ಯಾದಗಿರಿ ತಾಲೂಕಿನ ಬಂದಳ್ಳಿ ಗ್ರಾಮದಲ್ಲಿರುವ ಸಹಾಜ್ ಕಿಡ್ಸ್ ಅಕಾಡೆಮಿ ಶಾಲೆಯಲ್ಲಿ 13ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ದಿನೇಶ್ ಫಾಸ್ಟರ್ ಅವರು ಮಾತನಾಡಿ, ‘ಶಾಲೆ ಎಂಬುದು ಮಕ್ಕಳಿಗೆ ಪಾಠ ಮಾತ್ರವಲ್ಲದೆ ಜೀವನದ ಮೌಲ್ಯಗಳು ಮತ್ತು ಸಂಸ್ಕಾರಗಳನ್ನು ಬೆಳೆಸುವ ಕೇಂದ್ರವಾಗಿದೆ ಎಂದು ಹೇಳಿದರು. ಮಕ್ಕಳು ಭವಿಷ್ಯದಲ್ಲಿ ಮಹತ್ತರ ಸಾಧನೆ ಮಾಡಲು ಶಿಸ್ತು, ಪರಿಶ್ರಮ ಮತ್ತು ಅಭ್ಯಾಸದ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಇಂದಿನ ದಿನಗಳಲ್ಲಿ ಶಿಕ್ಷಣ ಅತ್ಯಂತ ಮುಖ್ಯವಾಗಿದ್ದು, ಪೋಷಕರು ಮಕ್ಕಳಿಗೆ ಓದಲು ಪ್ರೋತ್ಸಾಹ ನೀಡಿ ಉತ್ತಮ ವಾತಾವರಣ ನಿರ್ಮಿಸಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಗೌರವಾಧ್ಯಕ್ಷ ಕಾಳಪ್ಪ ಬಡಿಗೇರ್ ಮಾತನಾಡಿ, ‘ವಾರ್ಷಿಕೋತ್ಸವವು ಮಕ್ಕಳ ಪ್ರತಿಭೆ ಅನಾವರಣಗೊಳ್ಳುವ ವೇದಿಕೆಯಾಗಿದ್ದು, ಶಿಸ್ತು, ಸಂಸ್ಕಾರ, ಸ್ವದೇಶಿ ಸಂಸ್ಕೃತಿ, ಭಾಷಾಭಿಮಾನ ಮತ್ತು ಸಮಾಜ ಪರಿವರ್ತನೆ ಶಾಲೆಯ ಮುಖ್ಯ ಗುರಿಗಳಾಗಿವೆ’ ಎಂದು ಹೇಳಿದರು.
ಪ್ರಾಂಶುಪಾಲೆ ಶಶಿಕಲಾ ಬಡಿಗೇರ್ ಅವರು ಶಾಲೆಯ ಸಾಧನೆಗಳ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರತಿಭಾ ಕಾರಂಜಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಮೆಡಲ್ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಪುಟಾಣಿ ಮಕ್ಕಳಿಂದ ನಡೆಸಿದ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ಮೆರುಗು ತಂದವು.
ಇದನ್ನು ಓದಿದ್ದೀರಾ? ಕಲಬುರಗಿ | ನಿವೃತ್ತ ಎಎಸ್ಐ ಮನೆ ದರೋಡೆ
ಸಮಾರಂಭದಲ್ಲಿ ಶಾಲೆಯ ಅಧ್ಯಕ್ಷ ಸುಭಾಷ್ ಚಂದ್ರ ಬಡಿಗೇರ್, ಪ್ರಾಂಶುಪಾಲ ಮಾರ್ತಂಡಪ್ಪ ಮುಷ್ಠೂರು, ಜನಸೇನಾ ಸಂಘಟನೆಯ ರಾಜ್ಯಾಧ್ಯಕ್ಷ ಮೈಲಾರಪ್ಪ ಜಹಾಗಿರ್ದಾರ್, ಸಾಯಬಣ್ಣ ಗುತ್ತೇದಾರ ಸೈದಾಪುರ, ಕೃಷ್ಣ ದಾನಸಕೇರಿ, ಮಂಜುನಾಥ್ ಬಡಿಗೇರ್ ಸೇರಿದಂತೆ ಶಾಲಾ ಸಿಬ್ಬಂದಿ, ಪಾಲಕರು, ಪತ್ರಕರ್ತರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





