ಯಾದಗಿರಿ ನಗರದ ಅಂಬೇಡ್ಕರ್ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿಯ ಮೇಲೆ ಶಿಕ್ಷಕಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೌನೇಶ ಎಂಬ ವಿದ್ಯಾರ್ಥಿ ಈ ಘಟನೆಯಲ್ಲಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.
ಸೋಮವಾರ ವಿದ್ಯಾರ್ಥಿ ಮೌನೇಶ ಅನುಮತಿ ಪಡೆಯದೆ ಶಾಲೆಯ ಹೊರಗೆ ಹೋಗಿದ್ದಾನೆ. ಈ ವಿಚಾರವಾಗಿ ಪ್ರಶ್ನಿಸಿದ ಶಿಕ್ಷಕಿ ರೂಪಾ ಅವರು ಏಕಾಏಕಿ ಕೋಪಗೊಂಡು ವಿದ್ಯಾರ್ಥಿಯ ಕೈಗೆ ಬಲವಾಗಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಶಿಕ್ಷಕಿಯ ಹೊಡೆತದ ತೀವ್ರತೆಗೆ ಬಾಲಕನ ಕೈ ಬಾತುಕೊಂಡಿದ್ದು (ಬಾವು), ರಾತ್ರಿಯಿಡೀ ತೀವ್ರ ನೋವಿನಿಂದ ಬಳಲಿದ್ದಾನೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಪೋಷಕರು ಶಾಲೆಗೆ ಧಾವಿಸಿ, ಶಿಕ್ಷಕಿಯ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಮಗು ತಪ್ಪು ಮಾಡಿದ್ದರೆ ಬುದ್ಧಿವಾದ ಹೇಳಬೇಕಿತ್ತು ಅಥವಾ ಪೋಷಕರಿಗೆ ಮಾಹಿತಿ ನೀಡಬೇಕಿತ್ತು. ಆದರೆ ಕೈ ಬಾವು ಬರುವಂತೆ ಹೊಡೆಯುವುದು ಯಾವ ನ್ಯಾಯ?’ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಶಾಲೆಗೆ ನುಗ್ಗಿ ಪೀಠೋಪಕರಣ ಧ್ವಂಸಗೊಳಿಸಿದ ದುಷ್ಕರ್ಮಿಗಳು
ಸರ್ಕಾರಿ ಶಾಲೆಗಳಲ್ಲಿ ಇಂತಹ ಘಟನೆಗಳು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣ ತನಿಖೆ ನಡೆಸಿ, ಹಲ್ಲೆ ನಡೆಸಿದ ಶಿಕ್ಷಕಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.





