ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ವತಿಯಿಂದ ಆಯೋಜಿಸಲಾದ ಮೂರು ದಿನಗಳ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನವು ಸೋಮವಾರ ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಘಾಟನೆಯಾಯಿತು.
ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಿ ಮಾತನಾಡಿ, ‘ಗುಡಿ–ಗುಂಡಾರಗಳ ಹೆಸರಿನಲ್ಲಿ ಜನರನ್ನು ಭಯಪಡಿಸಿ ಬಡವರಿಂದ ಹಣ ವಸೂಲಿಸುವ ಪ್ರವೃತ್ತಿ ಇನ್ನೂ ಮುಂದುವರಿದಿರುವುದು ಆತಂಕಕಾರಿ ಎಂದರು. ದೇವರು ಯಾರಿಗೂ ಕೆಡುಕನ್ನು ಮಾಡುವುದಿಲ್ಲ, ಮನುಷ್ಯನೇ ಮನುಷ್ಯನಿಗೆ ಕೆಡುಕು ಮಾಡುತ್ತಾನೆ. ಈ ಅಂಧಶಕ್ತಿಗಳನ್ನು ವೈಜ್ಞಾನಿಕವಾಗಿ ಪ್ರಶ್ನಿಸಿ ಎದುರಿಸುವ ಶಕ್ತಿ ವಿಜ್ಞಾನಕ್ಕಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇಂತಹ ವೈಜ್ಞಾನಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ಒದಗಿಸುವ ಭರವಸೆ’ ನೀಡಿದರು.

ಸಾನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಮಠದ ಶಾಂತವೀರ ಗುರುಮುರುಘಾ ರಾಜೇಂದ್ರ ಮಹಾಸ್ವಾಮೀಜಿ, ಅಂಧಶ್ರದ್ಧೆಗಳು ಶತಮಾನಗಳಿಂದ ಸಮಾಜದಲ್ಲಿ ಬೇರೂರಿದ್ದು, ವೈಜ್ಞಾನಿಕ ಚಿಂತನೆ ಮತ್ತು ಜಾಗೃತಿಯಿಂದ ಮಾತ್ರ ಸಮಾಜವನ್ನು ಬೆಳಕಿನತ್ತ ಕರೆದೊಯ್ಯಲು ಸಾಧ್ಯ’ ಎಂದು ಹೇಳಿದರು.
ಇದೆ ವೇಳೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ‘ವೈಜ್ಞಾನಿಕ ಸಮ್ಮೇಳನಗಳಿಗೆ ಅಗತ್ಯ ಅನುದಾನ ನೀಡುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ಮುಂದಿನ ಸಮ್ಮೇಳನವನ್ನು ಬೆಳಗಾವಿಯಲ್ಲಿ ಆಯೋಜಿಸುವ ಆಶಯವನ್ನೂ’ ವ್ಯಕ್ತಪಡಿಸಿದರು.
ಸಮ್ಮೇಳನಾಧ್ಯಕ್ಷ ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ‘ಕಲ್ಯಾಣ ಕರ್ನಾಟಕದಲ್ಲಿ ಮೌಢ್ಯತೆ, ಅಂಧನಂಬಿಕೆ ಮತ್ತು ಜಾತಿ ತಾರತಮ್ಯಗಳ ಅಂಧಕಾರ ದೂರವಾಗುವವರೆಗೂ ನಿಜವಾದ ಅಭಿವೃದ್ಧಿ ಸಾಧ್ಯವಿಲ್ಲ’ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಕೋಲಿ, ಕಬ್ಬಲಿಗ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಕಾರ್ಯಕ್ರಮದಲ್ಲಿ ‘ವಿಜ್ಞಾನಗಿರಿ’ ಸ್ಮರಣ ಸಂಚಿಕೆ, 2026ರ ಕ್ಯಾಲೆಂಡರ್ ಹಾಗೂ ದಿನಚರಿಯನ್ನು ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಿಗೆ ಜೀವಮಾನ ಸಾಧನಾ ಪ್ರಶಸ್ತಿ ಹಾಗೂ ವಿಶಿಷ್ಟ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಪರಿಷತ್ತಿನ ಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಹಲವಾರು ಗಣ್ಯರು, ಧಾರ್ಮಿಕ ನಾಯಕರು, ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.





