ಅಖಿಲ ಭಾರತ ರೈತ ಕೃಷಿಕಾರ್ಮಿಕ ಸಂಘದ ರಾಜ್ಯ ಕಾರ್ಯದರ್ಶಿ ಬಿ. ಭಗವಾನ್ ರೆಡ್ಡಿ ಸೇರಿದಂತೆ ಇನ್ನಿತರ ಹೋರಾಟಗಾರರ ಬಂಧನವನ್ನು ಖಂಡಿಸಿ
ಯಾದಗಿರಿ ತಾಲೂಕು ಹೆಡಗಿ ಮದ್ರ ಗ್ರಾಮದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಕೆಕೆಎಂಎಸ್ ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ಜಮಾಲ್ ಸಾಬ್ ಮಾತನಾಡಿ, ‘ಬಿಜಾಪುರ ಸರ್ಕಾರಿ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ಕಳೆದ 100 ದಿನಗಳಿಂದ ನಡೆಯುತ್ತಿರುವ ಹೋರಾಟದ ನಾಯಕರನ್ನು ಬಂಧಿಸಿ, 307 ಸೇರಿದಂತೆ ಸುಳ್ಳು ಪ್ರಕರಣಗಳನ್ನು ದಾಖಲಿಸಿರುವುದು ಖಂಡನೀಯ’ ಎಂದರು.

‘ಪ್ರಜಾಪ್ರಭುತ್ವದಲ್ಲಿ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಹಕ್ಕು ಜನರಿಗೆ ಇದೆ. ಆದರೆ ರಾಜ್ಯ ಸರ್ಕಾರ ಆ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದೆ. ಮೊನ್ನೆ ಧಾರವಾಡದಲ್ಲಿ ಹಾಗೂ ಇದೀಗ ಬಿಜಾಪುರದಲ್ಲಿ ಹೋರಾಟಗಾರರ ಬಂಧನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜಾಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗುವವರೆಗೆ ಹೋರಾಟ ನಿಲ್ಲುವುದಿಲ್ಲ. ದಮನದ ನಡುವೆಯೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು. ಪೊಲೀಸರು ಮೇಲಧಿಕಾರಿಗಳ ಆದೇಶಗಳಿಗೆ ಮಾತ್ರ ಬದ್ಧರಾಗದೆ, ನ್ಯಾಯಯುತ ಹೋರಾಟಗಾರರ ಪರ ನಿಲ್ಲಬೇಕು’ ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಬುದ್ಧ, ಬಸವ, ಅಂಬೇಡ್ಕರ್ ತತ್ವ ಚಿಂತನೆಗಳು ಅವಶ್ಯಕ : ಮುರುಘರಾಜೇಂದ್ರ ಶ್ರೀ
‘ಬಂಧಿತರನ್ನು ಯಾವುದೇ ಷರತ್ತು ಇಲ್ಲದೆ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ದಾಖಲಾಗಿರುವ ಎಲ್ಲಾ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಂಬರೀಶ್ ಧಣಿ ಕೆಂಭಾವಿ, ಸುರೇಶ್ ತೆಳಿ ಗೇರಿ, ಮರಿಯಪ್ಪ ಶಂಕರ ಬಂಡಿ, ತಿಮ್ಮಣ್ಣ, ಸಾಬಣ್ಣ ಕಟಕಟಿ, ಸಾಹೇಬ್ ಗೌಡ ಅಲ್ಲಿಪುರ್, ಸಾಬಣ್ಣ ಪತ್ಪುರ್, ಮಲ್ಲಮ್ಮ ಅಂಬಿಗೇರ್, ಮೆಹಬೂಬ್ ಬಿ. ಹುಲಕಲ್, ದ್ಯಾವಮ್ಮ ಶಂಕರ ಬಂಡಿ, ಮಲ್ಲಮ್ಮ ಪೂಜಾರಿ, ದ್ಯಾವಮ್ಮ ಮಡಿವಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.





