ನಗರದ ಲುಂಬಿನಿ ಗಾರ್ಡನ್ನಲ್ಲಿ ದೆವ್ವವಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ‘ಲುಂಬಿನಿ ಗಾರ್ಡನ್ನಲ್ಲಿ ದೆವ್ವ ಇದೆಯೇ?’ ಎಂಬ ಶೀರ್ಷಿಕೆಯಡಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ವೈಜ್ಞಾನಿಕ ಜಾಗೃತಿ ಕಾರ್ಯಕ್ರಮವನ್ನು ಭಾನುವಾರ ಲುಂಬಿನಿ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಪರಿಷತ್ತಿನ ಜಿಲ್ಲಾಧ್ಯಕ್ಷ ಗುಂಡಪ್ಪ ಕಲಬುರಗಿ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಮನೋವೈದ್ಯಕೀಯ ಹಾಗೂ ಸೈಕಾಲಜಿಸ್ಟ್ ವ್ಯವಸ್ಥೆ ಕೊರತೆಯಿರುವುದರಿಂದ ಜನರಲ್ಲಿ ಭಯ ಮತ್ತು ಮೂಢನಂಬಿಕೆಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಇಂತಹ ಪರಿಸ್ಥಿತಿಯಲ್ಲಿ ವೈಜ್ಞಾನಿಕ ಜಾಗೃತಿ ಕಾರ್ಯಕ್ರಮಗಳು ಅತ್ಯಗತ್ಯವಾಗಿವೆ ಎಂದು ಹೇಳಿದರು.
ಪ್ರಗತಿಪರ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ‘ದೆವ್ವ–ದೇವರ ಹೆಸರಿನಲ್ಲಿ ಜನರನ್ನು ಮತ್ತೆ ಮೂಢನಂಬಿಕೆಯತ್ತ ಕೊಂಡೊಯ್ಯುವ ಸಂಚು ನಡೆಯುತ್ತಿದೆ. ವಿಜ್ಞಾನ ಹೊರತುಪಡಿಸಿ ಮತ್ತೊಂದು ಅಲೌಕಿಕ ಜಗತ್ತು ಇದೆ ಎಂಬ ಮಾತಿಗೆ ಯಾವುದೇ ತಾರ್ಕಿಕ ಅಥವಾ ವೈಜ್ಞಾನಿಕ ಸಾಕ್ಷ್ಯವಿಲ್ಲ. ದೆವ್ವ, ದೇವರು, ಪುನರ್ಜನ್ಮ, ಜಾತೀಯತೆ ಎನ್ನುವ ಕಲ್ಪನೆಗಳು ಮನುಷ್ಯನ ಮನಸ್ಸಿನಲ್ಲಿ ಹುಟ್ಟಿದ ಭ್ರಮೆಗಳಷ್ಟೇ’ ಎಂದು ಹೇಳಿದರು.
‘ನಿಸರ್ಗ, ಪ್ರಕೃತಿ ಮತ್ತು ತಾಯಿ ನಮ್ಮ ನಿಜವಾದ ದೇವರುಗಳು. ಬುದ್ಧ, ಬಸವ, ಅಂಬೇಡ್ಕರ್ ಅವರ ವೈಚಾರಿಕ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜ ಜಾಗೃತವಾಗುತ್ತದೆ. ಅನ್ಯಾಯದ ವಿರುದ್ಧ ಸಮಾಜದ ಕಣ್ಣು ತೆರೆಸುವ ಕೆಲಸವನ್ನು ಪತ್ರಕರ್ತರು ನಿರಂತರವಾಗಿ ಮಾಡಬೇಕೆಂದು’ ಅವರು ಸಲಹೆ ನೀಡಿದರು.
ವಿಜ್ಞಾನ ವಿಷಯದ ಶಿಕ್ಷಕಿ ಮಧು ಸಿಂಘ ಮಾತನಾಡಿ, ‘ದೆವ್ವ ಸಾಮಾನ್ಯವಾಗಿ ರಾತ್ರಿ ಕಾಣಿಸುತ್ತದೆ ಎನ್ನುವ ನಂಬಿಕೆ ಮಾನವನ ಮೆದುಳಿನ ‘ಅಮಿಗ್ಡಾಲಾ’ ಭಾಗದಿಂದ ಉಂಟಾಗುವ ಭಯದ ಪರಿಣಾಮವಾಗಿದೆ ಎಂದು ವೈಜ್ಞಾನಿಕವಾಗಿ ವಿವರಿಸಿದರು. ಪೆರಿಡೋಲಿಯಾ ಎಂಬ ಸೈಂಟಿಫಿಕ್ ತತ್ವದಂತೆ, ನಾವು ಹೇಗೆ ಯೋಚಿಸುತ್ತೇವೋ ಅದೇ ರೀತಿಯ ಚಿತ್ರಣಗಳು ನಮ್ಮ ಮನಸ್ಸಿನಲ್ಲಿ ರೂಪುಗೊಳ್ಳುತ್ತವೆ’ ಎಂದು ತಿಳಿಸಿದರು.
