ಶೇಂಗಾ ಬೆಳೆ ಬೆಲೆ ದಿಢೀರ್ ಕುಸಿತಗೊಂಡಿರುವುದನ್ನು ಖಂಡಿಸಿ ಹಾಗೂ ಪ್ರತಿ ಕ್ವಿಂಟಾಲ್ಗೆ ₹12 ಸಾವಿರ ದರ ನಿಗದಿ ಮಾಡಿ ಖರೀದಿ ಮಾಡುವಂತೆ ಆಗ್ರಹಿಸಿ ರೈತ ಮುಖಂಡರು ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು.
ನಗರದ ಎಪಿಎಂಸಿ ಮಾರುಕಟ್ಟೆ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಧರಣಿ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ಮುಖಂಡರು ಮಾತನಾಡಿ, ‘ನಮ್ಮ ಭಾಗದ ರೈತರು ನಿರಂತರ ಹಸಿಬರ ಹಾಗೂ ಒಣಬರ ನಡುವೆಯೂ ಸಂಕಷ್ಟದಲ್ಲಿ ಕೃಷಿ ನಡೆಸುತ್ತಿದ್ದಾರೆ. ಉತ್ತಮವಾಗಿ ಬೆಳೆದ ಶೇಂಗಾ ಬೆಳೆ ಕೈಗೆ ಬಂದ ತಕ್ಷಣವೇ ಬೆಲೆ ಕುಸಿತ ಕಂಡಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶೇಂಗಾ ಬೆಳೆ ಬೆಳೆದ ಸಂದರ್ಭದಲ್ಲಿ ಕ್ವಿಂಟಾಲ್ಗೆ ಸುಮಾರು ₹12 ಸಾವಿರ ಇದ್ದ ಬೆಲೆ ಇದೀಗ ₹5 ಸಾವಿರದಿಂದ ₹6 ಸಾವಿರಕ್ಕೆ ಇಳಿದಿದೆ. ಸಾಲ-ಸೋಲು ಮಾಡಿಕೊಂಡು ಬೆಳೆದ ಬೆಳೆಗೆ ಸಮರ್ಪಕ ಬೆಲೆ ಸಿಗದೇ ರೈತರು ದಿಕ್ಕುತೋಚದ ಸ್ಥಿತಿಗೆ ತಲುಪಿದ್ದಾರೆ,’ ಎಂದು ಹೇಳಿದರು.
‘ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಶೇಂಗಾ ಬೆಳೆಕ್ಕೆ ಕನಿಷ್ಠ ₹12 ಸಾವಿರ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರಗಳ ಮೂಲಕ ಖರೀದಿ ನಡೆಸಬೇಕು. ಮಾರುಕಟ್ಟೆಗೆ ರೈತರು ತರುವ ಉತ್ಪನ್ನಕ್ಕೆ ಕಮಿಷನ್, ಸೂಟ್ ಅಥವಾ ಹಮಾಲಿ ಶುಲ್ಕ ಹೆಸರಿನಲ್ಲಿ ಕಡಿತ ಮಾಡದಂತೆ ವರ್ತಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದರು.

‘ಹೊರ ಜಿಲ್ಲೆಯ ಖರೀದಿದಾರರು ಬಂದಾಗ ಸ್ಥಳೀಯ ವರ್ತಕರು ಅಡ್ಡಿಪಡಿಸದೆ ಖರೀದಿಗೆ ಅವಕಾಶ ಕಲ್ಪಿಸಬೇಕು. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ’ ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಪೊಲೀಸರ ಅಮಾನತು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿಜಯ ಭರತ, ರಾಜ್ಯ ಕಾರ್ಯದರ್ಶಿ ಮಹೇಶಗೌಡ ಎಂ. ಸುಬೇದಾರ, ರಾಜ್ಯ ಉಪಾಧ್ಯಕ್ಷ ಶಾಂತವೀರಪ್ಪ ಗೌಡ ಪೋಪಾ, ಹಣಮೇಗೌಡ ಬೀರನಕಲ್, ರಾಕೇಶ್ ಗೌಡ ಪಾಟೀಲ್, ರಾಮನಾಥ ರೆಡ್ಡಿ, ಮಹಾಂತಗೌಡ ಮದ್ದರಕಿ, ವೀರೇಶ ಕಡಬೂರ, ವೆಂಕಟೇಶ ಬೋರಬಂಡಾ, ರಮೇಶ್ ಗಾಂಜಿ, ಗುರುರಾಜ ಸೇರಿದಂತೆ ಹಲವರು ಭಾಗವಹಿಸಿದ್ದರು.





