ಪುಸ್ತಕಗಳು ನಮ್ಮ ಜ್ಞಾನದ ಬುನಾದಿಯಾಗಿದ್ದು, ಅರಿವಿನ ಸಂಕೇತಗಳಾಗಿವೆ. ಗಾಂಧಿ, ಅಬ್ದುಲ್ ಕಲಾಂ ಅವರಂತಹ ಮಹಾನ್ ವ್ಯಕ್ತಿಗಳನ್ನು ಸಮಾಜಕ್ಕೆ ನೀಡಿರುವ ಶಕ್ತಿ ಪುಸ್ತಕಗಳಲ್ಲಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅಭಿಮತ ಅವರು ಹೇಳಿದರು.
ಯಾದಗಿರಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ ಕನ್ನಡ ಪುಸ್ತಕ ಪ್ರಾಧಿಕಾರದ ‘ಮನೆಗೊಂದು ಗ್ರಂಥಾಲಯ’ ಯೋಜನೆಯ ಕರಪತ್ರ ಬಿಡುಗಡೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಅಭಿಯಾನವು ಮುಖ್ಯವಾಗಿ ಯುವಜನತೆಗೆ ತಲುಪಬೇಕಾಗಿರುವ ಅಭಿಯಾನವಾಗಿದ್ದು. ಪುಸ್ತಕಗಳು ನಮ್ಮ ಜ್ಞಾನದ ಬುನಾದಿ, ಅರಿವಿನ ಸಂಕೇತವಾಗಿವೆ ಅವುಗಳು ಗಾಂಧಿ, ಕಲಾಂ ನಂತವರನ್ನು ಸಮಾಜಕ್ಕೆ ನೀಡಿವೆ ಅದಕ್ಕಾಗಿ ನಮ್ಮ ಪ್ರಾಧಿಕಾರದಿಂದ ಒಂದು ವಿನೂತನ ಕಾರ್ಯವನ್ನು ಕೈಗೊಂಡಿದ್ದೇವೆ. ಮನೆಗಳನ್ನು ಜ್ಞಾನ ಮಂದಿರಗಳನ್ನಾಗಿ ಪರಿವರ್ತಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಚಲನಚಿತ್ರ ನಟರು, ಜನಪ್ರತಿನಿಧಿಗಳು, ರಾಜಕಾರಣಿಗಳ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಯೋಜನೆ ಇದೆ. ಇದಕ್ಕೆ ಓದುವ ಸಂಸ್ಕೃತಿ ಹೆಚ್ಚಿಸುವ ಕಾರ್ಯ ಹೆಚ್ಚಿಸಬೇಕಿದೆʼ ಎಂದರು.

‘ಗ್ರಂಥಾಲಯಗಳ ಸತತ ಕ್ರಿಯಾಶೀಲತೆಗೆ ಜಿಲ್ಲಾಮಟ್ಟದಲ್ಲಿ ಗ್ರಂಥಾಲಯ ಜಾಗೃತಿ ಸಮಿತಿಗಳನ್ನು ರಚಿಸಲಾಗುವುದು. ಹೊಸ ಗ್ರಂಥಾಲಯಗಳ ಸ್ಥಾಪನೆ, ಹೊಸ ಪುಸ್ತಕಗಳ ಪರಿಚಯ, ಗಣ್ಯರೊಂದಿಗೆ ಸಂವಾದ, ಸ್ಥಳೀಯ ಸಾಹಿತಿಗಳ ಸಾಧನೆಗೆ ಅಭಿನಂದನಾ ಕಾರ್ಯಕ್ರಮಗಳು ಸಮಿತಿಯ ಕರ್ತವ್ಯವಾಗಿರುತ್ತವೆ’ ಎಂದರು.
ಮನೆಗೊಂದು ಗ್ರಂಥಾಲಯ ಜಾಗೃತಿ ಸಮಿತಿಯ ಸಂಚಾಲಕರಾಗಿ ಪ್ರಕಾಶ್ ಅಂಗಡಿ ಅವರನ್ನು ಹಾಗೂ ಸದಸ್ಯರಾಗಿ ಭಾಗ್ಯದೋರೆ, ನೀಲಮ್ಮ ಮಲ್ಲೆ, ದೇವೇಂದ್ರ ಹುಲ್ಕಲ್ (ಜೆ), ಸಂತೋಷ್ ಸತ್ಯಂಪೇಟ್, ಕನಕಪ್ಪ ವಾಗನಣಗೇರಿ, ನೀಲಕಂಠ ಹೊನ್ಕಲ್ ಮತ್ತು ಮಲ್ಲಿಕಾರ್ಜುನ್ ಕೊಠಗೇರಿ ಅವರನ್ನು ನೇಮಿಸಿ ಅರ್ಹತಾ ಪತ್ರಗಳನ್ನು ವಿತರಿಸಲಾಯಿತು.
ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಕಸಾಪ ತಾಲ್ಲೂಕು ಅಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ ಹಾಗೂ ಪುಸ್ತಕ ಪ್ರಾಧಿಕಾರದ ಶ್ರೀನಿವಾಸ್ ಕರಿಯಪ್ಪ ವೇದಿಕೆ ಮೇಲೆ ಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಕಲಬುರಗಿ | ಮರ್ಯಾದಾ ಹತ್ಯೆ ಖಂಡಿಸಿ: ಮರ್ಯಾದಾ ಹತ್ಯೆ ತಡೆ ಕಾಯ್ದೆ ತರಲು ಆಗ್ರಹಿಸಿ ಬೃಹತ್ ಪ್ರತಿಭಟನೆ
ಕಾರ್ಯಕ್ರಮವನ್ನು ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಭಾಶ್ಚಂದ್ರ ಕೌಲಗಿ, ಸಾಹಿತಿ ಡಾ.ಗಾಳೆಪ್ಪ ಪೂಜಾರಿ, ಎಸ್.ಎಸ್. ನಾಯಕ್, ಮಹಾದೇವಪ್ಪಗೌಡ, ಸಿ.ಎಂ.ಪಟ್ಟೇದಾರ್, ಬಸವರಾಜ ಮೊಟನಳ್ಳಿ, ಚನ್ನಪ್ಪಗೌಡ, ದೇವರಾಜ ನಾಯಕ, ದ್ವೀತಿಯ ದರ್ಜೆ ಗುತ್ತಿಗೆದಾರ ಮರಿಲಿಂಗ ಬಂದಳ್ಳಿ, ದೊಡ್ಡಮಾನಪ್ಪ ನಾಟೇಕರ್, ಸಣ್ಣ್ಡಮಾನಪ್ಪ ನಾಟೇಕರ್, ಕು. ಸಂಗೀತ ಹುಲ್ಕಲ್ ಭಾಗವಹಿಸಿದರು.
ಕಾರ್ಯಕ್ರಮವನ್ನು ಡಾ.ಭೀಮರಾಯ ಲಿಂಗೇರಿ ನಿರೂಪಿಸಿದರು, ಪ್ರಕಾಶ ಅಂಗಡಿ ಸ್ವಾಗತಿಸಿ ವಂದಿಸಿದರು.