ಮುಂದುವರೆದು ಅವರು ‘ಇಂದಿನ ಎಐ ತಂತ್ರಜ್ಞಾನ ಬಳಸಿ ಯಾವುದೇ ರೀತಿಯ ಸುಳ್ಳು, ಭಯಾನಕ ವಿಡಿಯೋಗಳನ್ನು ಸುಲಭವಾಗಿ ಸೃಷ್ಟಿಸಬಹುದು. ಲುಂಬಿನಿ ಗಾರ್ಡನ್ ಕುರಿತು ಹರಡಿರುವ ವದಂತಿಯೂ ಇದೇ ರೀತಿಯ ಕೃತಕ ವಿಡಿಯೋಗಳಿಂದ ಹುಟ್ಟಿರುವ ಸಾಧ್ಯತೆ ಇದೆ. ಹಗಲಿನಲ್ಲಿ ಶಬ್ದಗಳು ಜಾಸ್ತಿಯಾಗಿರುವುದರಿಂದ ಭಯವಾಗುವುದಿಲ್ಲ, ಆದರೆ ರಾತ್ರಿ ನಿಶ್ಶಬ್ದತೆ ಹೆಚ್ಚಾಗಿರುವುದರಿಂದ ಮನಸ್ಸು ಕಲ್ಪನೆಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು. ಭೂತ–ಪ್ರೇತಗಳ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಂಶೋಧನೆಗಳು ನಡೆದಿದ್ದರೂ, ಅವುಗಳಿರುವುದಕ್ಕೆ ಯಾವುದೇ ತಾರ್ಕಿಕ ಅಂತ್ಯ ಸಿಕ್ಕಿಲ್ಲ’ ಎಂದು ಸ್ಪಷ್ಟಪಡಿಸಿದರು.
ಗುರುಮಠಕಲ್ ಖಾಸಮಠದ ಶಾಂತವೀರ ಗುರುಮುರುಘಾ ರಾಜೇಂದ್ರ ಮಹಾಸ್ವಾಮೀಜಿ ಮಾತನಾಡಿ, ‘ಸಮಾಜದಲ್ಲಿ ವೈಚಾರಿಕ ಚಿಂತನೆಗಳು ಬಿತ್ತರವಾಗಬೇಕಾದರೆ ಮೊದಲು ಧಾರ್ಮಿಕ ವ್ಯಕ್ತಿಗಳ’ ಬರಬೇಕು. ಸಮಾಜ ಮತ್ತು ದೇಶದ ಮನಸ್ಸನ್ನು ಆಳುತ್ತಿರುವವರು ಧಾರ್ಮಿಕ ಚಿಂತಕರು. ದೇವರು–ಧರ್ಮದ ಭಾಷೆ ಬಳಸಿಕೊಂಡು ಮುಗ್ಧ ಜನರನ್ನು ದಾರಿ ತಪ್ಪಿಸುತ್ತಿದ್ದಾರೆಂದು ಎಂದರು. ಬುದ್ಧ, ಬಸವ, ಅಂಬೇಡ್ಕರ್ ಅವರ ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮೌಢ್ಯ ಹಾಗೂ ಅಜ್ಞಾನದ ಕಸವನ್ನು ಬೇರುಸಮೇತ ಕಿತ್ತುಹಾಕುವ ಕೆಲಸ ಮಾಡಬೇಕಿದೆ’ ಎಂದು ಅವರು ಹೇಳಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಅತಿಥಿ ಉಪನ್ಯಾಸಕನಿಂದ ಜೀವ ಬೆದರಿಕೆ ದೂರು ; ಗುಲ್ಬರ್ಗಾ ವಿವಿ ಕುಲಸಚಿವರ ವಿರುದ್ಧ ಗಂಭೀರ ಆರೋಪ
ಕಾರ್ಯಕ್ರಮದಲ್ಲಿ ದಲಿತ ಸಂಘಟನೆ ಹಿರಿಯ ಮುಖಂಡ ಮರೆಪ್ಪ ಚಟ್ಟರಕರ್, ಫಾದರ್ ವಿವೇಕ್, ವಿಶ್ವನಾಥರೆಡ್ಡಿ ಗೊಂದಡಗಿ, ಸೈದಪ್ಪ ಕೊಲೂರ, ಲಕ್ಷ್ಮಣ ರಾಠೋಡ್, ಮಾಯಾ ಎಸ್.ಆರ್. ನಾಯಕ್, ಸೈದಪ್ಪ ಕೊಯಿಲೂರ, ಭೀಮಣ್ಣ ಹೊಸಮನಿ, ಡಾ. ಜಗದೀಶ್ ನೂಲಿನವರ್, ಡಾ. ಭಾಗ್ಯವಂತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





