ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಬೆಳವಣಿಗೆಯನ್ನು ಸಹಿಸುವ ಗುಣ ಹೊಂದಿದ್ದರೆ ಅವನೇ ನಿಜವಾದ ಸಾಹಿತಿ ಎಂದು ಹಿರಿಯ ಸಾಹಿತಿ ಈಶ್ವರ್ ಕಟ್ಟಿಮನಿ ಅಭಿಪ್ರಾಯಪಟ್ಟರು.
ಅವರು ಸರಕಾರಿ ಪದವಿಪೂರ್ವ ಕಾಲೇಜು, ಭೀಮರಾಯನ ಗುಡಿಯಲ್ಲಿ ಆಯೋಜಿಸಿದ್ದ ಗೋವಿಂದರಾಜ ಸಿ. ಸುರಪುರಕರ ಅವಳಿ ಕೃತಿಗಳ ಲೋಕಾರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ‘ಪರೀಕ್ಷೆ ಎದುರಿಸುವುದು ಹೇಗೆ’ ವಿಷಯದ ವಿಶೇಷ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕವಿ ತನ್ನ ಕಾಲಘಟ್ಟದ ಸಾಮಾಜಿಕ ತಾರತಮ್ಯ, ದುಃಖ-ದುಮ್ಮಾನಗಳನ್ನು ಅರಿತು ಸಮಾಜಕ್ಕೆ ಪರಿಚಯಿಸಿ ಜಾಗೃತಿ ಮೂಡಿಸಬೇಕು. ಕವಿ ಬರೆದ ವಿಚಾರಗಳು ಪ್ರತಿಯೊಬ್ಬ ಓದುಗನಿಗೂ ತನ್ನದೇ ಎಂದು ಅನಿಸಿದಾಗಲೇ ಬರವಣಿಗೆ ಸಾರ್ಥಕವಾಗುತ್ತದೆ ಎಂದು ಯುವ ಕವಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ‘ನಕ್ಕಾವೋ ನಕ್ಷತ್ರ ಹನಿ’ ಗವಿತಾ ಕೃತಿಯನ್ನು ಶಹಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರನಾಥ್ ಹೊಸ್ಮನಿ ಹಾಗೂ ‘ನಕ್ಕಾವೋ ನೋವುಗಳು’ ಕವನ ಸಂಕಲನವನ್ನು ಸರಕಾರಿ ಪದವಿ ಕಾಲೇಜು ಸುರಪುರದ ಪ್ರಾಂಶುಪಾಲ ಪ್ರೊ. ಬಲಭೀಮರಾಯ ದೇಸಾಯಿ ಲೋಕಾರ್ಪಣೆಗೊಳಿಸಿದರು.

‘ಅವಳಿ ಕೃತಿಗಳ ಪರಿಚಯವನ್ನು ಹಿರಿಯ ಸಾಹಿತಿ ಡಾ. ಗೋವಿಂದರಾಜ ಮತ್ತು ತಾಲೂಕು ಖಜಾನಾಧಿಕಾರಿ ಡಾ. ಮೋನಪ್ಪ ಶಿರವಾಳ್ ಮಾಡಿದರು. ಗೋವಿಂದರಾಜರ ಬರವಣಿಗೆ ಸಾಮರ್ಥ್ಯ ಶ್ಲಾಘನೀಯವಾಗಿದೆ’ ಎಂದು ಹೇಳಿದರು.
ನಂತರ ಭೀಮಪ್ಪ ಪೀರಾಪುರ್ ಹಾಗೂ ಶಿವಾನಂದ ದೋರನಹಳ್ಳಿ ಅವರು ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಿಂದ್ರಪ್ಪ ಮಡಿವಾಳಕರ್ ವಹಿಸಿದ್ದರು. ಉಪನ್ಯಾಸಕರಾದ ಸಾಯಬಣ್ಣ ಮೆತ್ರೆ, ಸಿದ್ದಪ್ಪ ಒಡೆಯರ್, ಭೀಮರೆಡ್ಡಿ ಪಾಟೀಲ್, ಗುರುನಾಥ ದೇಸಾಯಿ, ಸಂತೋಷ್ ಜುನ್ನ, ಹನುಮಂತ್ರಾಯ ಗೌಡ ಪಾಟೀಲ್, ಧರ್ಮನಗೌಡ ಹಾಗೂ ಸಾಹಿತಿಗಳಾದ ಆಮ್ಲಯ್ಯ ಮಡ್ನಾಳ್, ಈರಣ್ಣ ಸಾಹಿತ್ಯಗಾರ, ಬೀರನೂರ್ ಗೌಡಪ್ಪ ಗೌಡ, ಪರಿವಾಣ ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಕಲಬುರಗಿಯಲ್ಲಿ ʼಪ್ರಬುದ್ಧ ಅಕಾಡೆಮಿʼ ಉದ್ಘಾಟನೆ
ಈ ಸಂದರ್ಭದಲ್ಲಿ ಲೇಖಕ ಗೋವಿಂದರಾಜ ಸಿ. ಸುರಪುರ ಹಾಗೂ ಅವರ ಪತ್ನಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಶಹಾಪುರ ಮತ್ತು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಸುರೇಶ್ ಅರುಣಿ ಸ್ವಾಗತಿಸಿದರು. ಮಡಿವಾಳಪ್ಪ ಪಾಟೀಲ್ ನಿರೂಪಿಸಿ ವಂದಿಸಿದರು.





