ಯಾದಗಿರಿ ತಾಲೂಕಿನ ಹೆಡಗಿಮದ್ರ ಗ್ರಾಮದಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆ ತಕ್ಷಣ ಬಗೆಹರಿಸುವಂತೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್) ವತಿಯಿಂದ ಶನಿವಾರ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರ ಯಾದಗಿರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಕೆಕೆಎಂಎಸ್ನ ಜಿಲ್ಲಾ ಅಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ‘ಹೆಡಗಿಮದ್ರ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಗ್ರಾಮದ ಅರ್ಧ ಭಾಗ ಕತ್ತಲಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಡಿಮೆ ಸಾಮರ್ಥ್ಯದ ಡಿಸಿಗೆ ಹೆಚ್ಚಿನ ಲೋಡ್ ಬೀಳುತ್ತಿರುವುದರಿಂದ ಎರಡು, ಮೂರು ದಿನಗಳಿಗೊಮ್ಮೆ ನ್ಯೂಟ್ರಲ್ ಕಟ್ಟಾಗುವುದು, ಕೇಬಲ್ ಕಟ್ ಆಗುವುದು ಸಂಭವಿಸುತ್ತಿದೆ. ಇದರ ಪರಿಣಾಮವಾಗಿ ಮನೆಗಳಲ್ಲಿ ಬಳಕೆಯಲ್ಲಿರುವ ಫ್ರಿಡ್ಜ್, ಫ್ಯಾನ್, ಟಿವಿ ಹಾಗೂ ಬಲ್ಬುಗಳು ನಿರಂತರವಾಗಿ ಸುಡುತ್ತಿವೆ’ ಎಂದು ದೂರಿದರು.
‘ಈ ಸಮಸ್ಯೆಯ ಬಗ್ಗೆ ಹಲವು ಬಾರಿ ಜೆಇ ಹಾಗೂ ಎಇಇ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಶಾಶ್ವತ ಪರಿಹಾರ ದೊರಕಿಲ್ಲ. ಆದ್ದರಿಂದ ಹೆಡಗಿಮದ್ರ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಿ ಸಮರ್ಪಕವಾಗಿ ವಿದ್ಯುತ್ ಕಲ್ಪಿಸಿಕೊಂಡಬೇಕೆಂದು’ ಒತ್ತಾಯಿಸಿದರು.
ಮುಂದುವರಿದು ಮಾತನಾಡಿದ ಅವರು, ‘ಸುಮಾರು ಒಂದು ವರ್ಷದ ಹಿಂದೆ ಸ್ಥಾಪಿಸಿದ 20 ವಿದ್ಯುತ್ ಕಂಬಗಳಿಗೆ ಇನ್ನೂ ತಂತಿಗಳನ್ನು ಎಳೆಯಲಾಗಿಲ್ಲ. ಕೂಡಲೇ ತಂತಿಗಳನ್ನು ಅಳವಡಿಸಿ ರೈತರಿಗೆ ನಿರಂತರವಾಗಿ ಕನಿಷ್ಠ ಏಳು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕು. ಮನೆಗಳ ಮೇಲಿಂದ ಹಾದು ಹೋಗಿರುವ ಎಚ್ಟಿ ಲೈನ್ ಅನ್ನು ಬೇರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು’ ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಪ್ರಜಾಸೌಧ ನಿರ್ಮಾಣ ಪ್ರಸ್ತಾವನೆ ಈ ಕೂಡಲೇ ಕೈ ಬಿಡಬೇಕು ; ವಿಶ್ವ ನಾಟೇಕಾರ್
‘ಪ್ರತಿಭಟನಾ ಸ್ಥಳಕ್ಕೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಎಇಇ) ಆಗಮಿಸಿ ಮನವಿ ಸ್ವೀಕರಿಸಿ, ಒಂದು ವಾರದ ಒಳಗೆ ಹೆಡಗಿಮದ್ರ ಗ್ರಾಮದ ವಿದ್ಯುತ್ ಸಂಬಂಧಿತ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ’ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಜಮಾಲ್ ಸಾಬ್ ಹೆಡಗಿಮದ್ರ, ಅಂಬರೀಶ್ ಕೆಂಭಾವಿ ಧಣಿ, ಮರಿಯಪ್ಪ ಕೋಟೆಕಲ್, ದೇವೇಂದ್ರಪ್ಪ ನಟಿಕಾರ್, ಖಾಜಾ ಪಾಷಾ ಹುಲ್ಕಲ್, ಬಸವರಾಜ್ ದಂಡಗುಂಡ, ಭೀಮರಾಯ ಪೌಡೇಪೋರ್, ಭೀಮರಾಯ ಪೂಜಾರಿ, ಸಾಹೇಬ್ ಗೌಡ ಅಲ್ಲಿಪುರ್, ಮಲ್ಲಮ್ಮ ಅಂಬಿಗೇರ್, ಮೈಬುಬ್ಬಿ ಉಲ್ಕಲ್, ಸಲೀಮಾ ಮುಲ್ಲಾ, ಶಾಂತಮ್ಮ, ಮಲ್ಲಮ್ಮ, ನಾಗಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.





