ಭೂಮಿ, ವಸತಿ ನಿವೇಶನ, ಸ್ಮಶಾನ ಭೂಮಿ ಹಾಗೂ ಭೂ ಒಡೆತನ ಯೋಜನೆಗಳನ್ನು ತಕ್ಷಣ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶಹಾಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನೂರಾರು ಮಹಿಳೆಯರು ತಮಟೆ ಬಾರಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ ಕರೆಯಬೇಕು ಹಾಗೂ ಭೂಮಿ ಇಲ್ಲದ ದಲಿತ ಬಡ ಕುಟುಂಬಗಳಿಗೆ ತಕ್ಷಣ ನಿವೇಶನ, ಭೂ ಹಂಚಿಕೆ ಮತ್ತು ಸ್ಮಶಾನ ಭೂಮಿ ಮೀಸಲು ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ಗೌಡ ದರ್ಶನಾಪೂರ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಜಿಲ್ಲಾಧ್ಯಕ್ಷ ಶರಣ ರೆಡ್ಡಿ ಮಾತನಾಡಿ, ‘ನಿವೇಶನ ವಂಚಿತರಿಗೆ ವಸತಿ ಸೌಲಭ್ಯ ಒದಗಿಸಬೇಕು. ಭೂಮಿ ಇಲ್ಲದವರಿಗೆ ಭೂ ಹಂಚಿಕೆ ಮಾಡಬೇಕು ಹಾಗೂ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.
ಮುಂದುವರೆದು ಅವರು ‘ಹತ್ತಿಗುಡೂರ, ಕೊಂಗೊಂಡಿ, ಯಕ್ಷಿಂತಿ, ಅನವಾರ, ಹಯ್ಯಾಳ ಕೆ, ಮಾಲಹಳ್ಳಿ, ತುಮಕೂರು, ಬೊಮ್ಮನಹಳ್ಳಿ, ಐಕೂರ, ಸಲದಪೂರ ಸೇರಿದಂತೆ ವಿವಿಧ ಗ್ರಾಮಗಳ ದಲಿತ ಬಡ ಕುಟುಂಬಗಳಿಗೆ ತಕ್ಷಣ ಸೌಲಭ್ಯ ಒದಗಿಸಬೇಕು,’ ಎಂದು ಆಗ್ರಹಿಸಿದರು. ಒಂದು ವೇಳೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮೂಲಭೂತ ಹಕ್ಕುಗಳಿಗಾಗಿ ಹೋರಾಟವನ್ನು ನಿರಂತರವಾಗಿ ಮುಂದುವರಿಸುತ್ತೇವೆ,’ ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿದ ಸಚಿವರು, ಸಂಘಟನೆಯ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ‘ಪ್ರಬುದ್ಧ ಅಕಾಡೆಮಿ’: ಉದ್ಘಾಟನೆಗೊಂಡು ಎರಡು ತಿಂಗಳಲ್ಲೇ ಉದುರಿ ಬಿದ್ದ ಚಾವಣಿಯ ಸಿಮೆಂಟ್ ಪದರು
ಪ್ರತಿಭಟನೆಯಲ್ಲಿ ಶರಣಪ್ಪ ಚಲುವಾದಿ, ನಿಂಗಣ್ಣ ಕರಡಿ, ಸಿದ್ದಪ್ಪ ಚಲುವಾದಿ, ಮಲ್ಲಣ್ಣ ರೆಡ್ಡಿ, ಸಿದ್ದಪ್ಪ ಹೊಸಮನಿ, ರಾಮಪ್ಪ ಮಾಲಹಳ್ಳಿ, ಸಾಬಣ್ಣ ಮಾಲಹಳ್ಳಿ, ಯಲ್ಲಮ್ಮ ರಸ್ತಾಪೂರ, ಶಿವಮ್ಮ ಹತ್ತಿಗುಡೂರ, ಮಲ್ಲಮ್ಮ ಹತ್ತಿಗುಡೂರ, ತಂಗಮ್ಮ ಹತ್ತಿಗುಡೂರ, ಜೇಜಮ್ಮ ಚಲುವಾದಿ, ಮಲ್ಲಮ್ಮ ಕೊಂಗೊಂಡಿ, ಲಕ್ಷ್ಮಿ ಹೊಸಮನಿ, ಮರೆಮ್ಮ ಹೊಸಮನಿ, ಮಲ್ಲಮ್ಮ ಸತ್ಯಂಪೇಟೆ, ಮಲ್ಲಮ್ಮ ಕರಡಿ, ಲಕ್ಷ್ಮಿ ತಳವಾರ, ನಿಂಗಮ್ಮ ಗುರಸಣಗಿ, ಮಹಾದೇವಮ್ಮ ಅನಸೂರ, ದ್ಯಾವಮ್ಮ ಚಲುವಾದಿ ಸೇರಿದಂತೆ ನೂರಾರು ಮಹಿಳೆಯರು, ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.





