಕ ಬಾರಿ ಮೇಲಧಿಕಾರಿಗಳಿಗೆ ಮನವಿ ಮಾಡಿದ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಿಡಬ್ಲ್ಯೂಡಿ ಅಧಿಕಾರಿಗಳು ಕಟ್ಟಡವನ್ನು ಡೆಮಾಲಿಷ್ ಮಾಡಲು ಅನುಮತಿ ಕೊಟ್ಟಿದ್ದಾರೆ. 127 ಮತಗಟ್ಟೆ ಸಂಖ್ಯೆಯ ಶಾಲೆಯಾಗಿರುವುದರಿಂದ ಜಿಲ್ಲಾಧಿಕಾರಿಗಳ ಅನುಮತಿಗಾಗಿ ಮನವಿ ಪತ್ರ ಸಲ್ಲಿಸಿದ್ದು, ಅವರ ಅನುಮತಿಯ ನಿರಿಕ್ಷೇಯಲ್ಲಿದ್ದೇವೆ” ಎಂದರು.
“ʼಅಕ್ಷರ ಆವಿಷ್ಕಾರ ಯೋಜನೆʼಯಡಿಯಲ್ಲಿ ಎರಡು ಕೋಣೆಗಳನ್ನು ನಿರ್ಮಾಣ ಮಾಡಿಕೊಡುತ್ತೇವೆಂದು ಶಾಸಕರು ತಿಳಿಸಿದ್ದಾರೆ. ಆದರೆ ಎರಡು ಕೋಣೆಗಳಲ್ಲಿ ಮಕ್ಕಳಿಗೆ ಪಾಠ ಮಾಡುವುದು ಕಷ್ಟ. ಹಾಗಾಗಿ ನಾಲ್ಕು ತರಗತಿ ಕೋಣೆಗಳು, ಅಡುಗೆ ಕೋಣೆ, ಶೌಚಾಲಯಗಳನ್ನು ನಿರ್ಮಿಸಿಕೊಡಬೇಕೆಂದು ಬೇಡಿಕೆ ಮುಂದಿಟ್ಟಿದ್ದೇವೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಆದಷ್ಟು ಬೇಗ ಶಾಲೆಯ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಬೇಕು” ಎಂದು ಶಾಸಕರಿಗೆ ಮನವಿ ಮಾಡಿದರು.
ಈದಿನ.ಕಾಮ್ ನೊಂದಿಗೆ ಪೋಷಕರಾದ ಮಾನಪ್ಪನವರ ಮಾತನಾಡಿ, “ಶಾಲೆ ತುಂಬಾ ಹಳೆಯದಾಗಿದೆ. ಮೇಲ್ಛಾವಣಿಯ ದಿಂಡು ಬೀಳದಿರುವ ಹಾಗೆ ಎರಡು ಕಟ್ಟಿಗೆಯ ಕಂಬಗಳನ್ನು ಆಧಾರವಾಗಿ ನಿಲ್ಲಿಸಲಾಗಿದೆ. ಶಾಲೆ ಯಾವಾಗ ಬೀಳುತ್ತೊ ಎನ್ನುವ ಆತಂಕದಲ್ಲಿ ಮಕ್ಕಳಿಗೆ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಶಾಲೆಗಳ ವ್ಯವಸ್ಥೆ ಈ ರೀತಿ ಇದ್ರೆ ಎಲ್ಲರೂ ಖಾಸಗಿ ಶಾಲೆಗಳಿಗೆ ಹೋಗುತ್ತಾರೆ. ಇದರಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎಂದು ಸರಕಾರಿ ಶಾಲೆಗಳು ಮುಚ್ಚಿ ಹೋಗುತ್ತಿವೆ. ಸರಕಾರಿ ಶಾಲೆಗಳಲ್ಲಿ ಬಡ ಮತ್ತು ಮಧ್ಯಮವರ್ಗದ ಮಕ್ಕಳು ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಾರೆ ಒಂದು ವೇಳೆ ಸರಕಾರಿ ಶಾಲೆಗಳು ಮುಚ್ಚಿದ್ರೆ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆಂದು” ಕಳವಳ ವ್ಯಕ್ತಪಡಿಸಿದರು.
