ಶಹಾಪೂರ ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಸರ್ವೋದಯ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ದೇಶಭಕ್ತಿ ಹಾಗೂ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ವಿವಿಧ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೆಳೆದವು.
ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳು, ಸಮೂಹ ನೃತ್ಯ, ಏಕಪಾತ್ರ ಅಭಿನಯ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳನ್ನು ಆತ್ಮೀಯವಾಗಿ ಪ್ರದರ್ಶಿಸಿದರು. ವಿಶೇಷವಾಗಿ ಗಾನ ಹಾಗೂ ನೃತ್ಯ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗು ನೀಡಿದವು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಡಾ. ಶ್ರೀಕೃಷ್ಣ ಚಕ್ರವರ್ತಿ ಅವರು, ‘ಭಾರತ ಸಂವಿಧಾನ ಜಾರಿಗೆ ಬಂದ ದಿನವಾದ ಗಣರಾಜ್ಯೋತ್ಸವವು ಜನಸಾಮಾನ್ಯರ ಬದುಕಿಗೆ ಘನತೆ, ಸಮಾನತೆ ಮತ್ತು ಹಕ್ಕುಗಳನ್ನು ತಂದುಕೊಟ್ಟ ಮಹತ್ವದ ದಿನವಾಗಿದೆ ಎಂದರು.
ಸಂವಿಧಾನವು ನಾಗರಿಕರಿಗೆ ನೀಡಿರುವ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ವಿವರವಾಗಿ ಮಾತನಾಡಿ,’ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂಗನವಾಡಿ ಶಿಕ್ಷಕಿ ರೇಖಾ ಪರಮಣ್ಣ ಅವರು ಮಾತನಾಡುತ್ತಾ, ‘ಮಕ್ಕಳಿಂದ ಪ್ರದರ್ಶಿಸಲ್ಪಟ್ಟ ಬಾಲ್ಯವಿವಾಹ ವಿರೋಧಿ ನಾಟಕವು ವೃತ್ತಿಪರ ಕಲಾವಿದರ ಪ್ರದರ್ಶನಕ್ಕೂ ಸಮಾನವಾಗಿದ್ದು, ಸಮಾಜಕ್ಕೆ ಬಲವಾದ ಸಂದೇಶ ನೀಡಿದೆ ಎಂದು ಶ್ಲಾಘಿಸಿದರು. ಬಾಲ್ಯವಿವಾಹವು ದೇಶಕ್ಕೆ ಮಾರಕ ಪಿಡುಗಾಗಿದ್ದು, ಅದನ್ನು ಎಲ್ಲರೂ ಒಂದಾಗಿ ನಿರ್ಮೂಲನೆ ಮಾಡಬೇಕೆಂದು’ ಕರೆ ನೀಡಿದರು.
ಟ್ರಸ್ಟ್ನ ಅಧ್ಯಕ್ಷ ಪ್ರಭಾಕರ ಹೊಸ್ಮನಿ ಅವರು ಮಾತನಾಡಿ, ‘ಮಹಿಳಾ ಸಂಘಗಳ ರಚನೆ ಮತ್ತು ತರಬೇತಿ, ಆರೋಗ್ಯ ಅರಿವು, ಗ್ರಾಹಕ ಜಾಗೃತಿ ಹಾಗೂ ಕರಿಯರ್ ಗೈಡನ್ಸ್ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಟ್ರಸ್ಟ್ ಮೂಲಕ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮಕ್ಕಳಿಗೆ ಸಾಂಸ್ಕೃತಿಕ ತರಬೇತಿ ನೀಡಿದ ಶಿಕ್ಷಕಿಯ ಶ್ರಮವನ್ನು ಎಲ್ಲರೂ ಶ್ಲಾಘಿಸಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಶಿಸ್ತು ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಜೊತೆಗೆ ಅವರ ಪ್ರತಿಭೆಯನ್ನು ಹೊರಹಾಕಲು ಸೂಕ್ತ ವೇದಿಕೆಯಾಗಿರುವುದು ಸ್ಪಷ್ಟವಾಯಿತು.
ಇದನ್ನು ಓದಿದ್ದೀರಾ? ಕಲಬುರಗಿ | ಜ.27 ರಿಂದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಕ್ರಿಕೆಟ್; ಗುಲಬರ್ಗಾ ವಿವಿ ತಂಡ ಸಜ್ಜು
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರಾದ ಮಲ್ಲಮ್ಮ ಬಡಿಗೇರ್ ಹಾಗೂ ಶರಣಪ್ಪ ತಪ್ಪೇದಾರ ಉಪಸ್ಥಿತರಿದ್ದರು. ಸೃಷ್ಟಿ ಸೀತಾನೋರ್ ಅವರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಕಾರ್ಯಕ್ರಮವನ್ನು ಸೌಂದರ್ಯ ತಪ್ಪೇದಾರ ನಿರೂಪಿಸಿದರು. ಆರತಿ ವಿಶ್ವಕರ್ಮ ಸ್ವಾಗತಿಸಿ, ಮೋಹನಕುಮಾರ ಹೊಸ್ಮನಿ ವಂದಿಸಿದರು.





