ನಗರದ ಲುಂಬಿನಿ ವನದಲ್ಲಿ ದೆವ್ವವಿದೆ ಎಂಬ ಸುಳ್ಳು ವದಂತಿಯನ್ನು ಹರಡಿ ಸಾರ್ವಜನಿಕರಲ್ಲಿ ಭಯ ಮೂಡಿಸಿರುವ ಕಿಡಿಗೇಡಿಗಳ ವಿರುದ್ಧ ತಕ್ಷಣ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಸ್ವಾಭಿಮಾನಿ ಒಕ್ಕೂಟ ಒತ್ತಾಯಿಸಿ ಮನವಿ ಸಲ್ಲಿಸಿದರು.
“ಮೌಢ್ಯತೆ ಅಳಿಯಲ್ಲಿ ವೈಜ್ಞಾನಿಕತೆ ಬೆಳೆಯಲ್ಲಿ” ಎಂದು ಶೀರ್ಷಿಕೆಯಡಿ ಅಮಾವಾಸ್ಯೆದಿನದಂದು ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾನುವಾರ ಲುಂಬಿನಿ ಗಾರ್ಡನ್ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ದಲಿತ ಸಂಘಟನೆಗಳ ಸ್ವಾಭಿಮಾನಿ ಒಕ್ಕೂಟದ ಅಧ್ಯಕ್ಷ ಶರಣು ಎಸ್. ನಾಟೇಕರ್ ಮಾತನಾಡಿ, ಕಳೆದ 17 ದಿನಗಳಿಂದ ಲುಂಬಿನಿ ಉದ್ಯಾನವನದಲ್ಲಿ ಭಯಾನಕ ಶಬ್ದಗಳು ಕೇಳಿಸುತ್ತಿವೆ ಹಾಗೂ ದೆವ್ವವಿದೆ ಎಂಬ ಸುಳ್ಳು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದು ಹೇಳಿದರು. ಕಿಡಿಗೇಡಿಗಳು ಕೃತಕ ವಿಡಿಯೋಗಳನ್ನು ಸೃಷ್ಟಿಸಿ ಪ್ರವಾಸಿಗರು ಹಾಗೂ ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಜನರು ಇಂತಹ ಮೂಢನಂಬಿಕೆಗಳಿಗೆ ಮರುಳಾಗಬಾರದು ಎಂದು ಮನವಿ ಮಾಡಿದರು.

ಗೌರವಾಧ್ಯಕ್ಷ ಚಂದಪ್ಪ ಮುನಿಯಪ್ಪನೋರ್ ಮಾತನಾಡಿ, ಲುಂಬಿನಿ ವನದಲ್ಲಿ ದೆವ್ವ–ಭೂತಗಳಿವೆ ಎಂಬ ಅಪಪ್ರಚಾರ ಸಂಪೂರ್ಣ ಕಾಲ್ಪನಿಕವಾಗಿದ್ದು, ಇದು ತಥಾಗತ ಗೌತಮ ಬುದ್ಧರ ಜನ್ಮಸ್ಥಳವಾದ ಲುಂಬಿನಿ ವನದ ಹೆಸರಿಗೆ ಧಕ್ಕೆ ತರುವ ದುರುದ್ದೇಶದ ಕೃತ್ಯವಾಗಿದೆ ಎಂದು ಆರೋಪಿಸಿದರು.
ಒಕ್ಕೂಟದ ಅಧ್ಯಕ್ಷ ಕಾಶಿನಾಥ್ ನಾಟೇಕರ್ ಮಾತನಾಡಿ, ಉದ್ಯಾನವನದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಪೊಲೀಸ್ ಭದ್ರತೆ ನಿಯೋಜಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ ಹರಿಬಿಟ್ಟವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಯುವಕನ ತಲೆಗೆ ಕಲ್ಲು ಎತ್ತಿಹಾಕಿ ಬರ್ಬರ ಕೊಲೆ
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಎನ್. ದಾಸನಕೇರಿ ಮನವಿ ಪತ್ರವನ್ನು ಓದಿ ಸಲ್ಲಿಸಿದರು. ಡಾ. ಭಗವಂತ ಅನವಾರ, ಮರೆಪ್ಪ ಬುಕ್ಕಲ್, ಗುಂಡಪ್ಪ ಕಲಬುರಗಿ, ಸುರೇಶ್ ಬೊಮ್ಮುನ್, ದೇವೇಂದ್ರಪ್ಪ, ಆನಂದ್ ಮ್ಯಾಗೇರಿ, ಚಂದ್ರಕಾಂತ್ ಚಲುವಾದಿ, ರಾಹುಲ್ ಕೊಲ್ಲುರಕರ್, ಶರಣಪ್ಪ ಮಮ್ಮದರ್, ಗಿರೀಶ್ ಚಟ್ಟೇರಕರ್, ಮಹಾದೇವಪ್ಪ ಗುರುಸುಣಿಗಿ, ಧನರಾಜ್ ಕೋಲಿವಾಡ್, ಮೌನೇಶ್, ಪರಶುರಾಮ್ ಚಲುವಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