ಈದಿನ.ಕಾಮ್ ನೊಂದಿಗೆ ವಿದ್ಯಾರ್ಥಿ ಪ್ರಕಾಶ ಮಾತನಾಡಿ, “ಮಳೆ ಬಂದರೆ ನಾವು ದೇವಸ್ಥಾನದಲ್ಲಿ ಹೋಗಿ ಕೂಡುತ್ತೇವೆ ಶಾಲೆಯಲ್ಲಿ ಅಡುಗೆ ಕೋಣೆಗಳು ಇಲ್ಲ ಕುಳಿತು ಊಟ ಮಾಡಲು ಜಾಗವಿಲ್ಲ, ಶೌಚಾಲಯ ವ್ಯವಸ್ಥೆ ಇಲ್ಲ ಶಾಲೆಯಲ್ಲಿ ಸರಿಯಾದ ಮೂಲಸೌಕರ್ಯಗಳಿಲ್ಲ ನಮ್ಮಗೆ ಸುಂದರವಾದ ಹೊಸ ಶಾಲೆ ನಿರ್ಮಾಣ ಮಾಡಿಕೊಂಡಬೇಕೆಂದು” ಮನವಿ ಮಾಡಿದರು.
ಶಾಲೆಯ ವಿದ್ಯಾರ್ಥಿನಿ ರಂಜಿತ ಮಾತನಾಡಿ, “ನಮ್ಮ ಶಾಲೆ ಮೇಲ್ಛಾವಣಿಯ ಪದರು ಉದುರಿ ಬೀಳುತ್ತಿರುವುದರಿಂದ ನಾವು ಪ್ರತಿನಿತ್ಯ ಶಾಲೆ ಆವರಣದಲ್ಲಿ ಕುಳಿತು ವಿದ್ಯಾಭ್ಯಾಸ ಮಾಡುತ್ತೇವೆ. ಮಳೆ ಬಂದರೆ ಊರಿನ ದೇವಸ್ಥಾನದಲ್ಲಿ ಕುಳಿತುಕೊಳ್ಳುತ್ತೇವೆ. ಊಟಕ್ಕೆ ಶಾಲೆಯ ಗ್ರೌಂಡ್ ನಲ್ಲಿ ಕುಳಿತುಕೊಳ್ಳಬೇಕು. ಅನ್ನದ ತಟ್ಟೆಯಲ್ಲಿ ಮಣ್ಣು, ಧೂಳು ಬೀಳುತ್ತದೆ. ಇದರಿಂದ ನಮಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಆದಷ್ಟು ಬೇಗ ನಮಗೆ ಹೊಸ ಶಾಲೆ ನಿರ್ಮಾಣ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.
ಶಿಕ್ಷಕ ದೇವರಾಜ್ ಪಾಟೀಲ್ ಮಾತನಾಡಿ, “ಶಾಲೆಯ ಕಟ್ಟಡ ವಿಚಾರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ, ಪಿಡಬ್ಲ್ಯೂಡಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಡೆಮಾಲಿಷ್ ಮಾಡಲು ಅನುಮತಿ ಸಿಕ್ಕಿದೆ. ಜಿಲ್ಲಾಧಿಕಾರಿಗಳ ಅನುಮತಿಗಾಗಿ ಕಾಯುತ್ತಿದ್ದೇವೆ. ಅನುಮತಿ ಸಿಕ್ಕ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದರು.
“ನಮ್ಮ ಭಾಗದಲ್ಲಿ ಒಂದು ಮಾದರಿ ಸರಕಾರಿ ಶಾಲೆ ನಿರ್ಮಾಣ ಮಾಡಬೇಕು. ಶಾಲೆಯ ಕಟ್ಟಡ, ವಾತಾವರಣ ಸುಂದರವಾಗಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಪ್ರವೇಶ ಪಡೆಯುತ್ತಾರೆ. ಸ್ಥಳೀಯ ಶಾಸಕರು ಶಾಲೆ ಸ್ಯಾಂಕ್ಷನ್ ಮಾಡಿದ್ದೇವೆಂದು ಭರವಸೆ ಮಾತ್ರ ನೀಡದೆ, ಆದಷ್ಟು ಬೇಗ ಶಾಲೆಯ ಕಟ್ಟಡ ಕಾಮಗಾರಿ ಶುರುಮಾಡಬೇಕೆಂದು” ಮನವಿ ಮಾಡಿದರು.
