ವಡಗೇರಾ ತಾಲ್ಲೂಕಿನಲ್ಲಿ ವೃದ್ಧ ದಂಪತಿಯನ್ನು ದಾರಿಯ ಮಧ್ಯದಲ್ಲೇ ಬಸ್ನಿಂದ ಇಳಿಸಿದ ಘಟನೆಗೆ ಸಂಬಂಧಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ತಕ್ಷಣ ಕ್ರಮ ಕೈಗೊಂಡು ಬಸ್ ನಿರ್ವಾಹಕನನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.
ಫೆಬ್ರವರಿ 9ರಂದು ಕಲಬುರಗಿ ಮೂಲದ ಸಂಗಮೇಶ ಹಾಗೂ ಅನ್ನಪೂರ್ಣ ಎಂಬ ವೃದ್ಧ ದಂಪತಿ ಯಾದಗಿರಿ ಸಂಗಮ ನಾಮಫಲಕ ಹೊಂದಿದ ಬಸ್ಗೆ ಹತ್ತಿ ಸಂಗಮ ಗ್ರಾಮಕ್ಕೆ ತೆರಳುತ್ತಿದ್ದರು. ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ ಎಂಬ ನೆಪವೊಡ್ಡಿದ ನಿರ್ವಾಹಕ, ಗಂಡೂರು ಗ್ರಾಮದ ಸಮೀಪ ದಂಪತಿಯನ್ನು ಬಸ್ನಿಂದ ಇಳಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಬಸ್ನಿಂದ ಇಳಿಸಲ್ಪಟ್ಟ ವೃದ್ಧ ದಂಪತಿ ಸುಮಾರು 2.5 ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲೇ ಸಾಗಿದ್ದು, ಸಂಗಮ ಗ್ರಾಮ ತಲುಪಬೇಕಾದ ಸಂಕಷ್ಟಕರ ಪರಿಸ್ಥಿತಿ ಎದುರಿಸಬೇಕಾಯಿತು. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಮಹಾಶಿವರಾತ್ರಿ ಹಿನ್ನೆಲೆ ಕೋಟೆಯಲ್ಲಿ ಪೂಜೆಗೆ ಯತ್ನ, ದಿವ್ಯಾ ಹಾಗರಗಿ ಸೇರಿ ಹಲವರು ಪೊಲೀಸ್ ವಶಕ್ಕೆ
ಪ್ರಕರಣ ಬೆಳಕಿಗೆ ಬಂದ ತಕ್ಷಣ ಕಕರಸಾ ಅಧಿಕಾರಿಗಳು ಪರಿಶೀಲನೆ ನಡೆಸಿ ಸಂಬಂಧಿತ ನಿರ್ವಾಹಕನನ್ನು ಅಮಾನತುಗೊಳಿಸಿದ್ದಾರೆ. ಇಲಾಖಾ ವಿಚಾರಣೆ ಪೂರ್ಣಗೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.





