ಯಾದಗಿರಿ ನಗರದೊಳಗೆ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಹಾಗೂ ಅನಧಿಕೃತ ವಸತಿ ಶಾಲೆಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಸುಭಾಷ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಿಂದ ಡಿಡಿಪಿಐ ಕಚೇರಿವರೆಗೆ ಕತ್ತೆಗಳ ಮೆರವಣಿಗೆ ನಡೆಸಿ, ಶಿಕ್ಷಣ ಇಲಾಖೆಯ ವಿಳಂಬ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ. ಜಿಲ್ಲಾಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಕತ್ತೆಗಳೊಂದಿಗೆ ಡಿಡಿಪಿಐ ಕಚೇರಿಗೆ ತೆರಳಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ಅವರು, ಅಕ್ರಮ ವಸತಿ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಈಗಾಗಲೇ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಹಾಗೂ ಶಹಾಪೂರದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದ್ದರೂ ಶಿಕ್ಷಣ ಇಲಾಖೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದೇ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಇಲಾಖೆಯ ಗಮನ ಸೆಳೆಯುವ ಉದ್ದೇಶದಿಂದಲೇ ಕತ್ತೆಗಳ ಮೆರವಣಿಗೆಯಂತಹ ವಿನೂತನ ಪ್ರತಿಭಟನೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಮರ್ಯಾದೆ ಹತ್ಯೆ ಖಂಡಿಸಿ ದಸಂಸ ಪ್ರತಿಭಟನೆ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿಡಿಪಿಐ ಅವರು, ಜನವರಿ 2ರ ನಂತರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆದರು.
ಈ ಪ್ರತಿಭಟನೆಯಲ್ಲಿ ಭೀಮು ಪೂಜಾರಿ, ಅಬ್ದುಲ್ ಸಾಹುಕಾರ್, ಅಬ್ದುಲ್ ಅಜೀಜ್, ಮಲ್ಲಿಕಾರ್ಜುನ ಸಾಂಗ್ಲಿಯಾನಾ, ಮಹೇಶ್, ನರೇಂದ್ರ ಸೂರ್ಯವಂಶಿ, ಶರಣಪ್ಪ ಕುಂಬಾರ, ಶ್ರೀದೇವಿ ಕಟ್ಟಿಮನಿ, ನಾಗರಡ್ಡಿ ಗೌಡ, ಅಂಬ್ರೇಶ್, ರಾಜು ಗುಂಡಗುರ್ತಿ, ಶರಣು ದೇವರಮನಿ,ಸಿದ್ದು ಪಟ್ಟೇದಾರ, ಮಲ್ಲು ಕಲ್ಮನಿ, ಭೀಮಣ್ಣಗೌಡ, ನಿತೇಶ್ ಕುರಕುಂದಿ, ಅವಿನಾಶ ಇಟೆಕ, ಗುರು ಅಂಗಡಿ, ವಿಶ್ವಜಿತ್ ಕಟ್ಟಿ, ಮಹೇಬೂಬ, ರಮೇಶ್, ಮೈಬುಬ್ ಮೋಟ್ನಳ್ಳಿ, ಅರ್ಜುನ ರಾಠೋಡ, ರಡ್ಡೆಪ್ಪ ಆಸಕ್ತಿ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.