ಸುರಪುರ ಶಾಸಕ ವೇಣುಗೋಪಾಲ ಮಾತನಾಡಿ, “ಅಕ್ಷರ ಆವಿಷ್ಕಾರ ಯೋಜನೆಯಡಿಯಲ್ಲಿ ಶಾಲೆ ಕಟ್ಟಡ ಸ್ಯಾಂಕ್ಷನ್ ಮಾಡಲಾಗುವುದು. ಶಾಲೆಯ ಇನ್ನಿತರ ಸಮಸ್ಯೆಗಳ ಕುರಿತು ಶಿಕ್ಷಕರನ್ನು ಕರೆಸಿಕೊಂಡು ಮಾಹಿತಿ ಪಡೆದುಕೊಂಡು ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುವೆ” ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ, “ಶಾಲೆಯ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳಿಗೆ, ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಇಲಾಖೆ ಕಡೆಯಿಂದ ಮನವಿ ಸಲ್ಲಿಸಿದ್ದೇವೆ. ಸಾಧ್ಯವಾದಷ್ಟು ಶೀಘ್ರವಾಗಿ ಶಾಲಾ ಕಟ್ಟಡದ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದರು.

ಇದನ್ನೂ ಓದಿ: ಯಾದಗಿರಿ | ಸತ್ಯ, ನ್ಯಾಯದ ಪರ ನಿಲ್ಲುವುದೇ ನಿಜವಾದ ಧರ್ಮ
ಡಿಡಿಪಿಐ ಚನ್ನಬಸಪ್ಪ ಮುಧೋಳ ಮಾತನಾಡಿ, “ಯಾದಗಿರಿ ಜಿಲ್ಲೆಯಾದ್ಯಂತ 75 ಶಾಲೆಗಳು ಶಿಥಿಲಾವ್ಯಸ್ಥೆಯಲ್ಲಿವೆ. ಎಲ್ಲಾ ಶಾಲೆಗಳ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಶಿಕ್ಷಣ ಎಲ್ಲರಿಗೂ ಸಮಾನವಾಗಿ ಸಿಗಬೇಕಾದ ಹಕ್ಕು. ಆದರೆ, ಅದು ಆರ್ಥಿಕ ಶಕ್ತಿಶಾಲಿಗಳಿಗೆ ಮಾತ್ರ ಲಭ್ಯವಾಗಿ ಬಡವರ ಮಕ್ಕಳು ಹಿಂದುಳಿಯುವಂತಾದರೆ, ಅದು ದೇಶದ ಭವಿಷ್ಯಕ್ಕೆ ಅಪಾಯಕಾರಿ. ಈ ಪರಿಸ್ಥಿತಿಗೆ ಸರ್ಕಾರಿ ಶಾಲೆಗಳ ದುಸ್ಥಿತಿಯೂ ಕಾರಣವಾಗಬಾರದು. ಆದ್ದರಿಂದ ಸರ್ಕಾರ ತಕ್ಷಣವೇ ಸರಕಾರಿ ಶಾಲೆಗಳ ಬಲವರ್ಧನೆಗೆ ತೊಡಗಬೇಕು. ಮಾದರಿ ಶಾಲೆಗಳ ಸ್ಥಾಪನೆಗೆ ಮುಂದಾಗಬೇಕು ಹಾಗೂ ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಬೇಕು. ಇಲ್ಲವಾದರೆ ಸಮಾಜದಲ್ಲಿ ಅಸಮಾನತೆ, ಅಶಿಕ್ಷಣ ಹಾಗೂ ಅಸುರಕ್ಷತೆ ಹೆಚ್ಚುತ್ತಾ ಹೋಗಿ ದೊಡ್ಡ ಬಿಕ್ಕಟ್ಟಿಗೆ ಕಾರಣವಾಗುವ ಭೀತಿ ಇದೆ.





