ಹನ್ನೆರಡನೆಯ ಶತಮಾನದ ಬಸವಣ್ಣನವರ ಚಿಂತನೆಗಳಿಂದ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಅವರು ಹೇಳಿದರು.
ಶಹಾಪುರ ತಾಲೂಕಿನ ಸಗರ ಗ್ರಾಮದ ಸುಬೇದಾರ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ‘ಶಾಲೆಯಿಂದ ಶಾಲೆಗೆ ಸಾಂಸ್ಕೃತಿಕ ನಾಯಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಮನುಷ್ಯನು ಹುಟ್ಟುವ ಮೊದಲು ವಿಶ್ವಮಾನವ; ನಂತರ ಜಾತಿ ಮತ್ತು ಧರ್ಮಗಳಲ್ಲಿ ಸಿಲುಕಿಸಲಾಗುತ್ತದೆ ಎಂಬ ಬಸವಣ್ಣರ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ’ ಎಂದು ತಿಳಿಸಿದರು.
‘ಬಸವಣ್ಣರು ಬಾಲ್ಯದಲ್ಲಿಯೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಿದ್ದರು. ಅವರ ಪ್ರಶ್ನೆಗಳನ್ನು ಸಹಿಸಲಾರಿದ ಪಟ್ಟಭದ್ರರು ಅವರನ್ನು ಊರು ಮತ್ತು ಮನೆಯಿಂದ ಬಹಿಷ್ಕರಿಸಿದರು. ತಮ್ಮ ಅಕ್ಕ ಅಕ್ಕನಾಗಮ್ಮಳಿಗೆ ಇಲ್ಲದ ಧಾರ್ಮಿಕ ಸ್ವಾತಂತ್ರ್ಯ ನನಗೂ ಬೇಡವೆಂದು ಹೇಳುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದರು’ ಎಂದರು.
‘ಬಸವಣ್ಣರಿಗಿಂತ ಪೂರ್ವದಲ್ಲಿ ಸಮಾಜದಲ್ಲಿ ಕಂದಾಚಾರಗಳು ಮತ್ತು ಮೂಢನಂಬಿಕೆಗಳು ಆಳವಾಗಿ ಬೇರುಬಿಟ್ಟಿದ್ದವು. ಅವುಗಳನ್ನು ಪ್ರಶ್ನಿಸಿ ವಚನಗಳ ಮೂಲಕ ಸಮಾಜ ಸುಧಾರಣೆಗೆ ಅವರು ಮುಂದಾದರು. ಸರ್ವರಲ್ಲಿಯೂ ದೇವರಿದ್ದಾನೆ, ನಾವು ಎಲ್ಲರೂ ನಡೆಯುವ ದೇವರುಗಳು ಎಂಬ ಪ್ರಜ್ಞೆಯನ್ನು ಸಮಾಜದಲ್ಲಿ ಬಿತ್ತಿದರು’ ಎಂದು ಹೇಳಿದರು.
ಹೆಣ್ಣು ಕೀಳಲ್ಲ, ಗಂಡು ಶ್ರೇಷ್ಠನಲ್ಲ ಎಂಬ ಸಮಾನತೆಯ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಚಿಂತಕ ಬಸವಣ್ಣರು. ವಿದ್ಯೆಯಿಂದ ಜ್ಞಾನವಂತನಾಗಬಹುದು, ದುಡಿಯುವ ಮೂಲಕ ಶ್ರೀಮಂತನಾಗಬಹುದು ಎಂಬ ಸರಳ ಸತ್ಯವನ್ನು ಅವರು ಪ್ರತಿಪಾದಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಂಶುಪಾಲ ದತ್ತಾತ್ರೇಯ ಕುಲ್ಕರ್ಣಿ ಅವರು ಮಾತನಾಡಿ, ‘ಪ್ರಶ್ನೆಗಳು ವ್ಯಕ್ತಿಯನ್ನೂ ಸಮಾಜವನ್ನೂ ಬೆಳಸುತ್ತವೆ. ಬಸವಾದಿ ಶರಣರ ಚಿಂತನೆಗಳನ್ನು ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಶಿಕ್ಷಕರು ಫಲಿತಾಂಶ ಸುಧಾರಣೆಗೆ ಕ್ರಿಯಾಯೋಜನೆ ರೂಪಿಸಲಿ: ಈರಣ್ಣ ಕನ್ನಳ್ಳಿ
ಕಾರ್ಯಕ್ರಮವನ್ನು ಶಿಕ್ಷಕ ಸುದೀರ ಆಸ್ಪಲ್ಲಿ ಸ್ವಾಗತಿಸಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕರಣ ಸುಬೇದಾರ ಅಧ್ಯಕ್ಷತೆ ವಹಿಸಿದ್ದರು. ಶಿವಕುಮಾರ ಅಕ್ಕಿ, ಪ್ರಿಯಾಂಕ ಚವ್ಹಾಣ, ವೇದಾ ನಾಯಕ, ಸುನೀಲ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





