ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಹಿಂಸಾಚಾರವನ್ನು ತಡೆಗಟ್ಟಲು ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ವರ್ಲ್ಡ್ ವಿಷನ್ ಇಂಡಿಯಾ (ಚೆನ್ನೈ)ಯ ಲೆಕ್ಕಾಧಿಕಾರಿ ಬಾಬು ಬಾಲಸಿಂಗ್ ಹೇಳಿದ್ದಾರೆ.
ಶಹಾಪುರ ತಾಲೂಕಿನ ಶಾರದಹಳ್ಳಿಯ ಪರಿಹಾರ ಭೋದನ ಕೇಂದ್ರದಲ್ಲಿ ವರ್ಲ್ಡ್ ವಿಷನ್ ಇಂಡಿಯಾ ವತಿಯಿಂದ ಬುಧವಾರ ಮಕ್ಕಳ ರಕ್ಷಣೆಯ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಾಬು ಬಾಲಸಿಂಗ್, “ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು ಕೇವಲ ಸಂಸ್ಥೆಗಳ ಹೊಣೆಗಾರಿಕೆ ಅಲ್ಲ, ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣೆಯ ಕುರಿತು ಹಾಡುಗಳು, ಕಥೆಗಳು ಹಾಗೂ ಕಿರು ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಯಿತು. ಜೊತೆಗೆ ಮಕ್ಕಳ ಮೇಲಿನ ದೌರ್ಜನ್ಯ ಕುರಿತ ಕಿರುಚಿತ್ರವನ್ನೂ ಪ್ರದರ್ಶಿಸಲಾಯಿತು.
ವರ್ಲ್ಡ್ ವಿಷನ್ ಇಂಡಿಯಾ ನಿರ್ವಹಣಾಧಿಕಾರಿ ಅನಿಲ್ ತೇಜಪ್ಪ ಬಲ್ಲೂರ್, ಸಂಸ್ಥೆಯ ಮಕ್ಕಳ ರಕ್ಷಣೆಗೆ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಬಾಬು ಬಾಲಸಿಂಗ್ ಅವರು ಸಹಾಯ ಪಡೆಯುತ್ತಿರುವ ಮಕ್ಕಳ ಮನೆಗಳನ್ನು ಭೇಟಿ ಮಾಡಿ, ಅವರ ಕಲಿಕೆಯ ಸ್ಥಿತಿಯನ್ನು ಪರಿಶೀಲಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಿದ್ದಪ್ಪ ಪೂಜಾರಿ, ಗ್ರಾಮಪಂಚಾಯತ್ ಸದಸ್ಯ ಸಂತೋಷ್ ವಿಶ್ವಕರ್ಮ, ಶಂಕರಾಚಾರ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು, ಶಿಕ್ಷಕಿ ಚೈತ್ರ, ಸ್ವಯಂಸೇವಕರು ಮೇನಕ ಚೌಹಾಣ್, ಶಿವು, ಶಿವಲೀಲಾ, ಶಂಕರ ಹಾಗೂ ಗ್ರಾಮದ ಮಕ್ಕಳು ಮತ್ತು ಪೋಷಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸುಂದರವರು ನಿರೂಪಿಸಿದರು, ಮಾರ್ಟಿನ್ ಶಾಂತಕುಮಾರ್ ವಂದಿಸಿದರು.





