ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ‘ಸಂಕ್ರಾಂತಿ ಸುಗ್ಗಿ ಸಂಭ್ರಮ ಜಾನಪದ ಉತ್ಸವ’ ಕಾರ್ಯಕ್ರಮವನ್ನು ವಡಗೇರಿ ತಾಲ್ಲೂಕಿನ ಗುಂಡಗುರ್ತಿ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಗುರುವಾರ ನಮ್ಮ ಕರ್ನಾಟಕ ಸೇನೆ, ವಡಗೇರಿ ತಾಲ್ಲೂಕು ಯುವ ಘಟಕದ ವತಿಯಿಂದ ಭವ್ಯವಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಸಮಾಜಸೇವಕ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಹಣಮೇಗೌಡ ಬೀರನಕಲ್ ಮಾತನಾಡಿ, ‘ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಕಲೆ, ಸಂಪ್ರದಾಯಿಕ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನೇದಿನೇ ಕ್ಷೀಣಿಸುತ್ತಿರುವ ಇಂದಿನ ಸಂದರ್ಭದಲ್ಲಿ ಇಂತಹ ಸಾಂಸ್ಕೃತಿಕ ಉತ್ಸವಗಳ ಆಯೋಜನೆ ಶ್ಲಾಘನೀಯ ಕಾರ್ಯವಾಗಿದೆ’ ಎಂದು ಹೇಳಿದರು.

‘ಹಿಂದಿನ ದಿನಗಳಲ್ಲಿ ಹಬ್ಬ–ಹರಿದಿನಗಳ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಆಟೋಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದವು. ಆದರೆ ಆಧುನಿಕತೆಯ ಭರದಲ್ಲಿ ಸಂಪ್ರದಾಯಿಕ ಕಲೆ–ಸಂಸ್ಕೃತಿಕ ಚಟುವಟಿಕೆಗಳು ಹಿಂದುಳಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಕೊರತೆಯನ್ನು ನೀಗಿಸಲು ಸಂಘ–ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಬೇಕೆಂದು’ ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ಮಾತನಾಡಿ, ‘ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಸಂಪ್ರದಾಯಿಕ ಸಂಗೀತ ಹಾಗೂ ಜಾನಪದ ಗೀತೆಗಳ ಪ್ರದರ್ಶನಗಳು ಕಡಿಮೆಯಾಗುತ್ತಿವೆ. ಪರಂಪರೆಯಿಂದ ಬಂದಿರುವ ಈ ಕಲೆಗಳನ್ನು ಉಳಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಯುವ ಘಟಕದವರು ಆಯೋಜಿಸಿರುವ ಈ ಕಾರ್ಯಕ್ರಮ ಇತರರಿಗೆ ಮಾದರಿಯಾಗಿದೆ’ ಎಂದು ಶ್ಲಾಘಿಸಿದರು.
ಅತಿಥಿಯಾಗಿ ಆಗಮಿಸಿದ್ದ ನಮ್ಮ ಕರ್ನಾಟಕ ಸೇನೆ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ಮಾತನಾಡಿ, ‘ಜಾನಪದ ಗೀತೆಗಳು ನಮ್ಮ ಬದುಕಿನ ಪ್ರತಿಬಿಂಬವಾಗಿದ್ದವು. ಆದರೆ ಇತ್ತೀಚೆಗೆ ಜಾನಪದ ಕಲೆಯನ್ನು ತಪ್ಪಾಗಿ ಅಶ್ಲೀಲ ಸಂಭಾಷಣೆಯಾಗಿ ಬಿಂಬಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಂಕ್ರಾಂತಿ ಸುಗ್ಗಿ ಉತ್ಸವದಂತಹ ಶುದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಶ್ಲಾಘನೀಯವಾಗಿದೆ ಎಂದರು. ಯುವ ಘಟಕದವರು ಸಂಘಟನೆಗೆ ಹೆಚ್ಚಿನ ಒತ್ತು ನೀಡಿದರೆ ಇನ್ನಷ್ಟು ಸಾಧನೆ ಸಾಧ್ಯವೆಂದು’ ಸಲಹೆ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಶಿವಕುಮಾರ ಹಿರೇಮಠ ವಹಿಸಿದ್ದರು. ಅಧ್ಯಕ್ಷತೆಯನ್ನು ನಕಸೇ ಜಿಲ್ಲಾಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ ವಹಿಸಿದ್ದರು.
ವೇದಿಕೆಯಲ್ಲಿ ಮಲ್ಲಿಕಾರ್ಜುನಗೌಡ, ಪೊ. ಮಲ್ಲಯ್ಯ ಗುತ್ತೇದಾರ, ದೇವಿಂದ್ರಪ್ಪ ಕೌಲಿ, ಗುತ್ತಿಗೆದಾರ ಯಮನಪ್ಪ ಪೂಜಾರಿ, ಗ್ರಾಪಂ ಸದಸ್ಯ ಮಲ್ಲಣ್ಣಗೌಡ, ಹಣಮಂತ ಸಾಲಿಮನಿ, ಗ್ರಾಪಂ ಮಾಜಿ ಅಧ್ಯಕ್ಷ ದೇವಿಂದ್ರಪ್ಪ ಮ್ಯಾಗಿನಮನಿ, ಮಾಜಿ ಸದಸ್ಯರಾದ ಯಂಕಪ್ಪ ಪೂಜಾರಿ, ಹೊನ್ನಪ್ಪ ಗೂಗಲ್, ಮೈಲಾರಪ್ಪ, ಮಲ್ಲಪ್ಪ, ರಾಜುಗೌಡ ಪೊ. ಮಹಿಪಾಲರಡ್ಡಿ ಮಾಲಿಪಾಟೀಲ್, ರಾಜುಗೌಡ ದಳಪತಿ, ನಕಸೇ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕು. ಶ್ರೀದೇವಿ ಕಟ್ಟಿಮನಿ, ವಡಗೇರಿ ತಾಲ್ಲೂಕು ಗೌರವಾಧ್ಯಕ್ಷ ನಾಗರಡ್ಡಿಗೌಡ ರಾಮನಾಳ, ತಾಲ್ಲೂಕು ಅಧ್ಯಕ್ಷ ಮಲ್ಲು ಮಾಲಕ್ ಹಾಲಗೇರಿ, ಶಹಾಪೂರ ಉಪಾಧ್ಯಕ್ಷ ಶಶಿಪಾಲರಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಕಲಬುರಗಿ | ‘ಗುಲಾಮರ ಅಪ್ಪ’ ಎಂಬ ಹೆಸರಿನ ಫೇಸ್ಬುಕ್ ಖಾತೆ ನಡೆಸುವವರ ಬಂಧನಕ್ಕೆ ದಿನೇಶ ಸುತಾರ್ ಆಗ್ರಹ
ಈ ಸಂದರ್ಭದಲ್ಲಿ ನಕಸೇ ವತಿಯಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಗ್ರಾಮೀಣ ಯುವಕರಿಗಾಗಿ ಆಯೋಜಿಸಿದ್ದ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಚಿತ್ರಕಲೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಬಿಂದು ಭೀಮಪ್ಪ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ಅಗಲಿದ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದ ಸ್ವಾಮೀಜಿಗಳಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಶಿವರಡ್ಡಿ ಸಾಲಿಮನಿ ಸ್ವಾಗತಿಸಿ ನಿರೂಪಿಸಿದರು. ಸಿದ್ದು ಪಟ್ಟೇದಾರ್ ವಂದಿಸಿದರು.





