ಸಾಮಾಜಿಕ ಸಮಾನತೆ, ಮಾನವ ಗೌರವ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ರಕ್ಷಣೆಗೆ ಆಗ್ರಹಿಸಿ ಗುರುವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮನುಸ್ಮೃತಿ ದಹನ ಕಾರ್ಯಕ್ರಮದೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
1927ರಲ್ಲಿ ಮಹಾರಾಷ್ಟ್ರದ ಮಹಾಡದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಡೆದ ಐತಿಹಾಸಿಕ ಮನುಸ್ಮೃತಿ ದಹನದ ಸ್ಮರಣಾರ್ಥವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜಾತಿ ಹಾಗೂ ಲಿಂಗ ಆಧಾರಿತ ತಾರತಮ್ಯವನ್ನು ಪೋಷಿಸುವ ಮನುವಾದಿ ಚಿಂತನೆಗಳ ವಿರುದ್ಧ ಸಂಘಟಿತ ಹೋರಾಟದ ಸಂಕೇತವಾಗಿ ಮನುಸ್ಮೃತಿಯನ್ನು ದಹಿಸಲಾಯಿತು.
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್, ‘ಮನುಸ್ಮೃತಿ ಎಂಬುದು ಸಾವಿರಾರು ವರ್ಷಗಳಿಂದ ಸಮಾಜದಲ್ಲಿ ಜಾತಿ ಭೇದ, ಅಸ್ಪೃಶ್ಯತೆ ಹಾಗೂ ಮಹಿಳಾ ದಮನಕ್ಕೆ ಶಾಸ್ತ್ರೀಯ ಬೆಂಬಲ ನೀಡಿದ ಅಲಿಖಿತ ಸಂವಿಧಾನವಾಗಿದ್ದು, ಅದನ್ನು ದಹನಗೊಳಿಸುವ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಮೌಲ್ಯಗಳನ್ನು ಸಮಾಜದ ಮುಂದೆ ಪ್ರತಿಪಾದಿಸಿದ್ದರು’ ಎಂದು ಹೇಳಿದರು.
‘ಇಂದು ನಾವು ಕೇವಲ ಒಂದು ಗ್ರಂಥವನ್ನಲ್ಲ, ನಮ್ಮೊಳಗೆ ಇನ್ನೂ ಉಳಿದಿರಬಹುದಾದ ಮನುಸ್ಮೃತಿಯ ಮನೋಭಾವನೆ, ಅಸಮಾನತೆಯ ಚಿಂತನೆ ಹಾಗೂ ಜಾತಿವಾದಿ ಪಳೆಯುಳಿಕೆಗಳನ್ನು ಸಂಪೂರ್ಣವಾಗಿ ಸುಟ್ಟು ಹಾಕಬೇಕಿದೆ. ಆ ಅಲಿಖಿತ ಸಂವಿಧಾನ ನಾಶವಾಗದೆ ಬಾಬಾಸಾಹೇಬ್ ಅವರು ರೂಪಿಸಿ ದೇಶಕ್ಕೆ ನೀಡಿರುವ ಲಿಖಿತ ಸಂವಿಧಾನದ ಸಂಪೂರ್ಣ ಅನುಷ್ಠಾನ ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಸಂವಿಧಾನವೇ ಧರ್ಮಗ್ರಂಥವಾಗಬೇಕು. ಸಂವಿಧಾನದಲ್ಲಿ ಅಡಕವಾಗಿರುವ ಸಮಾನತೆ, ಸಾಮಾಜಿಕ ನ್ಯಾಯ, ಮಾನವ ಗೌರವ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಜಾರಿಗೊಳಿಸುವ ಹೊಣೆಗಾರಿಕೆ ಸರ್ಕಾರಕ್ಕೂ ಸಮಾಜಕ್ಕೂ ಇದೆ. ಸಂವಿಧಾನ ವಿರೋಧಿ ಮನುವಾದಿ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಯಲಿದೆ’ ಎಂದು ಎಚ್ಚರಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಮನುಸ್ಮೃತಿ ದಹನದಿಂದಲೆ ಸಮಸ್ಥರ ಉನ್ನತಿ ; ಕರಾದಸಂಸ ಬೃಹತ್ ಪ್ರತಿಭಟನೆ
ಪ್ರತಿಭಟನೆಯಲ್ಲಿ ಗೋಪಾಲ ತೆಳಗೇರಿ, ಭೀಮರಾಯ ಲಿಂಗೇರಿ, ಭೀಮರಾಯ ಠಾಣಗುಂದಿ, ಸೈದಪ್ಪ ಕೂಯಿಲೂರ, ಭೀಮರಾಯ ಹೊಸ್ಮನಿ, ಬಾಸುಮೀಯಾ ವಡಿಗೇರಾ, ಚಂದ್ರಕಾಂತ ಗೀರೆಪ್ಪನೋರ್, ನಿಂಗಪ್ಪ ಕೊಲ್ಲೂರಕರ್, ಪರಶುರಾಮ ಒಡೆಯರ್, ಗೌತಮ ಕ್ರಾಂತಿ, ಮಲ್ಲಿಕಾರ್ಜುನ ಹತ್ತಿಕುಣಿ, ಸಂಪತ್ ಚಿನ್ನಾಕರ್, ವಸಂತ ಸುಂಗಲಕರ್, ಹಣಮಂತ ಮೀಲ್ಮೀ ಸೇರಿದಂತೆ ಅನೇಕ ದಲಿತ ಮುಖಂಡರು, ಹೋರಾಟಗಾರರು ಹಾಗೂ ಕಾರ್ಯಕರ್ತರು ಭಾಗವಹಿಸಿ ಮನುವಾದದ ವಿರುದ್ಧ ಘೋಷಣೆಗಳನ್ನು ಕೂಗಿದರು.





