ಊರಿಗೆ ಹೋಗಲು ವಾಹನ ಸಿಗದಿದ್ದಕ್ಕೆ ಸೇವೆಯಿಂದ ವಜಾಗೊಂಡ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಚಾಲಕನೊಬ್ಬ ಕುಡಿದ ಮತ್ತಿನಲ್ಲಿ ಬಸ್ ನಿಲ್ದಾಣದಿಂದ ತನ್ನೂರಿಗೆ ಬಸ್ ಕದ್ದೊಯ್ದ ಘಟನೆ ಸೈದಾಪುರ ಪಟ್ಟಣದಲ್ಲಿ ನಡೆದಿದೆ.
ಮಾ.19ರಂದು ಕಾರ್ಯಾಚರಣೆ ನಡೆಸಿ ಸೈದಾಪುರ ಬಸ್ ನಿಲ್ದಾಣದಲ್ಲಿ ಕೆಂಪು ಬಸ್ ನಿಲ್ಲಿಸಲಾಗಿತ್ತು. ಚಾಲಕ ಮತ್ತು ನಿರ್ವಾಹಕ ಬಸ್ನಲ್ಲಿ ಇರಲಿಲ್ಲ. ಅದೇ ವೇಳೆ ನಿಲ್ದಾಣಕ್ಕೆ ಬಂದ ಚಾಲಕ ಮಹಿಪಾಲರೆಡ್ಡಿ ಎಂಬಾತ ಸಾರಿಗೆ ಬಸ್ನ್ನು ಸ್ವಗ್ರಾಮ ರಾಚನಳ್ಳಿಗೆ ತೆಗೆದುಕೊಂಡು ಹೋಗಿದ್ದಾನೆ.
ಬಸ್ ಕದೊಯ್ದ ಘಟನೆಯ ಸಿಸಿಟಿವಿ ದೃಶ್ಯಗಳು ಇದೀಗ ಬಯಲಾಗಿವೆ. ಕೆಕೆಆರ್ಟಿಸಿಗೆ ಸೇರಿದ ಬಸ್ ಅನ್ನು ಅದೇ ಸಂಸ್ಥೆಯಲ್ಲಿ ಚಾಲಕ ಕಂ ನಿರ್ವಾಹಕರಾಗಿದ್ದ ಮಹಿಪಾಲರೆಡ್ಡಿ ಕದ್ದೊಯ್ದಿದ್ದಾರೆ ಎಂಬುದು ತಿಳಿದು ಬಂದಿದೆ. ಹಲವು ದೂರು, ಕರ್ತವ್ಯ ಲೋಪದ ಹಿನ್ನಲೆ ಮಹಿಪಾಲರೆಡ್ಡಿಯನ್ನು ಕೆಲವು ದಿನಗಳ ಹಿಂದೆ ವಜಾಗೊಳಿಸಲಾಗಿತ್ತು.
ಸ್ವಗ್ರಾಮ ರಾಚನಳ್ಳಿಗೆ ತೆರಳಲು ಯಾವುದೇ ವಾಹನ ಸಿಗದಿದ್ದರಿಂದ ಈ ಕೃತ್ಯ ಎಸಗಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಬಳಿಕ ಪ್ರಕರಣ ಬೆಳಕಿಗೆ ಬಂದಂತೆ ಪೊಲೀಸರು ತನಿಖೆ ನಡೆಸಿ ಬಸ್ ಅನ್ನು ವಾಪಸ್ ಪಡೆದಿದ್ದಾರೆ.
ಈ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ : ಕುಡಿಯುವ ನೀರಿನ ಅಭಾವ : ಸಮರೋಪಾದಿಯಲ್ಲಿ ತಯಾರಿ ನಡೆಸಲು ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ





