ಕೋಮುವಾದಿ ಹಾಗೂ ಜಾತಿವಾದಿ ಶಕ್ತಿಗಳನ್ನು ತಡೆಯಲು ಎಲ್ಲರೂ ಒಂದಾಗಿ ನಿಲ್ಲಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಕರೆ ನೀಡಿದರು.
ವಡಗೇರಿ ತಾಲೂಕಿನ ಮಾಲಹಳ್ಳಿ ಗ್ರಾಮದಲ್ಲಿ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ವತಿಯಿಂದ ನೂತನ ಗ್ರಾಮ ಘಟಕ ಶಾಖೆ ರಚನೆ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರೈತರು ಹಾಗೂ ದಲಿತರು ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯಲು ಗ್ರಾಮೀಣ ಮಟ್ಟದಲ್ಲಿ ಸಂಘಟನೆ ಬಲಪಡಿಸುವುದು ಅತ್ಯವಶ್ಯಕವಾಗಿದೆ ಎಂದು ಅವರು ಹೇಳಿದರು. “ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಅನಿವಾರ್ಯ. ಕೋಮುವಾದಿ ಮತ್ತು ಜಾತಿವಾದಿ ಶಕ್ತಿಗಳನ್ನು ತಡೆಯಲು ಸಮಾಜದ ಎಲ್ಲಾ ವರ್ಗದವರು ಒಂದಾಗಿ ನಿಲ್ಲಬೇಕು” ಎಂದು ಅವರು ಅಭಿಪ್ರಾಯಪಟ್ಟರು.
‘ಮಹಿಳೆಯರು ಮೌಢ್ಯತೆಯಿಂದ ಹೊರಬಂದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ಆರ್ಥಿಕ ಹಾಗೂ ಸಾಮಾಜಿಕವಾಗಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ಹಾಗೆಯೇ ಗೌತಮ ಬುದ್ಧ, ಬಸವೇಶ್ವರ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
ದಲಿತ ಮುಖಂಡ ಹತ್ತೀಗೂಡೂರು ಶರಣರೆಡ್ಡಿ ಮಾತನಾಡಿ, ’12ನೇ ಶತಮಾನದಲ್ಲಿ ಬಸವೇಶ್ವರರು ಅನುಭವ ಮಂಟಪದ ಮೂಲಕ ಸಮಾನತೆಯ ಸಂದೇಶ ಸಾರಿದ ವಿಚಾರವನ್ನು ಉಲ್ಲೇಖಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶ್ರಯದಲ್ಲೇ ದೇಶ ಇಂದು ಸಾಗುತ್ತಿದೆ. ಸಮಾನತೆ, ಸಮಬಾಳು ಹಾಗೂ ಸಾಮಾಜಿಕ ನ್ಯಾಯ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಶೋಷಿತ ವರ್ಗಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟಲು ಸಂಘಟಿತ ಹೋರಾಟ ಅಗತ್ಯವಿದೆ’ ಎಂದು ತಿಳಿಸಿದರು.

ರಾಜ್ಯಾಧ್ಯಕ್ಷ ಡಾ. ಆರ್. ಅಶ್ವತ್ ಅಂತೇಜ್ ಅವರ ಆದೇಶದ ಮೇರೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗ್ರಾಮದ ಅಧ್ಯಕ್ಷರಾಗಿ ರಾಮಪ್ಪ ಹಲಕಲ್, ಉಪಾಧ್ಯಕ್ಷರಾಗಿ ಅಮಾತ್ಯಪ್ಪ ಕುರುಕುಂದಿ, ಕಾರ್ಯದರ್ಶಿಯಾಗಿ ಬಾಲಪ್ಪ ಲಿಂಗೇರಿ, ಸಂಘಟನೆ ಕಾರ್ಯದರ್ಶಿಯಾಗಿ ಹಣಮಂತ ಶಾಖ ಹಾಗೂ ಖಜಾಂಚಿಯಾಗಿ ಮಲ್ಲಿಕಾರ್ಜುನ ದೊಡ್ಮನಿ ಆಯ್ಕೆಯಾದರು.
ಇದೆ ಸಂದರ್ಭದಲ್ಲಿ ಸಂಘಟನೆ ಸದಸ್ಯರಾಗಿ ಮಲ್ಲಾರೆಡ್ಡಿ ಕುರುಕುಂದಿ, ಮರಿಯಪ್ಪ ಶಾಖ, ಸಾಬಣ್ಣ ಲಿಂಗೇರಿ, ಹನುಮಂತ ಕಾಡಿನಗೇರಾ, ಬಸಲಿಂಗಪ್ಪ ಹೊಸ್ಮನಿ, ಹುಲಿಯಪ್ಪ ಹೊಸ್ಮನಿ, ಬಸಲಿಂಗಪ್ಪ ಶಾಖ, ಮೋನಪ್ಪ ತಲೆಗೇರ್, ಮಾನ್ಯಪ್ಪ ನರೇಗಾರ್, ಸಾಬಣ್ಣ ಗುರುಷಣಗಿ, ಮಂಜಪ್ಪ ಹೊಸ್ಮನಿ, ರಂಗಪ್ಪ ತೆಲುಗು, ಶರಣಪ್ಪ ಹೊಸ್ಮನಿ ಸೇರಿದಂತೆ ಹಲವರು ಆಯ್ಕೆಯಾದರು.
ಇದನ್ನು ಓದಿದ್ದೀರಾ? ಕಲಬುರಗಿ | ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಪೊಲೀಸರ ಅಮಾನತು
ಕಾರ್ಯಕ್ರಮದಲ್ಲಿ ಭೀಮನಗೌಡ ಮಾಲಿಪಾಟೀಲ್, ಹನುಮಂತ ಕೊಂಗಂಡಿ, ಸಿದ್ದಪ್ಪ ಹೊಸ್ಮನಿ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಯುವಕರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.





