ಬಳ್ಳಾರಿ ನಗರದಲ್ಲಿ ಜನವರಿ 01, 2026ರಂದು ನಡೆದ ಗುಂಪು ಘರ್ಷಣೆಯ ಹಿನ್ನೆಲೆಯಲ್ಲಿ ಎಸ್.ಪಿ. ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ದಲಿತ ಸಂಘರ್ಷ ಸಮಿತಿ (ಭೀಮವಾದ) ಯಾದಗಿರಿ ಘಟಕದ ವತಿಯಿಂದ ಶನಿವಾರ ಶಹಾಪುರ ತಹಶೀಲ್ದಾರ್ ರವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ದಸಂಸ ಭೀಮವಾದ ಮುಖಂಡರು ಮಾತನಾಡಿ, ‘ವಾಲ್ಮೀಕಿ ಮತ್ಥಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ಅಳವಡಿಕೆ ವಿಚಾರವಾಗಿ ಬಿಜೆಪಿ ಶಾಸಕ ಜನಾರ್ಧನರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ಭರತರೆಡ್ಡಿ ಬಣಗಳ ನಡುವೆ ಘರ್ಷಣೆ ಉಂಟಾಗಿದ್ದು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಜನಪ್ರತಿನಿಧಿಗಳೇ ರೌಡಿಗಳಂತೆ ವರ್ತಿಸಿದ ಪರಿಣಾಮ ಪರಿಸ್ಥಿತಿ ಉದ್ರಿಕ್ತಗೊಂಡಿತು’ ಎಂದು ಆರೋಪಿಸಿದರು.
‘ಘರ್ಷಣೆಯಲ್ಲಿ ರಾಜಶೇಖರ ಎಂಬ ಅಮಾಯಕರೊಬ್ಬರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ಖೇದಕರ ಸಂಗತಿ. ಆದರೆ ಘಟನೆಯಲ್ಲಿ ನೇರ ಹೊಣೆಗಾರರಾದ ಇಬ್ಬರು ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಅಧಿಕಾರ ವಹಿಸಿಕೊಂಡ ಕೇವಲ ಮೂರು ಗಂಟೆಗಳಲ್ಲೇ ನಡೆದ ಘಟನೆಯ ಹೊಣೆಯನ್ನು ಎಸ್.ಪಿ. ಪವನ್ ನೆಜ್ಜೂರ್ ಅವರ ಮೇಲೆ ಹೊರಿಸಿ ಅಮಾನತು ಮಾಡಿರುವುದು ನ್ಯಾಯಸಮ್ಮತವಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಎಸ್.ಪಿ. ಪವನ್ ನೆಜ್ಜೂರ್ ಅವರು ಕರ್ತವ್ಯ ಪಾಲನೆಯಲ್ಲೇ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿ, ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಶಾಸಕ ಭರತರೆಡ್ಡಿ ಅವರ ಖಾಸಗಿ ಗನ್ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿ ಕಾನೂನು ಉಲ್ಲಂಘನೆ ಮಾಡಿದ ಕುರಿತು ಸರ್ಕಾರ ಮೌನ ವಹಿಸಿರುವುದು ಆತಂಕಕಾರಿ’ ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಕಲಬುರಗಿ ಜಿಲ್ಲೆಯ ಮೂವರು ಮಹಿಳಾ ಸಾಧಕಿರು ಆಯ್ಕೆ
‘ರಾಜಕೀಯ ದರ್ಪ ಮತ್ತು ಸ್ವಾರ್ಥದ ಕಿತ್ತಾಟದಿಂದ ಒಬ್ಬ ಅಮಾಯಕರ ಜೀವ ಹೋದರೂ, ಅವರ ಕುಟುಂಬಕ್ಕೆ ನ್ಯಾಯ ದೊರಕದಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಸಂಘಟನೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಎಸ್.ಪಿ. ಪವನ್ ನೆಜ್ಜೂರ್ ಅವರ ಅಮಾನತು ಆದೇಶವನ್ನು ತಕ್ಷಣವೇ ರದ್ದುಗೊಳಿಸಬೇಕು, ಘಟನೆಯಲ್ಲಿ ನೇರ ಹೊಣೆಗಾರರಾದ ಶಾಸಕ ಜನಾರ್ಧನರೆಡ್ಡಿ ಹಾಗೂ ಶಾಸಕ ಭರತರೆಡ್ಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮೃತ ರಾಜಶೇಖರ ಅವರ ಕುಟುಂಬಕ್ಕೆ ನ್ಯಾಯಸಮ್ಮತ ಪರಿಹಾರ ಒದಗಿಸಬೇಕು’ ಎಂದ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ವಿಶ್ವನಾಟೇಕಾರ್, ಜಿಲ್ಲಾ ಉಸ್ತುವಾರಿ ಶರಣು ದೊರನಹಳ್ಳಿ, ಜಿಲ್ಲಾ ಸಹ ಸಂಚಾಲಕ ಬಸವರಾಜ ಚಿಪ್ಪಾರ್, ರಾಜ್ಯ ಸಮಿತಿ ಸದಸ್ಯ ಶಿವು ಪೋತೆ, ಜಿಲ್ಲಾ ಸಹ ಸಂಚಾಲಕ ಸಂತೋಷ ಗೋಗಿ, ತಾಲ್ಲೂಕು ಸಹ ಸಂಚಾಲಕ ಶರಣು ಹುರುಸಗುಂಡಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





