ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ–ಸಿದ್ಧಾಂತಗಳು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದ್ದು, ಅಂಬೇಡ್ಕರ್ ರಚಿಸಿದ ಸಂವಿಧಾನವೇ ಮಾನವೀಯ ಮತ್ತು ಸಮಾನತೆಯ ಬದುಕಿಗೆ ದಾರಿ ತೋರಿಸುವ ಮಹಾನ್ ಗ್ರಂಥವಾಗಿದೆ ಎಂದು ಗುರುಮಠಕಲ್ ಖಾಸಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಯಾದಗಿರಿ ನಗರದಲ್ಲಿ ಶನಿವಾರ ದಿ. ವಿಶ್ವನಾಥರೆಡ್ಡಿ ಗೌಡ ಮುದ್ನಾಳ ಸಭಾಂಗಣದಲ್ಲಿ ಭೀಮ ಜ್ಯೋತಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತ ನಾಟಕ ಪ್ರದರ್ಶನ ಹಾಗೂ ಅಂಬೇಡ್ಕರ್ ಸೇವರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಉತ್ತಮ ನಡತೆ, ಪರಸ್ಪರ ಸಮನ್ವಯ ಹಾಗೂ ಬಾಧ್ಯತೆಯ ಅರಿವಿನಿಂದ ನಡೆದುಕೊಳ್ಳುವ ಮೂಲಕ ರಾಷ್ಟ್ರೀಯ ಏಕತೆಯನ್ನು ಬಲಪಡಿಸಬೇಕಿದೆ. ಸಂವಿಧಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭೀಮ ಜ್ಯೋತಿ ಸಂಸ್ಥೆ ನಡೆಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ನಾಟಕಗಳ ಮೂಲಕ ಮಹಾನ್ ನಾಯಕರ ಜೀವನ ಚರಿತ್ರೆಯನ್ನು ಜನಮನದಲ್ಲಿ ಬಿತ್ತುವ ಮಹತ್ವದ ಕೆಲಸ ಸಂಸ್ಥೆ ಮಾಡುತ್ತಿದೆ’ ಎಂದು ಪ್ರಶಂಸಿಸಿದರು.
ಕಾರ್ಯಕ್ರಮವನ್ನು ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚನ್ನಬಸಪ್ಪ ಮುಧೋಳ್ ಉದ್ಘಾಟಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್. ಚನ್ನಬಸಪ್ಪ, ಉದ್ಯಮಿ ಹಾಗೂ ಶಶಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಶಿರಗೋಳ, ಜಿಲ್ಲಾ ಪಿ/ಪಂ ದೌರ್ಜನ್ಯ ತಡೆ ಸಮಿತಿ ಸದಸ್ಯ ಮರೆಪ್ಪ ಚಟ್ಟರ್ಕರ್, ಸಂಸ್ಥೆಯ ಅಧ್ಯಕ್ಷ ಭೀಮಶಂಕರ್ ಎಂ. ಯರಗೋಳ, ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಷಚಂದ್ರ ಕೌಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು. ಭವಾನಿ ಅಂಬೇಡ್ಕರ್ ಗೀತೆಗೆ ಭರತನಾಟ್ಯ ಪ್ರದರ್ಶಿಸಿದರು. ಅಂಬಿಕಾ ಹಾಗೂ ತಂಡ ಅಂಬೇಡ್ಕರ್ ಹಾಡಿಗೆ ನೃತ್ಯ ಮಾಡಿದರು. ಸೀತಮ್ಮ ಹಾಗೂ ತಂಡ ಅಂಬೇಡ್ಕರ್ ಗೀತೆ ಹಾಡಿದರು. ವಿಜಯನಗರ ಜಿಲ್ಲೆಯ ತುಂಗಭದ್ರ ಕಲಾತಂಡದಿಂದ ‘ನಮ್ಮ ಸಂವಿಧಾನ’ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು.
ಇದನ್ನು ಓದಿದ್ದೀರಾ? ಯಾದಗಿರಿ | ಬಳ್ಳಾರಿ ಗುಂಪು ಘರ್ಷಣೆ ಪ್ರಕರಣ: ಎಸ್.ಪಿ. ಪವನ್ ನೆಜ್ಜೂರ್ ಅಮಾನತು ಖಂಡಿಸಿ ದಸಂಸ ಮನವಿ
ಕಾರ್ಯಕ್ರಮವನ್ನು ರೇಣುಕಾ ಕುಂಬಾರಹಳ್ಳಿ ನಿರೂಪಿಸಿದರು. ಮಾಲಾಶ್ರೀ ಬಿ. ಪ್ರಾರ್ಥಿಸಿದರು. ದೇವೇಂದ್ರ ಧೋತ್ರೆ ಸ್ವಾಗತಿಸಿ ವಂದಿಸಿದರು.

ಇದೆ ವೇಳೆ ಕಾರ್ಯಕ್ರಮದಲ್ಲಿ ಧಾರ್ಮಿಕ ಕ್ಷೇತ್ರದಿಂದ ಶ್ರೀ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿ, ನ್ಯಾಯಾಂಗ ಕ್ಷೇತ್ರದಿಂದ ನ್ಯಾಯಾಧೀಶ ಮರಿಯಪ್ಪ, ಸಾಮಾಜಿಕ ಕ್ಷೇತ್ರದಿಂದ ಎಸ್ ಎಸ್ ಚನ್ನಬಸಪ್ಪ, ವೈದ್ಯಕೀಯ ಕ್ಷೇತ್ರದಿಂದ ಡಾ. ಮಹೇಶ್ ಬಿರಾದಾರ, ಸಾಮಾಜಿಕ ಹೋರಾಟಗಾರೆಂದು ಮರೆಪ್ಪ ಚಟ್ಟರ್ಕರ್, ಶಿಕ್ಷಣ ಕ್ಷೇತ್ರದಿಂದ ಬಾಬು ಗಂಗು ಚೌವ್ಹಾಣ ರವರಿಗೆ ಡಾ. ಬಿ ಆರ್ ಅಂಬೇಡ್ಕರ್ ಸೇವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.





